
ಬೆಂಗಳೂರು, ಮಾರ್ಚ್ 3: ಬೆಂಗಳೂರಿನ (Bangalore) ಗಾಯತ್ರಿ ನಗರದಲ್ಲಿರುವ ಕಂಟ್ರ್ಯಾಕ್ಟರ್ ರಮೇಶ್ ಬಾಬು ಅವರ ನಾಲ್ಕು ಅಂತಸ್ತಿನ ಮನೆಯಲ್ಲಿ ಮೂರನೇ ಮಹಡಿಯ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಸಂಭವಿಸಿದ ಅವಘಡದಲ್ಲಿ ರಮೇಶ್ ಬಾಬು ಅವರ ಪತ್ನಿ 53 ವರ್ಷದ ಸವಿತಾ ದುರ್ಮರಣ ಹೊಂದಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಮೇಶ್ ಬಾಬು, ಅವರ ತಾಯಿ ಸಣ್ಣಮ್ಮ ಹಾಗೂ ಮಗನನ್ನು ರಕ್ಷಿಸಿದ್ದಾರೆ. ಗಾಯಗೊಂಡವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ್ ಹಾಗೂ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ಮುಂದುವರಿದಿದೆ.
ಇನ್ನೊಂದೆಡೆ ಬಸವೇಶ್ವರನಗರದ ಶಿವನಹಳ್ಳಿಯಲ್ಲಿ ರಾತ್ರಿ 11.30ರ ಸುಮಾರಿಗೆ ಶಶಿಕುಮಾರ್ ಎಂಬಾತನನ್ನು ಚಾಕು ಹಾಗೂ ಡ್ರ್ಯಾಗರ್ನಿಂದ ಇರಿದು ಹತ್ಯೆ ಮಾಡಲಾಗಿದೆ. ಶ್ರೀ ಗುರು ರಾಘವೇಂದ್ರ ವೆಜ್ ಆ್ಯಂಡ್ ದೋಸೆ ಕಾರ್ನರ್ ಹೋಟೆಲ್ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಅಡುಗೆಯವನ ಕೆಲಸವೇ ಹೋಯ್ತು! ಬೆಂಗಳೂರು ಟೆಕ್ಕಿಗೆ ಎಐ ರೂಮ್ಮೇಟ್ ನೆರವಾಗಿದ್ಹೇಗೆ ಗೊತ್ತೇ!
ರಾತ್ರಿ ಊಟಕ್ಕೆ ಬಂದಿದ್ದ ಶಶಿಕುಮಾರ್ ಜೊತೆ ಇಬ್ಬರು ವ್ಯಕ್ತಿಗಳ ನಡುವೆ ಗಲಾಟೆ ಸಂಭವಿಸಿದ್ದು, ಬಳಿಕ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆದಿದೆಯೇ ಅಥವಾ ಹಳೆಯ ವೈಷಮ್ಯವೇ ಕಾರಣವೇ ಎಂಬುದರ ಬಗ್ಗೆ ಬಸವೇಶ್ವರನಗರ ಪೊಲೀಸರು ತನಿಖೆ ನಡೆಸಲಿದ್ದಾರೆ.