ವಿಡಿಯೋ ಎಡಿಟ್‌ ಮಾಡಿ ಹರಿಬಿಟ್ಟ ಆರೋಪ: ಡಿಕೆ ಶಿವಕುಮಾರ್​ ಸೇರಿ ಇತರರ ವಿರುದ್ಧ ಆರ್​ ಅಶೋಕ್ ದೂರು

ಬೆಂಗಳೂರಿನಲ್ಲಿ ಬಸ್ ದರ ಏರಿಕೆ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದ ಆರ್. ಅಶೋಕ್, ಕೆಪಿಸಿಸಿ ತಮ್ಮ ವಾಗ್ವಾದದ ವಿಡಿಯೋವನ್ನು ಎಡಿಟ್​ ಮಾಡಿ ಹರಿಬಿಟ್ಟಿದೆ ಎಂದು ಆರೋಪಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಮತ್ತು ಇತರ ಮುಖಂಡರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ವಿಡಿಯೋ ಎಡಿಟ್‌ ಮಾಡಿ ಹರಿಬಿಟ್ಟ ಆರೋಪ: ಡಿಕೆ ಶಿವಕುಮಾರ್​ ಸೇರಿ ಇತರರ ವಿರುದ್ಧ ಆರ್​ ಅಶೋಕ್ ದೂರು
ಆರ್ ಅಶೋಕ್
Edited By:

Updated on: Jan 04, 2025 | 8:13 PM

ಬೆಂಗಳೂರು, ಜನವರಿ 04: ಬಸ್ ದರ ಏರಿಕೆ ವಿರುದ್ಧ ನಿನ್ನೆ ಮೆಜೆಸ್ಟಿಕ್‌ನಲ್ಲಿ ಪ್ರತಿಭಟನೆ ವೇಳೆ ವಿಪಕ್ಷನಾಯಕ ಆರ್‌.ಅಶೋಕ್ ಮತ್ತು​ ಪೊಲೀಸರ ಮಧ್ಯೆ ವಾಗ್ವಾದ ಉಂಟಾಗಿತ್ತು. ಈ ವೇಳೆ ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಕಾಂಗ್ರೆಸ್​ ವಿಡಿಯೋವೊಂದನ್ನು ಹಂಚಿಕೊಂಡಿತ್ತು. ಸದ್ಯ ಈ ವಿಚಾರವಾಗಿ ಮಾರ್ಫಿಂಗ್ ವಿಡಿಯೋಯನ್ನು ಕೆಪಿಸಿಸಿ ಎಕ್ಸ್, ಫೇಸ್‌ಬುಕ್‌ ಖಾತೆಗಳಲ್ಲಿ ಹಂಚಿರುವುದಾಗಿ ಆರೋಪಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ವಿಪಕ್ಷನಾಯಕ ಆರ್‌.ಅಶೋಕ್ (R Ashoka) ದೂರು ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂವಹನ ಅಧ್ಯಕ್ಷ ರಮೇಶ್ ಬಾಬು, ಸಹ ಅಧ್ಯಕ್ಷೆ ಐಶ್ವರ್ಯ ಮಹದೇವ್, ಉಪಾಧ್ಯಕ್ಷ ಇ.ಸತ್ಯಪ್ರಕಾಶ್​, ಕೆಪಿಸಿಸಿ ಸಾಮಾಜಿಕ ‌ಮಾಧ್ಯಮ ಸಹ ಅಧ್ಯಕ್ಷ ವಿಜಯ್ ಮತ್ತಿಕಟ್ಟಿ ಮತ್ತು ನಿಕೇತ್ ರಾಜ್ ಮೌರ್ಯ ವಿರುದ್ಧ ದೂರು ನೀಡಿರುವ ಆರ್‌.ಅಶೋಕ್, ಎಫ್​ಐಆರ್​ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪೊಲೀಸರ ಬಳಿ ಅಬ್ಬರಿಸಿದ ಅಶೋಕ್: ಏಯ್​ ನಾನು ವಿಪಕ್ಷ ನಾಯಕ, ನನ್ನ ಮುಟ್ಟಿದರೆ ಹುಷಾರ್ ಎಂದ ಸಾಮ್ರಾಟ್​

ಕಾಂಗ್ರೆಸ್​ ಬಸ್‌ ದರ ಏರಿಕೆ ವಿರೋಧಿಸಿ ನಿನ್ನೆ ನಡೆದ ಪ್ರತಿಭಟನೆ ವೇಳೆ ನಾನು ಆಕ್ಷೇಪಾರ್ಹ ಮಾತು ಆಡಿದ್ದೇನೆ ಎಂದು ಸುಳ್ಳು ಸುದ್ದಿ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಆ ಮೂಲಕ ಕರ್ನಾಟಕದಲ್ಲಿರುವ ಡರ್ಟಿ ಟ್ರಿಕ್ಸ್ ಇಲಾಖೆಯು ನನ್ನ ಪ್ರತಿಷ್ಠೆಗೆ ಧಕ್ಕೆ ತರಲು ನಕಲಿ ಮತ್ತು ತಿರುಚಿದ ವಿಡಿಯೋಗಳನ್ನು ಹರಿಬಿಟ್ಟಿದೆ.

ಈ ಪ್ರತಿಯೊಂದು ಪ್ರಕರಣಗಳಿಗೆ ನಾನು ಕಾನೂನಿನ ಮೂಲಕ ಪ್ರತಿಕ್ರಿಯಿಸುತ್ತೇನೆ. ಆ ಮೂಲಕ ಇದರ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ. ಕಾಂಗ್ರೆಸ್​ ಸಾಮಾಜಿಕ ಮಾಧ್ಯಮ ಸೆಲ್ ಮತ್ತು ಅಪರಾಧಿಗಳನ್ನು ಬಿಡುವುದಿಲ್ಲ ಎಂದು ಆರ್​ ಅಶೋಕ್​ ಟ್ವೀಟ್ ಮಾಡಿದ್ದಾರೆ.

ಆರ್​ ಅಶೋಕ್​ ಟ್ವೀಟ್

ಇಂದು ಮಧ್ಯೆ ರಾತ್ರಿಯಿಂದ ಬಸ್ ಪ್ರಯಾಣ ದರ ಶೇಕಡಾ 15ರಷ್ಟು ದರ ಏರಿಕೆಯಾಗಲಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ. ಬಿಜೆಪಿ ನಿನ್ನೆ ನಗರದಲ್ಲಿ ಪ್ರತಿಭಟನೆ ಮಾಡಿದೆ. ಹೀಗಿರುವಾಗ ಕೆಲ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರನ್ನು ಭೇಟಿಯಾಗದಂತೆ ತಡೆಯಲು ಯತ್ನಿಸಿದರು. ಈ ಸಮಯದಲ್ಲಿ, ಆರ್​ ಅಶೋಕ್​, ಸಾರ್ವಜನಿಕರಿಗೆ ಪ್ರಸ್ತುತ ವ್ಯವಹಾರಗಳ ಬಗ್ಗೆ ಮತ್ತು ಕರ್ನಾಟಕ ಸರ್ಕಾರ ಕೈಗೊಂಡ ನಿರ್ಧಾರಗಳ ಬಗ್ಗೆ ಸಂವಹನ ನಡೆಸುವಾಗ ನನ್ನೊಂದಿಗೆ ಹಸ್ತಕ್ಷೇಪ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದರು.

ಇದಕ್ಕೆ ಪ್ರತಿಯಾಗಿ, ಪೊಲೀಸರು ನನ್ನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು ಮತ್ತು ಅವರು ಯಾವುದೇ ಕಾನೂನಿನ ಅಧಿಕಾರವಿಲ್ಲದೆ ನನ್ನನ್ನು ತಡೆಯಲು ಪ್ರಯತ್ನಿಸಿದರು. ಆ ಸಮಯದಲ್ಲಿ, ನಾನು ಕರ್ನಾಟಕದ ವಿರೋಧ ಪಕ್ಷದ ನಾಯಕನಾಗಿದ್ದೇನೆ ಮತ್ತು ಸಾರ್ವಜನಿಕರಿಗೆ ಮಾಹಿತಿಯನ್ನು ತಿಳಿಸುವಾಗ ನನ್ನೊಂದಿಗೆ ಹಸ್ತಕ್ಷೇಪ ಮಾಡಬಾರದು ಮತ್ತು ಹಾಗೆ ಮಾಡುವುದು ನನ್ನ ಸಾಂವಿಧಾನಿಕ ಹಕ್ಕು ಎಂದು ನಾನು ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳಿದ್ದೇನೆ.

ಇದನ್ನೂ ಓದಿ: ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದೊಳಗೆ ಹೋಗಲು ಬಿಡದ ಪೊಲೀಸ್ ಅಧಿಕಾರಿಗೆ ಅರ್ ಅಶೋಕ ಮನಬಂದಂತೆ ತರಾಟೆ!

ಈ ಸನ್ನಿವೇಶದಲ್ಲಿ ನಾನು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದೇನೆ. ಕಾಂಗ್ರೆಸ್​ ಅಧಿಕೃತ ಎಕ್ಸ್​ ಖಾತೆಯಲ್ಲಿ 03.01 2025 ರಂದು 17:03 ಗಂಟೆಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದು ತಿಳಿದು ನಾನು ಆಘಾತಕ್ಕೊಳಗಾಗಿದ್ದೇನೆ, ನಕಲಿ ಎಡಿಟ್​ ವಿಡಿಯೋವನ್ನು ಹರಿಬಿಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:41 pm, Sat, 4 January 25

Loading...
Unable to load recommendations.
Follow Us