
ಬೆಂಗಳೂರು, ಅಕ್ಟೋಬರ್ 13: ವಿಧಾನಸೌಧದಲ್ಲಿ (Vidhana Soudha) ಫೆ.27ರಿಂದ ಮಾರ್ಚ್ 3ರವರೆಗೆ ನಡೆದಿದ್ದ 5 ದಿನದ ಪುಸ್ತಕಮೇಳಕ್ಕೆ (book mela) ಬರೋಬ್ಬರಿ 4.50 ಕೋಟಿ ರೂ. ಹಣ ವೆಚ್ಚವಾಗಿದೆ. ಆ ಮೂಲಕ ಅಭಿವೃದ್ಧಿ ಕೆಲಸಕ್ಕೆ ಹಣವಿಲ್ಲ ಎನ್ನುವ ಸರ್ಕಾರದಿಂದ ದುಂದುವೆಚ್ಚ ಉಂಟಾಗಿರುವುದು ಬಹಿರಂಗಗೊಂಡಿದೆ. ಪುಸ್ತಕಮೇಳ ಹೆಸರಿನಲ್ಲಿ ವಿಧಾನಸೌಧದ ಸಚಿವಾಲಯ ಬೇಕಾಬಿಟ್ಟಿ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ.
ಐದು ದಿನದ ಪುಸ್ತಕಮೇಳಕ್ಕೆ ಬರೋಬ್ಬರಿ 4.50 ಕೋಟಿ ರೂ. ವೆಚ್ಚ ಖರ್ಚಾಗಿರುವುದು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳಿಂದ ದುಂದುವೆಚ್ಚ ಬಯಲಾಗಿದೆ. 4.50 ಕೋಟಿ ರೂ. ವೆಚ್ಚದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ವಿಧಾನಸೌಧದ ಪುಸ್ತಕ ಮೇಳಕ್ಕೆ ಓದುಗರಿಂದ ಭರ್ಜರಿ ರೆಸ್ಪಾನ್ಸ್: ವೀಕೆಂಡ್ನಲ್ಲಿ ಜನರಿಂದ ತುಂಬಿ ತುಳುಕಿದ ಶಕ್ತಿ ಸೌಧ
ಫೆ.27ರಿಂದ ಮಾರ್ಚ್ 3ರವರೆಗೆ ವಿಧಾನಸೌಧ ಆವರಣದಲ್ಲಿ 5 ದಿನ ಪುಸ್ತಕ ಮೇಳ ನಡೆದಿತ್ತು. ಆ ಮೂಲಕ ಮೊದಲ ಬಾರಿಗೆ ಶಕ್ತಿಸೌಧದಲ್ಲಿ ಸಾಹಿತ್ಯ ಜಾತ್ರೆ ಆಯೋಜಿಸಲಾಗಿತ್ತು. ಪುಸ್ತಕ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಈ ವೇಳೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಪುಸ್ತಕ ಪ್ರಿಯರಿಗೆ ಇದೊಂದು ಹಬ್ಬವಾಗಿದ್ದು, ಓದುವುದರಿಂದ ಮಾತ್ರ ಜ್ಞಾನ ವಿಕಾಸ ಆಗುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: ಸಾರ್ವಜನಿಕರಿಗೂ ಇನ್ಮುಂದೆ ವಿಧಾನಸೌಧ ವೀಕ್ಷಣೆಗೆ ಅವಕಾಶ: ರಾಜ್ಯ ಸರ್ಕಾರದ ವಿನೂತನ ಪ್ರಯತ್ನ
ಪುಸ್ತಕ ಮೇಳದಲ್ಲಿ ರಾಜ್ಯ ಹಾಗೂ ಅಂತಾರಾಜ್ಯ ಸೇರಿ ಸುಮಾರು 120ಕ್ಕೂ ಹೆಚ್ಚು ಪ್ರಕಾಶಕರು ಭಾಗಿ ಆಗಿದ್ದರು. ಪ್ರತಿನಿತ್ಯ ಸಂಜೆ 5 ಗಂಟೆ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿತ್ತು. 150 ಮಳಿಗೆ ತೆರೆಯಲು ಮಾತ್ರ ಅವಕಾಶ ನೀಡಲಾಗಿತ್ತು. ವಿವಿಧ ಅಕಾಡೆಮಿಗಳ ಮಳಿಗೆಗಳು, ಖಾಸಗಿ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.