
ಬೆಂಗಳೂರು, ಆಗಸ್ಟ್ 16: ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ (fire) ಅವಘಡದಲ್ಲಿ ಐವರು ಸಾವನ್ನಪ್ಪಿರುವಂತಹ (death) ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತಪೇಟೆಯಲ್ಲಿ ನಡೆದಿದೆ. ಸುರೇಶ್, ಮದನ್, ಸಂಗೀತಾ, ಮಕ್ಕಳಾದ ಮಿತೇಶ್, ವಿಹಾನ್ ಮೃತರು. ಮುಂಜಾನೆ 3.30ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ನಿಂದ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಸದ್ಯ ಮನೆಯಿಂದ ಮೃತದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ.
ಸಂದೀಪ್ ಮತ್ತು ಬಾಲಕೃಷ್ಣ ಎಂಬುವವರ ಒಡೆತನದ ಒಟ್ಟು ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ನೆಲಮಹಡಿ ಸೇರಿ ಎರಡು ಮಹಡಿಯಲ್ಲಿ ಗೋಡೌನ್ ಇದೆ. ಮೊದಲ ಮಹಡಿಯಲ್ಲಿ ಮೂವರು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಬೆಂಗಳೂರು: ನಿಂತಿದ್ದ ಖಾಸಗಿ ಶಾಲಾ ಬಸ್ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ಮೂರನೇ ಮಹಡಿಯಲ್ಲಿ ಕುಟುಂಬವೊಂದು ವಾಸವಿದೆ. ಮದನ್ ಕುಮಾರ್ ಪತ್ನಿ ಸಂಗೀತಾ, ಮಕ್ಕಳಾದ ವಿಹಾನ್ ಹಾಗೂ ನಿತೇಶ್ ವಾಸವಿದ್ದರು. ಘಟನೆಯಲ್ಲಿ ಮದನ್ ಸಿಂಗ್ ಸಾವನ್ನಪ್ಪಿದ್ದು, ಉಳಿದ ಮೂವರು ಕೂಡ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ನಾಲ್ಕನೆ ಮಹಡಿಯಲ್ಲಿ ಸಣ್ಣದೊಂದು ರೂಮ್ ಕೂಡ ಇದೆ.
ಇನ್ನು ಘಟನಾ ಸ್ಥಳಕ್ಕೆ ಮಾಜಿ ಶಾಸಕ ಆರ್.ವಿ.ದೇವರಾಜ್ ಭೇಟಿ ಬಳಿಕ ಹೇಳಿಕೆ ನೀಡಿದ್ದು, ಬೆಂಕಿ ಕಾಣಿಸಿಕೊಂಡ ಕಟ್ಟಡದಲ್ಲಿ ಐವರು ಇರುವ ಶಂಕೆ ವ್ಯಕ್ತವಾಗಿದೆ. ಹೊರ ರಾಜ್ಯಗಳಿಂದ ಜನ ಬಂದು ಕಟ್ಟಡಗಳನ್ನು ಕಟ್ಟಿಕೊಳ್ಳುತ್ತಾರೆ. ಅಂತಹವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಸದ್ಯ ಸ್ಥಳಕ್ಕೆ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಮತ್ತು ಪೂರ್ವ ವಿಭಾಗ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕಟ್ಟಡದ ಬಳಿ ದಟ್ಟ ಹೊಗೆ ಆವರಿಸಿಕೊಂಡಿದೆ. ಹೊಗೆಯಿಂದಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೂ ಕಷ್ಟವಾಗುತ್ತಿದೆ. ಪ್ಲಾಸ್ಟಿಕ್ ವಸ್ತು ಇರುವುದರಿಂದ ಕಟ್ಟಡದ ಒಳಗೆ ಹೊಗೆ ಆವರಿಸಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿಗೆ ಒಳಗೆ ಹೋಗಲಾಗುತ್ತಿಲ್ಲ. ಹಾಗಾಗಿ ಉಳಿದವರ ಶೋಧ ಕಾರ್ಯ ಕಷ್ಟವಾಗುತ್ತಿದೆ. ಇವರೆಗೆ ಎರಡು ಮೃತದೇಹಗಳು ಶಿಫ್ಟ್ ಮಾಡಲಾಗಿದೆ.
ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಹೇಳಿಕೆ ನೀಡಿದ್ದು, ಮುಂಜಾನೆ 3.30ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ಬಂತು. ಈಗಾಗಲೇ ಇಬ್ಬರು ಪುರುಷರ ಮೃತದೇಹ ಸಿಕ್ಕಿದೆ. ನಾಪತ್ತೆಯಾದ ಇನ್ನೂ ಮೂವರಿಗಾಗಿ ಹುಡುಕಾಟ ನಡೆಯುತ್ತಿದೆ. ಕಟ್ಟಡದ ಬಾಗಿಲು ತೆಗೆಯಲು ಕಷ್ಟ ಆಗುತ್ತಿದೆ ಎಂದಿದ್ದಾರೆ.
ಇನ್ನು ಶನಿವಾರ ನಗರದ ಚಿನ್ನಯ್ಯನಪಾಳ್ಯದಲ್ಲಿನ ಮನೆಯೊಂದರಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟದಿಂದ ಹಲವರಿಗೆ ಗಾಯಗಳಾಗಿದ್ದರೆ ಓರ್ವ ಬಾಲಕ ಮೃತಪಟ್ಟಿದ್ದ ಘಟನೆ ನಡೆದಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:42 am, Sat, 16 August 25