
ನೆಲಮಂಗಲ, ಜುಲೈ 20: ನಿಮ್ಮ ಮನೆ ಬಾಗಿಲಿಗೆ ಬರುವ ಅಪರಿಚಿತ ಜ್ಯೋತಿಷಿಗಳು ಅಥವಾ ಸ್ವಾಮೀಜಿಗಳ ಬಗ್ಗೆ ತೀವ್ರ ಜಾಗರೂಕರಾಗಿರಬೇಕು. ಬುಡುಬುಡುಕೆ ಸ್ವಾಮೀಜಿ ವೇಷದಲ್ಲಿ ಬಂದು, ಮನೆಯಲ್ಲಿ ಸಾವಿನ ಕಂಟಕವಿದೆ ಎಂದು ಹೆದರಿಸಿ, ಪೂಜೆಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚುವ ಶಾಕಿಂಗ್ ಘಟನೆಯೊಂದು ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದಲ್ಲಿ ಬೆಳಕಿಗೆ ಬಂದಿದೆ.
ಹೆಗ್ಗಡದೇವನಪುರದ ನಿವಾಸಿ ಮೋಹನ್ ಹಾಗೂ ಅವರ ಪತ್ನಿ ಉಷಾ ಅವರ ಮನೆಗೆ ಬುಡುಬುಡುಕೆ ಸ್ವಾಮೀಜಿ ವೇಷ ಧರಿಸಿದ್ದ ಕಳ್ಳನೊಬ್ಬ ಬಂದಿದ್ದ. ಮೋಹನ್ ಅವರ ಪತ್ನಿ ಉಷಾ ಪ್ರಸ್ತುತ 8 ತಿಂಗಳ ಗರ್ಭಿಣಿಯಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಖದೀಮ, ನಿಮ್ಮ ಮನೆಗೆ ದೊಡ್ಡ ದೋಷವಿದೆ, ಶೀಘ್ರದಲ್ಲೇ ಯಾರೋ ಸಾಯುತ್ತಾರೆ ಎಂದು ದಂಪತಿಯನ್ನು ಹೆದರಿಸಿದ್ದಾನೆ. ಇದರಿಂದ ಆತಂಕಗೊಂಡ ದಂಪತಿ ಪರಿಹಾರ ಕೇಳಿದಾಗ, ನನಗೆ ಯಾವುದೇ ಹಣ ಬೇಡ, ಉಚಿತವಾಗಿಯೇ ಪೂಜೆ ಮಾಡಿಕೊಡುತ್ತೇನೆ ಎಂದು ನಂಬಿಸಿ ಮನೆ ಒಳಗೆ ಪ್ರವೇಶಿಸಿದ್ದಾನೆ.
ಮನೆಯೊಳಗೆ ಬರುತ್ತಿದ್ದಂತೆ ಪೂಜೆಯ ನಾಟಕವಾಡಿದ ಕಳ್ಳ ಸ್ವಾಮಿ, ತಾನು ತಂದಿದ್ದ ಮಣ್ಣಿನ ಕುಡಿಕೆಯನ್ನು ಮುಂದಿಟ್ಟಿದ್ದಾನೆ. ಈ ಕುಡಿಕೆಯಲ್ಲಿ ನಿಮ್ಮಲ್ಲಿರುವ ಚಿನ್ನಾಭರಣಗಳನ್ನು ಹಾಕಿ ಪೂಜೆ ಮಾಡಿದರೆ ಮನೆಯ ದೋಷ ನಿವಾರಣೆಯಾಗುವುದಲ್ಲದೆ, ಚಿನ್ನ ಇನ್ನೂ ಹೆಚ್ಚಾಗುತ್ತದೆ ಎಂದು ಪುಸಲಾಯಿಸಿದ್ದಾನೆ. ಇದನ್ನು ನಿಜವೆಂದು ನಂಬಿದ ದಂಪತಿ, ತಮ್ಮ ಬಳಿಯಿದ್ದ ಕಿವಿ ಓಲೆ, ಮಾಟಿ ಹಾಗೂ ಉಂಗುರವನ್ನು ಬಿಚ್ಚಿ ಕುಡಿಕೆಯಲ್ಲಿ ಹಾಕಿದ್ದಾರೆ.
ಬಳಿಕ ದಂಪತಿಗೆ ನೀರು ತರುವಂತೆ ನೆಪ ಹೇಳಿ ಒಳಗಡೆ ಕಳುಹಿಸಿದ ಖದೀಮ, ಕ್ಷಣಾರ್ಧದಲ್ಲಿ ಚಿನ್ನವಿದ್ದ ಕುಡಿಕೆಯನ್ನು ಬದಲಾಯಿಸಿ ತನ್ನ ಬಳಿಯಿದ್ದ ಬೇರೊಂದು ನಕಲಿ ಕುಡಿಕೆಯನ್ನು ಅಲ್ಲಿಟ್ಟಿದ್ದಾನೆ. ನಂತರ ದಂಪತಿಯ ಕೈಗೆ ಒಂದು ವಸ್ತುವನ್ನು ನೀಡಿ, ಇದನ್ನು ಯಾರಿಗೂ ತಿಳಿಯದಂತೆ ತಕ್ಷಣ ಹೋಗಿ ಕೆರೆಗೆ ಬಿಟ್ಟು ಬನ್ನಿ ಎಂದು ಕಳುಹಿಸಿದ್ದಾನೆ. ದಂಪತಿ ಕೆರೆಯತ್ತ ಹೋಗುತ್ತಿದ್ದಂತೆ, ಇತ್ತ ಕಳ್ಳಸ್ವಾಮಿ ಸುಮಾರು 1 ಲಕ್ಷದ 20 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣದೊಂದಿಗೆ ಎಸ್ಕೇಪ್ ಆಗಿದ್ದಾನೆ.
ಕೆರೆಗೆ ವಸ್ತು ಬಿಟ್ಟು ಮನೆಗೆ ಮರಳಿದ ದಂಪತಿ, ಸ್ವಾಮೀಜಿ ಕಾಣದೆ ಇದ್ದಾಗ ಅನುಮಾನಗೊಂಡು ಪೂಜೆಯ ಕುಡಿಕೆಯನ್ನು ಪರಿಶೀಲಿಸಿದ್ದಾರೆ. ಆಗ ಅದರಲ್ಲಿ ಚಿನ್ನದ ಬದಲಿಗೆ ಕಲ್ಲು-ಮಣ್ಣು ಇರುವುದನ್ನು ಕಂಡು ತಾವೇ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಈ ವಂಚನೆಗೆ ಸಂಬಂಧಿಸಿದಂತೆ ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳ ಸ್ವಾಮಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ವರದಿ: ಮಂಜುನಾಥ, ಟಿವಿ9 ನೆಲಮಂಗಲ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ