
ಬೆಂಗಳೂರು, ಆಗಸ್ಟ್ 11: ಬೆಂಗಳೂರು (Bengaluru) ಎಂದಾಕ್ಷಣ ಮೊದಲಿಗೆ ನೆನಪಾಗೋದೇ ನಗರದಲ್ಲಿನ ಟ್ರಾಫಿಕ್ (Traffic) ಸಮಸ್ಯೆ. ವಾಹನದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ, ಜಿಬಿಎಯಿಂದ ಸಾಕಷ್ಟು ಕ್ರಮಗಳ ಹೊರತಾಗಿಯೂ ಸಂಚಾರ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಈ ನಡುವೆ ಸಾರ್ವಜನಿಕರು ಹುಬ್ಬೇರಿಸುವಂತಹ ಘಟನೆಯೊಂದು ಬೆಂಗಳೂರಲ್ಲಿ ನಡೆದಿದೆ. ಹಸುಗಳಿಂದ ಟ್ರಾಫಿಕ್ ಜಾಮ್ ಉಂಟಾಗಿರುವ ಕಾರಣಕ್ಕೆ ಅವುಗಳ ಮಾಲೀಕನ ವಿರುದ್ಧ ಏರ್ಪೋರ್ಟ್ ಸಂಚಾರ ಠಾಣೆಯಲ್ಲಿ ಪ್ರಕರಣ (ಎಫ್ಐಆರ್) ದಾಖಲಾಗಿದೆ.
ಆಗಸ್ಟ್ 10ರ ಬೆಳಿಗ್ಗೆ ಕಳಾಮಂದಿರ ಹತ್ತಿರದ ರಿಂಗ್ ರಸ್ತೆಯಲ್ಲಿ ಸುಮರು 9 ರಿಂದ 10 ಹಸುಗಳು ರಸ್ತೆಯಲ್ಲಿ ಓಡಾಡಿಕೊಂಡಿದ್ದವು. ಈ ಕಾರಣದಿಂದ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹೀಗಾಗಿ ಈ ರೀತಿಯ ಘಟನೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸದ ಕಾರಣ ಮಾರತ್ತಹಳ್ಳಿಯ ಅಶ್ವಥನಗರ ನಿವಾಸಿಯಾಗಿರುವ ಹಸುಗಳ ಮಾಲೀಕ ಸಂತೋಷ್ ಎಂಬವರಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಹಸುಗಳನ್ನು ರಸ್ತೆಯಲ್ಲಿ ಬಿಟ್ಟು ಇತರೆ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಲು ಕಾರಣರಾಗಿದ್ದಾರೆ ಎಂದು ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಕಂಠೀರವ ಸ್ಟುಡಿಯೋ ಅಂಡರ್ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿತ: ಇಬ್ಬರು ಕಾರ್ಮಿಕರ ಸಾವು
ಘಟನೆ ನಡೆದಿರುವ ದಿನ ರಿಂಗ್ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ HAL ಏರ್ಪೋರ್ಟ್ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ನಾಗೇಂದ್ರ ಎಂಬವರು ಈ ಸಂಬಂಧ ದೂರು ದಾಖಲಿಸಿದ್ದರು. ಅದರನ್ವಯ ಹಸುಗಳ ಮಾಲೀಕ ಸಂತೋಷ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023, (U/S 285) ಅಡಿ ಸಂಚಾರಕ್ಕೆ ಅಡಚಣೆ ಉಂಟು ಮಾಡಿದಕ್ಕೆ ಕೇಸ್ ದಾಖಲು ಮಾಡಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.