ತುಂಬಾ ದಿನಗಳಿಂದ ನಿಮ್ಮ ವಾಹನ ರಸ್ತೆ ಬದಿ ನಿಲ್ಸಿ ಹೋಗಿದ್ದೀರಾ? ಇಂದಿನಿಂದಲೇ ಜಿಬಿಎ ಹೊತ್ತೊಯ್ಯುತ್ತೆ !

ಬೆಂಗಳೂರಿನಲ್ಲಿ ಬಿಡಾಡಿ ವಾಹನಗಳ ತೆರವು ಕಾರ್ಯಾಚರಣೆ: ನಗರದ ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿ ದೀರ್ಘಕಾಲದಿಂದ ಅನಾಥವಾಗಿ ಬಿದ್ದಿರುವ ವಾಹನಗಳನ್ನು ತೆರವುಗೊಳಿಸಲು ಜಿಬಿಎ ಹಾಗೂ ಸಂಚಾರಿ ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ. ನೋಟಿಸ್ ನೀಡಿದ 7 ದಿನಗಳಲ್ಲಿ ವಾಹನ ಸ್ಥಳಾಂತರಿಸದಿದ್ದರೆ ಮುಲಾಜಿಲ್ಲದೆ ಜಪ್ತಿ ಮಾಡಿ ಹರಾಜು ಹಾಕಲಾಗುತ್ತದೆ. ಸಾರ್ವಜನಿಕರು 'Public Eye' ಆ್ಯಪ್ ಮೂಲಕ ದೂರು ನೀಡಬಹುದು.

ತುಂಬಾ ದಿನಗಳಿಂದ ನಿಮ್ಮ ವಾಹನ ರಸ್ತೆ ಬದಿ ನಿಲ್ಸಿ ಹೋಗಿದ್ದೀರಾ? ಇಂದಿನಿಂದಲೇ ಜಿಬಿಎ ಹೊತ್ತೊಯ್ಯುತ್ತೆ !
ಬೆಂಗಳೂರಿನಾದ್ಯಂತ ರಸ್ತೆಬದಿ ಅನಾಥವಾಗಿ ಬಿದ್ದಿರುವ ಬಿಡಾಡಿ ವಾಹನಗಳ ತೆರವು ಇಂದಿನಿಂದ ಆರಂಭ

Updated on: Jul 10, 2026 | 7:35 AM

ಮುಖ್ಯಾಂಶಗಳು

  • ಬೆಂಗಳೂರಿನಾದ್ಯಂತ ರಸ್ತೆಬದಿ ಅನಾಥವಾಗಿ ಬಿದ್ದಿರುವ ಬಿಡಾಡಿ ವಾಹನಗಳ ತೆರವು ಇಂದಿನಿಂದ ಆರಂಭ
  • ವಾಹನ ಮಾಲೀಕರಿಗೆ ತೆರವುಗೊಳಿಸಲು ಅಧಿಕಾರಿಗಳು 7 ದಿನಗಳ ಅಂತಿಮ ಗಡುವು
  • ಗಡುವಿನ ಬಳಿಕವೂ ತೆರವು ಮಾಡದ ವಾಹನಗಳನ್ನು ಜಪ್ತಿ ಮಾಡಿ ಹರಾಜು

ಬೆಂಗಳೂರು, ಜುಲೈ 10: ನಗರದಾದ್ಯಂತ ರಸ್ತೆಗಳು, ಫುಟ್​ಪಾತ್​ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ಅನಾಥವಾಗಿ ಬಿದ್ದಿರುವ ವಾಹನಗಳನ್ನು ತೆರವುಗೊಳಿಸಲು ಬೃಹತ್ ಕಾರ್ಯಾಚರಣೆ ಆರಂಭವಾಗುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳು ಮತ್ತು ಬೆಂಗಳೂರು ಸಂಚಾರಿ ಪೊಲೀಸರು (BTP) ಜಂಟಿಯಾಗಿ ಈ ವಿಶೇಷ ಡ್ರೈವ್ ಅನ್ನು ಕೈಗೆತ್ತಿಕೊಂಡಿದ್ದಾರೆ. ನಗರದ ಸೌಂದರ್ಯೀಕರಣ, ಸುಗಮ ವಾಹನ ಸಂಚಾರ ಹಾಗೂ ಪಾದಚಾರಿಗಳ ಹಿತದೃಷ್ಟಿಯಿಂದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆ ಮೇರೆಗೆ ಈ ಕಠಿಣ ಕ್ರಮ ಜರುಗಿಸಲಾಗುತ್ತಿದೆ.

ಮಾಲೀಕರಿಗೆ 7 ದಿನಗಳ ಗಡುವು; ತಪ್ಪಿದರೆ ಮುಲಾಜಿಲ್ಲದೆ ಹರಾಜು!

ಈ ಮಹಾ ಕಾರ್ಯಾಚರಣೆಯು ಗ್ರೇಟರ್ ಬೆಂಗಳೂರು ಗವರ್ನೆನ್ಸ್ ಕಾಯ್ದೆ 2024′ ರ ಸೆಕ್ಷನ್ 324 ರ ಅಡಿಯಲ್ಲಿ ನಡೆಯುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹಲವು ದಿನಗಳಿಂದ ಹೂತುಹೋಗಿರುವ ಅಥವಾ ಧೂಳು ಹಿಡಿದು ಬಿದ್ದಿರುವ ವಾಹನಗಳನ್ನು ಅಧಿಕಾರಿಗಳು ಮೊದಲು ಗುರುತಿಸಲಿದ್ದಾರೆ. ಬಳಿಕ ಆ ವಾಹನಗಳ ಮೇಲೆ ಅಧಿಕೃತ ಎಚ್ಚರಿಕೆ ಸ್ಟಿಕ್ಕರ್ (ನೋಟಿಸ್) ಅಂಟಿಸಿ, ಚಕ್ರಗಳಿಗೆ ವೀಲ್ ಕ್ಲಾಂಪ್ ಹಾಕಲಾಗುತ್ತದೆ. ವಾಹನದ ಮಾಲೀಕರಿಗೆ ತಮ್ಮ ವಾಹನವನ್ನು ಅಲ್ಲಿಂದ ತೆರವುಗೊಳಿಸಲು ಭರ್ತಿ 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಮಾಲೀಕರು ಸಂಬಂಧಪಟ್ಟ ಪಾಲಿಕೆ ಅಥವಾ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ವಾಹನವನ್ನು ಸ್ವಂತ ಜಾಗಕ್ಕೆ ಸ್ಥಳಾಂತರಿಸಬೇಕು.

ಒಂದು ವೇಳೆ ನೋಟಿಸ್ ನೀಡಿದ 7 ದಿನಗಳ ಒಳಗಾಗಿ ವಾಹನವನ್ನು ತೆರವುಗೊಳಿಸದಿದ್ದರೆ, ಜಂಟಿ ಕಾರ್ಯಾಚರಣೆ ತಂಡವು ಆ ವಾಹನವನ್ನು ಟೋಯಿಂಗ್ ಮಾಡಿ ಜಪ್ತಿ ಮಾಡಿಕೊಳ್ಳಲಿದೆ. ಜಪ್ತಿಯಾದ ನಂತರವೂ ಯಾರೂ ಹಕ್ಕು ಸಾಧಿಸದ ವಾಹನಗಳನ್ನು ಕಾನೂನುಬದ್ಧವಾಗಿ ಬಹಿರಂಗ ಹರಾಜು ಪ್ರಕ್ರಿಯೆಯ ಮೂಲಕ ವಿಲೇವಾರಿ ಮಾಡಲಾಗುತ್ತದೆ. ಒಮ್ಮೆ ಹರಾಜಾದ ನಂತರ ಯಾವುದೇ ಹಕ್ಕುಸ್ವಾಮ್ಯದ ಕ್ಲೈಮ್‌ಗಳನ್ನು ಸ್ವೀಕರಿಸಲಾಗುವುದಿಲ್ಲ.

ಸಾರ್ವಜನಿಕರ ದೂರಿಗೆ ‘Public Eye’ ಆ್ಯಪ್ ನೆರವು

ನಗರದ ನಿವಾಸಿಗಳು ತಮ್ಮ ಗಲ್ಲಿಗಳಲ್ಲಿ, ರಸ್ತೆ ಬದಿಗಳಲ್ಲಿ ಅಥವಾ ಅಪಾರ್ಟ್‌ಮೆಂಟ್‌ಗಳ ಆಸುಪಾಸಿನಲ್ಲಿ ದೀರ್ಘಕಾಲದಿಂದ ಬಿದ್ದಿರುವ ಅನಾಥ ವಾಹನಗಳ ಬಗ್ಗೆ ನಿಗಾ ವಹಿಸಲು ಜಿಬಿಎ ಕೋರಿದೆ. ಸಾರ್ವಜನಿಕರು ಇಂತಹ ವಾಹನಗಳನ್ನು ಕಂಡರೆ ನೇರವಾಗಿ ‘Public Eye'(ಪಬ್ಲಿಕ್ ಐ) ಮೊಬೈಲ್ ಆ್ಯಪ್ ಮೂಲಕ ಫೋಟೋ ಅಪ್ಲೋಡ್ ಮಾಡಿ ದೂರು ದಾಖಲಿಸಬಹುದಾಗಿದೆ.

ಇದನ್ನೂ ಓದಿ ಬೆಂಗಳೂರಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಪ್ಲ್ಯಾನ್: ಮೊದಲು ನೋಟಿಸ್, ಆಮೇಲೆ ಬಿಡ್ಡಿಂಗ್; ಕಠಿಣ ಕ್ರಮಕ್ಕೆ ಮುಂದಾದ GBA

ಈಗಾಗಲೇ ಸಂಚಾರಿ ಪೊಲೀಸರು ನಗರದಾದ್ಯಂತ ಇಂತಹ ಸುಮಾರು 1,518 ಅನಾಥ ವಾಹನಗಳನ್ನು ಪ್ರಾಥಮಿಕವಾಗಿ ಗುರುತಿಸಿದ್ದು, ಈ ಪೈಕಿ ಬೆಂಗಳೂರು ಸೆಂಟ್ರಲ್ ವಲಯದಲ್ಲೇ ಅತಿ ಹೆಚ್ಚು (403) ವಾಹನಗಳು ಪತ್ತೆಯಾಗಿವೆ. ಜಿಬಿಎ ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್ ರಾವ್ ಅವರು ಸಾರ್ವಜನಿಕರು ತಮ್ಮ ಹಳೆಯ ಅಥವಾ ಕೆಟ್ಟುಹೋದ ವಾಹನಗಳನ್ನು ತಕ್ಷಣವೇ ರಸ್ತೆ ಬದಿಯಿಂದ ಸ್ವಂತ ಆವರಣಕ್ಕೆ ಶೀಘ್ರವಾಗಿ ಸ್ಥಳಾಂತರಿಸಿಕೊಳ್ಳಬೇಕಾಗಿ ಖಡಕ್ ಸೂಚನೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us