ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಕಿಡ್ನ್ಯಾಪ್: 12 ಗಂಟೆಯೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸ್​​

ಮದುವೆಗೆ ನಿರಾಕರಿಸಿದ್ದ ಯುವತಿಯನ್ನ ಅಪಹರಿಸಿದ್ದ ಐವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಿಡ್ನ್ಯಾಪ್​ ಮಾಡಿದ್ದ 12 ಗಂಟೆಯೊಳಗೆ ಆರೋಪಿಗಳ ಹೆಡೆಮುರಿ ಕಟ್ಟುವ ಮೂಲಕ ಸದ್ಯ ಪೊಲೀಸರು ಯುವತಿಯ ರಕ್ಷಣೆ ಮಾಡಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುಬ್ರಹ್ಮಣ್ಯಪುರ ಠಾಣೆಗೆ ಯುವತಿ ಪೋಷಕರು ದೂರು ನೀಡಿದ್ದರು.

ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಕಿಡ್ನ್ಯಾಪ್: 12 ಗಂಟೆಯೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸ್​​
ಬಂಧಿತರು

Updated on: Oct 11, 2025 | 10:45 PM

ಬೆಂಗಳೂರು, ಅಕ್ಟೋಬರ್​ 11: ಮದುವೆಗೆ (Marriage) ನಿರಾಕರಿಸಿದ್ದ ಯುವತಿಯನ್ನ ಕಿಡ್ನ್ಯಾಪ್ (Kidnap) ಮಾಡಿದ್ದ ಐವರವನ್ನು ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ರಂಗನಾಥ್, ರಾಜೇಶ್, ಚಂದನ್, ಶ್ರೇಯಸ್, ಮಂಜುನಾಥ್ ಬಂಧಿತರು. ಈ ಬಗ್ಗೆ ಸುಬ್ರಹ್ಮಣ್ಯಪುರ ಠಾಣೆಗೆ ಯುವತಿ ಕುಟುಂಬಸ್ಥರು ದೂರು ನೀಡಿದ್ದರು. ಸದ್ಯ ಯುವತಿ ರಕ್ಷಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

ನಡೆದದ್ದೇನು?

ಕಿಡ್ನ್ಯಾಪ್ ಆಗಿದ್ದ ಯುವತಿಗೆ ಆರೋಪಿ ರಂಗನಾಥ್ ಪರಿಚಯವಿದ್ದ. ಬೈಕ್ ಮೆಕಾನಿಕ್​ ಆಗಿ ಕೆಲಸ ಮಾಡುತ್ತಿದ್ದ. ಕೊಲೆ ಕೇಸ್​ಯೊಂದರಲ್ಲಿ ಜೈಲಿಗೂ ಹೋಗಿದ್ದ. ಜೈಲಿನಿಂದ ಬಂದ ಬಳಿಕ ಮದುವೆಯಾಗಲು ಯುವತಿಗೆ ಒತ್ತಡ ಹಾಕಿದ್ದ. ಮನೆ ಬಳಿ ಕೂಡ ಹೋಗಿ ಗಲಾಟೆ ಮಾಡಿದ್ದ. ಈ ವೇಳೆ ಮದುವೆ ಮಾಡಿಕೊಡಲು ಯುವತಿಯ ಕುಟುಂಬಸ್ಥರು ನಿರಾಕರಿಸಿದ್ದರು.

ಇದನ್ನೂ ಓದಿ: Cyber Fraud: ದೇಶದ ವಿವಿಧೆಡೆ ಕೋಟಿ ಕೋಟಿ ದೋಚುತ್ತಿದ್ದ ಸೈಬರ್ ವಂಚಕರ ಜಾಲ ಭೇದಿಸಿದ ದಾವಣಗೆರೆ ಪೊಲೀಸ್

ಇದರಿಂದ ರಂಗನಾಥ್ ಕೆರಳಿದ್ದ. ತನ್ನ ಗ್ಯಾಂಗ್​​ಯೊಂದಿಗೆ ಚಿಕ್ಕಲ್ಲಸಂದ್ರದಲ್ಲಿ ವಾಸವಿದ್ದ ಯುವತಿಯನ್ನು ಬುಧವಾರ ಮನೆ ಬಳಿಯೇ ತೆರಳಿ ರಂಗನಾಥ್ ಆ್ಯಂಡ್​ ಗ್ಯಾಂಗ್ ಮಾರಕಾಸ್ತ್ರ ಸಮೇತ ಆಟೋ, ಬೈಕ್​ನಲ್ಲಿ ಬಂದು​​ ಕಿಡ್ನ್ಯಾಪ್​ ಮಾಡಿದ್ದರು.

12 ಗಂಟೆಯೊಳಗೆ ಆರೋಪಿಗಳ ಬಂಧನ

ಈ ಬಗ್ಗೆ ಸುಬ್ರಹ್ಮಣ್ಯಪುರ ಠಾಣೆಗೆ ಯುವತಿ ಕುಟುಂಬಸ್ಥರು ದೂರು ನೀಡಿದ್ದರು. ಸದ್ಯ ಯುವತಿಯನ್ನು ರಕ್ಷಿಸಿ ಕಿಡ್ನ್ಯಾಪ್​ ಮಾಡಿದ್ದ 12 ಗಂಟೆಯೊಳಗೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಡಿಸಿಪಿ ಅನಿತಾ ಹದ್ದಣ್ಣನವರ್ ಹೇಳಿದ್ದಿಷ್ಟು 

ನೈರುತ್ಯ ವಿಭಾಗ ಡಿಸಿಪಿ ಅನಿತಾ ಹದ್ದಣ್ಣನವರ್ ಪ್ರತಿಕ್ರಿಯಿಸಿದ್ದು, ಅ.8ರಂದು ಸಂಜೆ 112ಗೆ ಒಂದು ಕರೆ ಬರುತ್ತೆ. ಒಬ್ಬರ ಮನೆಗೆ ನುಗ್ಗಿ ಮಗಳನ್ನ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ದೂರು ನೀಡಿದರು. ಪೊಲೀಸರು ತಕ್ಷಣ ಸ್ಥಳಕ್ಕೆ ಹೋದರು. ಮದುವೆಗೆ ಹೆಣ್ಣು ಕೇಳಿದ್ದರು. ಕೊಡಲ್ಲ ಅಂದಾಗ ತಾಯಿ, ಅಜ್ಜಿಗೆ ಚಾಕುವಿನಿಂದ ಬೆದರಿಸಿ ಕಿಡ್ನ್ಯಾಪ್ ಮಾಡಿದ್ದರು ಎಂದರು.

ಇದನ್ನೂ ಓದಿ: ಲವ್ವರ್ ಜತೆ ಮಗಳು ಪರಾರಿ: ಇಡೀ ಊರಿಗೆ ತಿಥಿ ಊಟ ಹಾಕಿಸಿದ ತಂದೆ!

ಸುಬ್ರಮಣ್ಯ ಪುರ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, 12 ಗಂಟೆ ಒಳಗೆ ಯುವತಿಯ ರಕ್ಷಣೆ ಮಾಡುತ್ತಾರೆ. ತಮಿಳುನಾಡಿನ ಹೊಸೂರು ಭಾಗದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ರಂಗ ಎನ್ನುವವನ ಮೇಲೆ ಕಳೆದ ವರ್ಷ ಕೊಲೆ ಕೇಸ್ ದಾಖಲಾಗಿರುತ್ತೆ. ಆತನ ಜೊತೆ ಬೇರೆ ಆರೋಪಿಗಳು ಸಾಥ್ ನೀಡಿದ್ದರು. ಕೆಲವು ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್​​ಗಳಿವೆ ಎಂದು ಅವರು ಹೇಳಿದ್ದಾರೆ.

ವರದಿ: ಪ್ರದೀಪ್​ ಚಿಕ್ಕಾಟಿ ಕ್ರೈಂ

ಕರ್ನಾಟಕ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:02 pm, Sat, 11 October 25