AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBMP Election: ಬಿಬಿಎಂಪಿ ಚುನಾವಣೆ ವಿಚಾರಣೆ ಜುಲೈ 26ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್

ಬಿಬಿಎಂಪಿ ಚುನಾವಣೆ ಪ್ರಕರಣದ ವಿಚಾರಣೆ ನಡೆಯುತ್ತಿರುವ ಚೀಫ್ ಜಸ್ಟೀಸ್ ಎನ್​ ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆಯನ್ನು ಮುಂದಿನ ಮಂಗಳವಾರಕ್ಕೆ ಮುಂದೂಡಿತು.

BBMP Election: ಬಿಬಿಎಂಪಿ ಚುನಾವಣೆ ವಿಚಾರಣೆ ಜುಲೈ 26ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್
ಬಿಬಿಎಂಪಿ ಕಚೇರಿ
TV9 Web
| Updated By: ಸಾಧು ಶ್ರೀನಾಥ್​|

Updated on:Jul 22, 2022 | 5:06 PM

Share

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (BBMP Election) ಚುನಾವಣೆ ನಡೆಸುವ ಪ್ರಕರಣದ ವಿಚಾರಣೆಯನ್ನ ಸುಪ್ರೀಂಕೋರ್ಟ್ (supreme court) ಜುಲೈ 26ಕ್ಕೆ ಮುಂದೂಡಿದೆ. ಪ್ರಕರಣದ ವಿಚಾರಣೆ ನಡೆಯುತ್ತಿರುವ ಚೀಫ್ ಜಸ್ಟೀಸ್ ಎನ್​ ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆಯನ್ನು ಮುಂದಿನ ಮಂಗಳವಾರಕ್ಕೆ ಮುಂದೂಡಿತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike – BBMP) ಚುನಾವಣೆ ನಡೆಸುವಂತೆ ಕರ್ನಾಟಕ ಸರ್ಕಾರಕ್ಕೆ ನೀಡಿದ್ದ ಎಂಟು ವಾರಗಳ ಗಡುವು ಅಂತ್ಯಗೊಂಡ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ಇಂದು (ಜುಲೈ 22) ವಿಚಾರಣೆ ಕೈಗೆತ್ತಿಕೊಂಡಿತ್ತು. ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಬಿಬಿಎಂಪಿ ಪ್ರಕರಣದ ವಿಚಾರಣೆ ನಡೆಯಿತು.

ಈ ಮಧ್ಯೆ, ಚುನಾವಣೆ ನಡೆಸಲು ಮತ್ತಷ್ಟು ಕಾಲಾವಕಾಶ ಕೇಳಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ವಾರ್ಡ್​ಗಳ ಮರುವಿಂಗಡಣೆಯಾಗಿದೆಯಾದರೂ ಈವರೆಗೆ ರಾಜ್ಯ ಸರ್ಕಾರವು ಮೀಸಲಾತಿ ಪ್ರಕಟಿಸಲು ಆಗಿಲ್ಲ. ಮೀಸಲಾತಿ ಪ್ರಕಟಿಸಲು ಕನಿಷ್ಠ 4 ವಾರ ಸಮಯ ಕೇಳುವ ಸಾಧ್ಯತೆಯಿದೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಲು ಅರ್ಜಿದಾರರಾದ ಶಿವರಾಜ್ ಮತ್ತು ವಾಜಿದ್ ಸಿದ್ಧತೆ ಮಾಡಿಕೊಂಡಿದ್ದಾರೆ.

ಶೇ 33ರ ಮೀಸಲಾತಿಗೆ ಭಕ್ತವತ್ಸಲ ಸಮಿತಿ ಶಿಫಾರಸು

ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ವಿವಿಧ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲು ಕರ್ನಾಟಕ ಸರ್ಕಾರವು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ಅಧ್ಯಕ್ಷತೆಯ ಆಯೋಗವನ್ನು ರಚಿಸಿತ್ತು. ಈ ಆಯೋಗವು ಹಿಂದುಳಿದ ವರ್ಗಗಳ ‘ಎ’ ಮತ್ತು ‘ಬಿ’ ಪ್ರವರ್ಗದ ಸಮುದಾಯಗಳಿಗೆ ಈಗಿರುವ ರಾಜಕೀಯ ಮೀಸಲಾತಿಯನ್ನು ಶೇ 33ಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಯೋಗದ ಸದಸ್ಯರು ಅಂತಿಮ ವರದಿ ಸಲ್ಲಿಸಿದ್ದಾರೆ.

ಹೈಕೋರ್ಟ್​ ತೀರ್ಪು ಪ್ರಶ್ನಿಸಿ ಮೇಲ್ಮನವಿ

ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿಯು ಸೆಪ್ಟೆಂಬರ್ 10, 2019ಕ್ಕೆ ಪೂರ್ಣಗೊಂಡಿತ್ತು. ಶೀಘ್ರದಲ್ಲಿ ಚುನಾವಣೆ ನಡೆಸಬೇಕೆಂಬ ಒತ್ತಾಯಗಳು ಕೇಳಿ ಬಂದಿತ್ತು. ಈ ಸಂಬಂಧ ಡಿಸೆಂಬರ್ 4, 2020ರಂದು ಕರ್ನಾಟಕ ಹೈಕೋರ್ಟ್​ ಆದೇಶ ಹೊರಡಿಸಿ, ‘ಆರು ವಾರಗಳಲ್ಲಿ ಚುನಾವಣೆ ನಡೆಸಬೇಕು’ ಎಂದು ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಆದರೆ ಡಿಸೆಂಬರ್ 18, 2020ರಂದು ಈ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು. ಅಂದಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಬಿಬಿಎಂಪಿ ಚುನಾವಣೆಯ ಗಡುವು ಮುಂದಕ್ಕೆ ಹೋಗುತ್ತಲೇ ಇದೆ.

ಶಾಸಕರ ಒತ್ತಡಕ್ಕೆ ಮಣಿಯಿತೇ ಸರ್ಕಾರ?

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯು ಮುಂದಿನ ವರ್ಷ ನಡೆಯಲಿದೆ. 28 ಸದಸ್ಯ ಬಲವಿರುವ ಬೆಂಗಳೂರು ನಗರವು ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮಹತ್ವದ ಪಾತ್ರ ನಿರ್ವಹಿಸಲಿದೆ. ಪಾಲಿಕೆಯಲ್ಲಿ ಸದಸ್ಯರು ಇಲ್ಲದಿದ್ದರೆ ಆಕಾಂಕ್ಷಿಗಳನ್ನು ವಿಧಾನಸಭೆ ಚುನಾವಣೆ ವೇಳೆ ಅನುಕೂಲಕ್ಕೆ ತಕ್ಕಂತೆ ದುಡಿಸಬಹುದು ಎನ್ನುವ ಕಾರಣಕ್ಕೆ ಬಿಬಿಎಂಪಿ ಚುನಾವಣೆ ಮುಂದೂಡಬೇಕು ಎಂದು ಎಲ್ಲ ಪಕ್ಷಗಳ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ.

Published On - 4:37 pm, Fri, 22 July 22