
ಬೆಂಗಳೂರು, ಜೂನ್ 5: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮಳೆ ಹಾಗೂ ಬಿರುಗಾಳಿಯ ಸಂದರ್ಭದಲ್ಲಿ ರಸ್ತೆಬದಿಯ ಮರಗಳು ಮತ್ತು ರೆಂಬೆಗಳು ಹಠಾತ್ತನೆ ಉರುಳಿ ಬಿದ್ದು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವುದು ಹಾಗೂ ಆಸ್ತಿ ಪಾಸ್ತಿ ನಷ್ಟವಾಗುತ್ತಿರುವುದು ನಿರಂತರವಾಗಿ ವರದಿಯಾಗುತ್ತಿದೆ. ಈ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈಗ ವಿನೂತನ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ನಗರದ ದುರ್ಬಲ ಹಾಗೂ ಅಪಾಯಕಾರಿ ಮರಗಳನ್ನು ವೈಜ್ಞಾನಿಕವಾಗಿ ಪತ್ತೆಹಚ್ಚಲು ‘ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ’ಯೊಂದಿಗೆ ಜಿಬಿಎ ಅರಣ್ಯ ವಿಭಾಗವು ಕೈಜೋಡಿಸಲು ಮುಂದಾಗಿದೆ.
ನಗರದಲ್ಲಿರುವ ನೂರಾರು ಮರಗಳು ದಶಕಗಳಷ್ಟು ಹಳೆಯದಾಗಿದ್ದು, ಮೇಲ್ನೋಟಕ್ಕೆ ಹಸಿರಾಗಿ ಕಂಡರೂ ಒಳಭಾಗದಲ್ಲಿ ಸಂಪೂರ್ಣ ಕೊಳೆತು ಆಯುಷ್ಯ ಮುಗಿದಿರುತ್ತವೆ. ಇಂತಹ ಮರಗಳನ್ನು ಗುರುತಿಸುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಇದಕ್ಕೆ ಪರಿಹಾರವಾಗಿ ಮರ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಜಿಬಿಎಗೆ ವಿಶೇಷ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ. ಈ ಯೋಜನೆಯಡಿ ಮರಗಳಿಗೆ ಯಾವುದೇ ಹಾನಿ ಮಾಡದ ನಾನ್-ಇನ್ವೇಸಿವ್ ಡಯಾಗ್ನೋಸ್ಟಿಕ್ (Non-invasive Diagnostic) ತಂತ್ರಜ್ಞಾನ, ರೆಸಿಸ್ಟೋಗ್ರಾಫ್, ಸೋನಿಕ್ ಟೊಮೊಗ್ರಫಿ, ಎಲೆಕ್ಟ್ರಿಕಲ್ ರೆಸಿಸ್ಟೆನ್ಸ್ ಟೊಮೊಗ್ರಫಿ ಹಾಗೂ ಟ್ರೀ-ಮೋಷನ್ ವಿಶ್ಲೇಷಣೆಯಂತಹ ಸುಧಾರಿತ ಸಾಧನಗಳನ್ನು ಬಳಸಲಾಗುತ್ತದೆ. ಇವುಗಳ ಮೂಲಕ ಮರದ ಒಳರಚನೆ, ಬೇರುಗಳ ಸಾಮರ್ಥ್ಯ ಮತ್ತು ಮರ ಇನ್ನು ಎಷ್ಟು ವರ್ಷ ಸುರಕ್ಷಿತವಾಗಿ ನಿಲ್ಲಬಲ್ಲದು ಎಂಬುದನ್ನು ನಿಖರವಾಗಿ ಅಂದಾಜಿಸಬಹುದು ಎಂದು ಜಿಬಿಎ ಅರಣ್ಯ ಸಂರಕ್ಷಣಾ ಅಧಿಕಾರಿ ಸುದರ್ಶನ್ ಮಾಹಿತಿ ನೀಡಿದ್ದಾರೆ.
ಪ್ರಾಯೋಗಿಕವಾಗಿ ಹಮ್ಮಿಕೊಳ್ಳಲಾಗಿರುವ ಈ ಯೋಜನೆಯ ಒಟ್ಟು ವೆಚ್ಚ 4 ಕೋಟಿ ರೂ. ಆಗಿದ್ದು, ಬೆಂಗಳೂರಿನ ವಿವಿಧ ವಲಯಗಳ ನಗರಪಾಲಿಕೆಗಳಿಗೆ ವೆಚ್ಚವನ್ನು ಹಂಚಿಕೆ ಮಾಡಲಾಗಿದೆ.
ಈ ತಾಂತ್ರಿಕ ಸಮೀಕ್ಷೆಯು ಯಶಸ್ವಿಯಾಗಿ ಜಾರಿಯಾದರೆ, ಮಳೆಗಾಲದಲ್ಲಿ ಹಠಾತ್ತನೆ ಮರಗಳು ಉರುಳುವ ಮುನ್ನವೇ ಅವುಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಈ ಮೂಲಕ ಸಾರ್ವಜನಿಕರ ಪ್ರಾಣಹಾನಿ ಮತ್ತು ವಾಹನಗಳ ಮೇಲಾಗುವ ಆಸ್ತಿ ನಷ್ಟದ ಗಂಡಾಂತರವನ್ನು ಸಂಪೂರ್ಣವಾಗಿ ತಪ್ಪಿಸಬಹುದಾಗಿದೆ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ