ಹುಡುಗಿಗಾಗಿ ವಿಧಾನಸೌಧ ಮುಂದೆ ಹೊಡೆದಾಡಿಕೊಂಡ ನೇಪಾಳಿ ಗ್ಯಾಂಗ್ ಅಂದರ್
ಕಳೆದ ಭಾನುವಾರ ಬೆಂಗಳೂರಿನ ವಿಧಾನಸೌಧದ ಮುಂದೆ ನಡೆದ ಗುಂಪು ಗಲಾಟೆ ಪ್ರಕರಣದಲ್ಲಿ 11 ನೇಪಾಳಿ ಯುವಕರನ್ನು ಬಂಧಿಸಲಾಗಿದೆ. ರೀಲ್ಸ್ ಮಾಡುವ ಹುಚ್ಚಿನಿಂದ ಬಂದಿದ್ದ ಎರಡು ಗುಂಪುಗಳ ನಡುವೆ ಯುವತಿ ಕೀಚಾಯಿಸಿದ ವಿಚಾರವಾಗಿ ಮಾರಾಮಾರಿ ನಡೆದಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಬೆಂಗಳೂರು, ನವೆಂಬರ್ 21: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ (Vidhana Soudha) ಮುಂದೆ ಗುಂಪು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ನೇಪಾಳಿ ಯುವಕರನ್ನು (Nepali Gang) ಪೊಲೀಸರು ಬಂಧಿಸಿದ್ದಾರೆ. ಘಟನೆ ಹಿಂದೆ ಹಲವು ರೋಚಕ ವಿಚಾರಗಳು ಬೆಳಕಿಗೆ ಬಂದಿವೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಕಳೆದ ಭಾನುವಾರ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧ ಮುಂಭಾಗ ಎರಡು ಗುಂಪುಗಳ ನಡುವೆ ಭೀಕರ ಮಾರಾಮಾರಿ ನಡೆದಿತ್ತು. ವಿಧಾನಸೌಧ ಲೈಟಿಂಗ್ಸ್ ನೋಡಲು ಬಂದಿದ್ದ ನೇಪಾಳ ಮೂಲದ ಎರಡು ಗುಂಪಿನ ಯುವಕರು ಹೊಡೆದಾಡಿಕೊಂಡು ಗಲಾಟೆ ಮಾಡಿದ್ದರು. ನೇಪಾಳಿ ಯುವಕರ ಗಲಾಟೆ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಅಲ್ಲದೇ ಅತಿ ಹೆಚ್ಚು ಭದ್ರತೆ ಇರುವಂತಹ ವಿಧಾನಸೌಧ ಮುಂಭಾಗದಲ್ಲಿ ಇಂತಹ ಘಟನೆ ನಡೆದಿದ್ದಕ್ಕೆ ಪೊಲೀಸ್ ಇಲಾಖೆಗೆ ಕೂಡ ತಲೆ ಬೀಸಿ ತಂದ್ದೊಡ್ಡಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿದ ವಿಧಾನಸೌಧ ಠಾಣೆ ಪೊಲೀಸರು 11 ಮಂದಿ ಯುವಕರನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ಒಡ ಹುಟ್ಟಿದವನಿಗೇ ಚಟ್ಟ ಕಟ್ಟಿದ ಅಣ್ಣ: ಊರಿನಿಂದ ಕರೆಸಿ ತಮ್ಮನ ಡೆಡ್ಲಿ ಮರ್ಡರ್
ಅಂದಹಾಗೇ ಈ ನೇಪಾಳಿ ಯುವಕರಿಗೆ ರೀಲ್ಸ್ ಮಾಡುವ ಹುಚ್ಚು. ಪ್ರತಿ ಶನಿವಾರ ಮತ್ತು ಭಾನುವಾರ ಕೆಲಸಗಳಿಗೆ ರಜೆ ಇರುವುದರಿಂದ ಹಾಗೂ ಅವರ ಕೆಲಸದ ಶಿಫ್ಟ್ ಇಲ್ಲದಾಗ ನಗರದ ಪ್ರಮುಖ ಆಕರ್ಷಣಿಯ ಸ್ಥಳಗಳಿಗೆ ಹೋಗಿ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಇದರಿಂದ ನೇಪಾಳದಲ್ಲಿ ಹೆಚ್ಚು ವೀವ್ಸ್ ಕೂಡ ಬರುತ್ತಂತೆ.
ಯುವತಿಯನ್ನ ಕೀಚಾಯಿಸಿದ ಗ್ಯಾಂಗ್
ಕಳೆದ ಭಾನುವಾರ ಸಂಜೆ ವಿಧಾನಸೌಧ ಲೈಟಿಂಗ್ಸ್ ನೋಡಿಕೊಂಡು ರೀಲ್ಸ್ ಮಾಡಲು ಒಂದು ಗ್ಯಾಂಗ್ ಬಂದಿದೆ. ರೀಲ್ಸ್ ಮಾಡುತ್ತಿರುವ ವಿಚಾರ ತಿಳಿದು ಇನ್ನೊಂದು ಗ್ಯಾಂಗ್ ಕೂಡ ಅಲ್ಲಿಗೆ ಬಂದಿದೆ. ಈ ವೇಳೆ ಒಂದು ಗ್ಯಾಂಗ್ನ ಯುವತಿಯನ್ನ ಕೀಚಾಯಿಸಿದರು ಅಂತಾ ಎರಡು ಗ್ಯಾಂಗ್ ನಡುವೆ ಗಲಾಟೆಯಾಗಿದೆ. ಹಾಗೂ ಈ ಹಿಂದೆ ಮೊಬೈಲ್ ಕಿತ್ತುಕೊಂಡು ಗಲಾಟೆ ಮಾಡಲಾಗಿತ್ತಂತೆ, ಎರಡ್ಮೂರು ವಿಚಾರಕ್ಕೆ ಎರಡು ಗುಂಪಿನ ಯುವಕರು ಕೈಗೆ ಸಿಕ್ಕ ವಸ್ತುಗಳು, ಹೆಲ್ಮೆಟ್ನಿಂದ ಹೊಡೆದಾಡಿಕೊಂಡಿದ್ದಾರೆ.
ಬಳಿಕ ಪೊಲೀಸರು ವಿಡಿಯೋದಲ್ಲಿದ್ದ ಯುವಕರನ್ನ ಪತ್ತೆ ಹಚ್ಚಿ 11 ಜನರನ್ನ ಬಂಧಿಸಿದ್ದಾರೆ. ಧರ್ಮೇಂದರ್, ರಾಹುಲ್ ಸಿಂಗ್, ಚಾವಿ, ಮನೋಜ್ ಶಾಹಿ, ಉಪೇಂದ್ರ ಚೌಲಾಗೈ, ಸುದೀಪ್ ಅಧಿಕಾರಿ ಸೇರಿ 11 ಮಂದಿಯನ್ನ ಬಂಧಿಸಲಾಗಿದೆ.
ಇದನ್ನೂ ಓದಿ: ಜೀವ ತೆಗೆದ ಫ್ಲೆಕ್ಸ್: ಗೆಳೆಯನ ಮದ್ವೆಗೆಂದು ಜರ್ಮನಿಯಿಂದ ಬಂದ ಯುವಕ ದುರಂತ ಸಾವು
ಇನ್ನು ಬಂಧಿತ ಆರೋಪಿಗಳು, ಬಾಣಸವಾಡಿ ಸುತ್ತಮುತ್ತ ಮನೆಗಳನ್ನ ಮಾಡಿಕೊಂಡು ವಾಸವಾಗಿದ್ದಾರೆ. ಹೊಟೇಲ್, ಸೆಕ್ಯುರಿಟಿ ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ರೀಲ್ಸ್ ಹುಚ್ಚಿಗಾಗಿ ಸಿಟಿ ಎಲ್ಲಾ ತಿರುಗುಡುತ್ತಾ ವಿಧಾನಸೌಧ ಬಳಿ ಗಲಾಟೆ ಮಾಡಿಕೊಂಡಿದ್ದರು ಅಂತಾ ಗೊತ್ತಾಗಿದೆ. ಸದ್ಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



