
ಬೆಂಗಳೂರು, ಸೆಪ್ಟೆಂಬರ್ 22: ಸೈಬರ್ ವಂಚನೆ (cyber fraud) ಕಡಿವಾಣಕ್ಕೆ ಸರ್ಕಾರ ಚಾಪೆ ಕಳಗೆ ನುಗ್ಗಿದರೆ, ವಂಚಕರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಬೇರೆ ಬೇರೆ ಮಾರ್ಗಗಳಲ್ಲಿ ಜನರನ್ನು ಯಾಮಾರಿಸುತ್ತಿದ್ದಾರೆ. ಇದೀಗ ಸಾಲು ಸಾಲು ಹಬ್ಬಗಳು (festive season) ಆರಂಭವಾಗುತ್ತಿದ್ದಂತೆ, ಬೆಂಗಳೂರಿನ ಬ್ಯಾಂಕ್ ಗ್ರಾಹಕರನ್ನು ಟಾರ್ಗೆಟ್ ಮಾಡಿರುವ ಖದೀಮರು ವಿವಿಧ ಆಫರ್ಗಳನ್ನು ನೀಡುವ ಮೂಲಕ ವಂಚನೆಗಿಳಿದಿದ್ದಾರೆ.
ಬ್ಯಾಂಕ್ ಗ್ರಾಹಕರನ್ನು ಟಾರ್ಗೆಟ್ ಮಾಡಿಕೊಂಡಿರುವ ಸೈಬರ್ ವಂಚಕರು, ಪ್ರತಿಷ್ಠಿತ ಬ್ಯಾಂಕ್ಗಳಂತೆ ವೆಬ್ಸೈಟ್ಗಳನ್ನು ಮಾಡಿಕೊಂಡು ಗ್ರಾಹಕರಿಗೆ ನಕಲಿ ರಿವಾರ್ಡ್ಗಳು ಮತ್ತು ಕ್ಯಾಶ್ಬ್ಯಾಕ್ ಆಫರ್ಗಳ ಲಿಂಕ್ಗಳನ್ನು ಕಳುಹಿಸುವ ಮೂಲಕ ವಂಚಿಸುತ್ತಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಹಿರಿಯ ಐಎಎಸ್ ಅಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ; ಸೈಬರ್ ಪೊಲೀಸರ ಮೊರೆ ಹೋದ ಮಣಿವಣ್ಣನ್!
ಈ ಕುರಿತಾಗಿ ಓರ್ವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ ಸೈಬರ್ ವಂಚಕರು ಫೋನ್ ಕರೆಗಳ ಮೂಲಕ, ಅಧಿಕೃತ ಬ್ಯಾಂಕಿಂಗ್ ಅಪ್ಲಿಕೇಶನ್ಗಳು, ವೆಬ್ಸೈಟ್, ಎಸ್ಎಂಎಸ್ ಅಥವಾ ವಾಟ್ಸ್ ಆ್ಯಪ್ ಮೂಲಕ ಎಪಿಕೆ ಫೈಲ್ಗಳನ್ನು ಕಳುಹಿಸುವ ಮೂಲಕ ವಂಚಿಸುವುದಾಗಿ ಅವರು ಹೇಳಿದ್ದಾರೆ.
ವಂಚಕರು, ಬ್ಯಾಂಕ್ ಗ್ರಾಹಕರಿಗೆ ಬಳಸದ ಕಾರ್ಡ್ ರಿವಾರ್ಡ್ ಪಾಯಿಂಟ್ಗಳನ್ನು ರಿಡೀಮ್ ಮಾಡಿಕೊಳ್ಳಬಹುದು ಅಥವಾ ಹಬ್ಬದ ಕ್ಯಾಶ್ಬ್ಯಾಕ್ ಪಡೆಯಬಹುದು ಎಂದು ನಂಬಿಸುತ್ತಾರೆ. ಜನರನ್ನು ನಂಬಿಸಲು ವಂಚಕರು, ಪ್ರಮುಖ ಖಾಸಗಿ ಬ್ಯಾಂಕುಗಳು ಮತ್ತು ಇತರ ಪ್ರಮುಖ ಹಣಕಾಸು ಸಂಸ್ಥೆಗಳ ಹೆಸರುಗಳನ್ನು ಬಳಸಿಕೊಳ್ಳುತ್ತಾರೆ.
ವಂಚಕರ ಆಫರ್ಗಳಿಗೆ ಮಾರುಹೋಗಿ ಅವರು ಕಳುಹಿಸಿದ ಲಿಂಕ್ ಅಥವಾ ಎಪಿಕೆ ಫೈಲ್ಗಳನ್ನು ಒಂದು ವೇಳೆ ಡೌನ್ಲೋಡ್ ಮಾಡಿಕೊಂಡರೆ, ಗ್ರಾಹಕರು ಬಲಿಪಶುವಾದಂತೆ. ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ಫೋನ್ ಮಾಡುವ ವಂಚಕರು, ರಿವಾರ್ಡ್ ಪಾಯಿಂಟ್ಗಳನ್ನು ನೀಡುವ ನೆಪದಲ್ಲಿ ಕ್ರೆಡಿಟ್ ಕಾರ್ಡ್ ಮಾಹಿತಿ ಸೇರಿದಂತೆ ಒಟಿಪಿ ವಿವರಗಳನ್ನು ಪಡೆದುಕೊಳ್ಳುತ್ತಾರೆ. ಬಳಿಕ ಎಲ್ಲೋ ದೂರದಲ್ಲೇ ಕುಳಿತು ಕ್ಷಣ ಮಾತ್ರದಲ್ಲಿ ನೋಡನೋಡುತ್ತಿದ್ದಂತೆ ಖಾತೆಯಲ್ಲಿರುವ ಹಣವನ್ನು ಎಗರಿಸುತ್ತಾರೆ.
ಇದನ್ನೂ ಓದಿ: ಸೈಬರ್ ವಂಚನೆ ಕಡಿವಾಣಕ್ಕೆ ದಿಟ್ಟ ಹೆಜ್ಜೆಯಿಟ್ಟ ಸರ್ಕಾರ: ಸೈಬರ್ ಕಮಾಂಡ್ ಸೆಂಟರ್ ಆರಂಭ
ಸದ್ಯ ವಂಚಕರ ಈ ಹೊಸ ತಂತ್ರಕ್ಕೆ ಹಲವರು ಲಕ್ಷಾಂತರ ರೂ ಕಳೆದುಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ಹೇಳಿರುವುದಾಗಿ ವರದಿ ಮಾಡಿದೆ. ಒಟಿಪಿ, ಎಟಿಎಂ ಪಿನ್, ಸಿವಿವಿ ಸಂಖ್ಯೆ ಅಥವಾ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳದಂತೆ ಮತ್ತು ಯಾವುದೇ ಆನ್ಲೈನ್ ವಂಚನೆಯನ್ನು ಸೈಬರ್ ಸಹಾಯವಾಣಿ ಸಂಖ್ಯೆ 1930 ಗೆ ಸಂಪರ್ಕಿಸುವ ಮೂಲಕ ವರದಿ ಮಾಡುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:05 am, Mon, 22 September 25