
ಬೆಂಗಳೂರು, ಜುಲೈ 29: ಸಾಮಾನ್ಯವಾಗಿ 90 ವರ್ಷ ದಾಟಿದ ಮೇಲೆ ಹೆಚ್ಚಿನವರು ಮನೆಯಲ್ಲೇ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಆದರೆ ಬೆಂಗಳೂರಿನ 97 ವರ್ಷದ ವೃದ್ಧ ಎನ್.ಎಸ್. ದತ್ತಾತ್ರೇಯ (N S Dattatreya) ಅವರಿಗೆ ಓಟದ ಅಂಗಳದಲ್ಲಿ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ. ತಮ್ಮ 90ನೇ ವಯಸ್ಸಿನಲ್ಲಿ ಓಟ ಆರಂಭಿಸಿದ ಈ ‘ಮ್ಯಾರಥಾನ್ ತಾತ’, ಇಂದು ದೇಶಾದ್ಯಂತ ಸಾವಿರಾರು ಯುವಕರಿಗೆ ದೈಹಿಕ ಫಿಟ್ನೆಸ್ಗೆ ದಾರಿದೀಪವಾಗಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (SBM) ಮಾಜಿ ಮ್ಯಾನೇಜರ್ ಆಗಿರುವ ದತ್ತಾತ್ರೇಯ ಅವರು 1989ರಲ್ಲಿ ನಿವೃತ್ತರಾಗಿದ್ದರು. 2019ರ ಜನವರಿಯಲ್ಲಿ ನಡೆದ ‘ನಮೋಥಾನ್’ ಓಟದಲ್ಲಿ ಪಾಲ್ಗೊಂಡು ಸನ್ಮಾನಿತರಾದ ನಂತರ, 90ನೇ ವಯಸ್ಸಿನಲ್ಲಿ ಓಡಲು ಸಾಧ್ಯವಾದರೆ ಸುಮ್ಮನೆ ಏಕೆ ಕುಳಿತುಕೊಳ್ಳಬೇಕು? ಎಂಬ ಆಲೋಚನೆ ಅವರಲ್ಲಿ ಮೂಡಿತು. ಅಲ್ಲಿಂದ ಪ್ರಾರಂಭವಾದ ಅವರ ಎರಡನೇ ಇನಿಂಗ್ಸ್ನಲ್ಲಿ ಈವರೆಗೆ 300ಕ್ಕೂ ಹೆಚ್ಚು ಮ್ಯಾರಥಾನ್, ವಾಕಥಾನ್ ಮತ್ತು ಫಿಟ್ನೆಸ್ ಸ್ಪರ್ಧೆಗಳನ್ನು ಪೂರ್ಣಗೊಳಿಸಿದ್ದಾರೆ.
ಕೇವಲ ಸ್ಥಳೀಯ ಓಟಗಳಲ್ಲದೆ, ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿ 2019ರ ಮಲೇಷ್ಯಾ ಕೂಟದಲ್ಲಿ 5 ಚಿನ್ನದ ಪದಕ ಹಾಗೂ 2025ರ ಚೆನ್ನೈ ಕೂಟದಲ್ಲಿ 4 ಚಿನ್ನದ ಪದಕಗಳನ್ನು ಗೆದ್ದು ಬೀಗಿದ್ದಾರೆ. ಇದರ ಜೊತೆಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ 28ಕ್ಕೂ ಹೆಚ್ಚು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ದಿನವೂ ವಾಕಿಂಗ್, ರನ್ನಿಂಗ್, ಟ್ರೆಡ್ಮಿಲ್ ಮತ್ತು ಸೈಕ್ಲಿಂಗ್ ಮಾಡುವ ದತ್ತಾತ್ರೇಯ ಅವರು ಶುದ್ಧ ಸಸ್ಯಾಹಾರಿ. “ಆರೋಗ್ಯವೇ ನಿಜವಾದ ಸಂಪತ್ತು. ಪೋಷಕರು ತಮ್ಮ ಮಕ್ಕಳಿಗೆ ನೀಡಬಹುದಾದ ಶ್ರೇಷ್ಠ ಕೊಡುಗೆ ಎಂದರೆ ಉತ್ತಮ ಶಿಕ್ಷಣ ಮತ್ತು ವೃದ್ಧಾಪ್ಯದಲ್ಲಿ ಮಕ್ಕಳ ಮೇಲೆ ಹೊರೆಯಾಗದಂತೆ ತಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು” ಎಂದು ಅವರು ಯುವ ಪೀಳಿಗೆಗೆ ಕಿವಿಮಾತು ಹೇಳುತ್ತಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ