ಪೊಲೀಸ್​ ಠಾಣೆ ಮೆಟ್ಟಿಲೇರಿದ ಜನಿವಾರ ದಂಗಲ್: ವಿವಾದ ಬೆನ್ನಲ್ಲೇ ಮೂವರು ವಶಕ್ಕೆ

ರಾಜ್ಯದಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಿದ್ಯಾರ್ಥಿ ನೀಡಿದ ದೂರಿನ ಅನ್ವಯ ಮಡಿವಾಳ ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಸದ್ಯ ಮೂವರು ಸಿಬ್ಬಂದಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೊಂದೆಡಡೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​​ರನ್ನು ಭೇಟಿ ಮಾಡಿ ವಿಪಕ್ಷ ನಾಯಕ ಆರ್. ಅಶೋಕ್ ಕೂಡ ದೂರು ನೀಡಿದ್ದಾರೆ.

ಪೊಲೀಸ್​ ಠಾಣೆ ಮೆಟ್ಟಿಲೇರಿದ ಜನಿವಾರ ದಂಗಲ್: ವಿವಾದ ಬೆನ್ನಲ್ಲೇ ಮೂವರು ವಶಕ್ಕೆ
ಜನಿವಾರ ವಿವಾದ
Image Credit source: tv9 kannada
Edited By:

Updated on: Apr 24, 2026 | 7:07 PM

ಬೆಂಗಳೂರು, ಏಪ್ರಿಲ್​ 24: ಕರ್ನಾಟಕದಲ್ಲಿ ಮತ್ತೆ ಜನಿವಾರ ದಂಗಲ್ (Janivara Row) ಮುನ್ನೆಲೆಗೆ ಬಂದಿದೆ. ಸಿಇಟಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಲು ನಿಯಮ ಇಲ್ಲದಿದ್ದರೂ ತೆಗೆಸಿರೋದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಇದೀಗ ಮಡಿವಾಳ ಠಾಣೆಯ ಪೊಲೀಸರಿಂದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ವಿದ್ಯಾರ್ಥಿ ನೀಡಿದ ದೂರಿನ ಅನ್ವಯ ಕೇಸ್ ದಾಖಲಿಸಿಕೊಂಡು ಪರೀಕ್ಷಾ ಪರಿವೀಕ್ಷಕರಾದ ಸರಿತಾ, ಗಿರಿಜಾ ಹಾಗೂ ಪರೀಕ್ಷೆ ಕೇಂದ್ರದ ಉಸ್ತುವಾರಿ ಸುಧಾಕರ್​​ರನ್ನು ವಶಕ್ಕೆ ಪಡೆಯಲಾಗಿದೆ. ಬಿಎನ್‌ಎಸ್‌ ಸೆಕ್ಷನ್ 299, 302ರಡಿ ಕೇಸ್​​ ದಾಖಲಾಗಿದೆ.

ಇನ್ನು ವಿವಾದ ಕುರಿತಾಗಿ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​​ರನ್ನು ಭೇಟಿ ಮಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ ಕೂಡ ಪೋಷಕರ ಪರವಾಗಿ ದೂರು ನೀಡಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದಕ್ಕೆ ಸರ್ಕಾರದ ಕುಮ್ಮಕ್ಕು ಇದೆ: ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ 

ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆರ್​​. ಅಶೋಕ್, ಜನಿವಾರ ತೆಗಿಸದಂತೆ ಹೈಕೋರ್ಟ್​ ಆದೇಶ ನೀಡಿದ್ರೂ ಹೀಗೆ ಮಾಡಿದ್ರೆ ಏನು? ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ. ಇದಕ್ಕೆ ಸರ್ಕಾರದ ಕುಮ್ಮಕ್ಕು ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಸಿಇಟಿ ಕೇಂದ್ರದಲ್ಲಿ ವಿದ್ಯಾರ್ಥಿ ಜನಿವಾರ ತೆಗೆಸಿದ ಆರೋಪ: ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ಅಮಾನತು

ಸಿಎಂಗೆ ನಾಮ, ತಾಳಿ, ಜನಿವಾರ ಕಂಡರೆ ಆಗುವುದಿಲ್ಲ. ನಾನು ಜಿಲ್ಲಾಧಿಕಾರಿ ಜತೆಗೂ ಮಾತಾಡಿದೆ. ಬೇಕಂತಲೇ ಮಾಡಿದ್ದಾರೆ ಎಂಬುವುದು ಸ್ಪಷ್ಟವಾಗಿದೆ. ಹದಿನೈದು ಇಪ್ಪತ್ತು ಜನರಿಗೆ ಹೀಗೆ ಮಾಡಿದ್ದಾರೆ. ಇದು ಇಲ್ಲಿಗೆ ಕೊನೆಯಾಗಬೇಕು. ಕರ್ನಾಟಕ ಸಂಸ್ಕಾರ ಇರುವ ನಾಡು. ಪುಲ್ವಾಮದಲ್ಲಿ ಘಟನೆ ನಡೆದು ನಿನ್ನೆಗೆ ಒಂದು ವರ್ಷ, ನೀವು ಜನಿವಾರ ತೆಗೆಸುತ್ತಿದ್ದೀರಾ, ಅದಕ್ಕೂ ಇದಕ್ಕೂ ವ್ಯತ್ಯಾಸವೇನು. ನಿಮಗೂ ಪಾಕಿಸ್ತಾನದವರಿಗೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದು, ರಾಜ್ಯದಲ್ಲಿ ಈ ಸರ್ಕಾರ ಬಂದಾಗಿನಿಂದ ಹಿಂದೂಗಳ ಧಾರ್ಮಿಕ ಭಾವನೆಗಳು ಮತ್ತು ಸಂಕೇತಗಳ ವಿರುದ್ಧ ಇದೇ ತರ ಮಾಡುತ್ತಿದ್ದಾರೆ. ಕೆಪಿಎಸ್​​ಸಿ ನಡೆದಾಗ ಕಳೆದ ವರ್ಷ ತಾಳಿ ತೆಗೆಸಿದ್ದರು. ಇದು ಮೂರನೇ ಸಲ.  ಇದು ರಾಜ್ಯ ಸರ್ಕಾರದ ಡೈರೆಕ್ಷನ್​ನಲ್ಲಿ ಹೀಗೆ ಆಗಿದೆ. ಮಕ್ಕಳು ಈ ಒಂದು ಪರೀಕ್ಷೆಗೆ ಎರಡು ವರ್ಷ ಕಷ್ಟಪಟ್ಟಿರುತ್ತಾರೆ. ಸಂವಿಧಾನ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರಿನ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಸಿಬ್ಬಂದಿ: ಸಿಇಟಿ ಪರೀಕ್ಷೆಯೊಂದಿಗೇ ಮತ್ತೆ ಶುರುವಾಯ್ತು ವಿವಾದ

ಬೆಳಗ್ಗೆ ದೂರು ನೀಡಲಾಗಿತ್ತು. ಆದರೆ ನಾವು ಕಮಿಷನರ್ ಕಚೇರಿಗೆ ಬರುತ್ತೇವೆ ಎಂದು ಹೇಳುವ ತನಕ ಎಫ್​​ಐಆರ್​ ಆಗಿರಲಿಲ್ಲ. ಈಗ ಯಾರೋ ಮೂವರ ಅರೆಸ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಯಾರು ಈ ಸೆಂಟರ್ ಹೆಡ್ ಇರುವವರಿಗೆ ಪಾಠ ಕಲಿಸಬೇಕು. ರಾಜ್ಯದಲ್ಲಿ ಯಾವದೇ ಕಡೆ ಈ ರೀತಿ ಆಗಬಾರದು, ಅಂತಹ ಮೆಸೇಜ್ ಪಾಸ್ ಮಾಡುವಂತೆ ಕ್ರಮತೆಗೆದುಕೊಳ್ಳುವ ಬಗ್ಗೆ ಹೇಳಿದ್ದೇವೆ. ಅವರು ಕ್ರಮತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us