
ಬೆಂಗಳೂರು, ಜೂ.30: ಸಿಲಿಕಾನ್ ಸಿಟಿಯ ಪುರುಷರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಏರುಪೇರಾಗುತ್ತಿರುವುದು ಈಗ ಅಂಕಿ-ಅಂಶಗಳ ಸಮೇತ ಸಾಬೀತಾಗಿದೆ. ಎನ್ಎಫ್ಎಚ್ಎಸ್ (NFHS) ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ಪ್ರಕರಣಗಳು ಅತಿ ವೇಗವಾಗಿ ದಾಖಲಾಗುತ್ತಿವೆ. ಕಚೇರಿಯ ವಿಪರೀತ ಕೆಲಸದ ಒತ್ತಡ, ಟ್ರಾಫಿಕ್ ಕಿರಿಕಿರಿ ಮತ್ತು ಕೌಟುಂಬಿಕ ಜವಾಬ್ದಾರಿಗಳ ನಿರ್ವಹಣೆಯ ನಡುವೆ ಪುರುಷರು ತಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ವೈದ್ಯರು ಅಲರ್ಟ್ ಘೋಷಿಸಿದ್ದಾರೆ. ಈ ಬಗ್ಗೆ ಕೆ. ಸಿ. ಜನರಲ್ ಆಸ್ಪತ್ರೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಲಕ್ಷ್ಮಿಪತಿ ಹಾಗೂ ಆರೋಗ್ಯ ಇಲಾಖೆ ಆಯುಕ್ತ ಗುರುದತ್ತ ಹೆಗಡೆ ಅವರು ಕೆಲವೊಂದು ಸಲಹೆ ಹಾಗೂ ಎಚ್ಚರಿಕೆಯನ್ನು ನೀಡಿದ್ದಾರೆ.
ಕುಳಿತು ಕೆಲಸ ಮಾಡುವ ಶೈಲಿ: ದಿನವಿಡೀ ಕಚೇರಿಯಲ್ಲಿ ಅಥವಾ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದು.
ತೀವ್ರ ಮಾನಸಿಕ ಒತ್ತಡ: ಸಾಫ್ಟ್ವೇರ್ ಹಾಗೂ ಕಾರ್ಪೊರೇಟ್ ವಲಯದಲ್ಲಿ ಟಾರ್ಗೆಟ್ (ಗುರಿ) ಸಾಧನೆಯ ಒತ್ತಾಯ, ಟ್ರಾಫಿಕ್ ಸಮಸ್ಯೆ ಹಾಗೂ ಮಾನಸಿಕ ಕಿರಿಕಿರಿ.
ವ್ಯಾಯಾಮದ ಕೊರತೆ: ದೈನಂದಿನ ಜೀವನದಲ್ಲಿ ಯಾವುದೇ ರೀತಿಯ ನಿಯಮಿತ ದೈಹಿಕ ಚಟುವಟಿಕೆ ಅಥವಾ ಯೋಗ, ವ್ಯಾಯಾಮ ಇಲ್ಲದಿರುವುದು.
ಅನಾರೋಗ್ಯಕರ ಆಹಾರ ಪದ್ಧತಿ: ಜಂಕ್ ಫುಡ್ ಸಂಸ್ಕೃತಿ, ಅತಿಯಾದ ಎಣ್ಣೆ, ಸಕ್ಕರೆ ಮತ್ತು ಉಪ್ಪಿನಾಂಶವಿರುವ ಸಂಸ್ಕರಿಸಿದ ಆಹಾರಗಳ ಅತಿಯಾದ ಸೇವನೆ.
ಅಧಿಕ ತೂಕ ಮತ್ತು ಬೊಜ್ಜು: ದೈಹಿಕ ಶ್ರಮವಿಲ್ಲದೆ ದೇಹದ ತೂಕ ಹೆಚ್ಚುತ್ತಿರುವುದು ಬಿಪಿ ಮತ್ತು ಮಧುಮೇಹಕ್ಕೆ ನೇರ ಆಹ್ವಾನ ನೀಡುತ್ತಿದೆ.
ವ್ಯಸನಗಳ ಅಡ್ಡಪರಿಣಾಮ: ಧೂಮಪಾನ ಮತ್ತು ಮದ್ಯಪಾನದ ಚಟಗಳು ರಕ್ತನಾಳಗಳು ಹಾಗೂ ದೇಹದ ಚಯಾಪಚಯ (Metabolism) ಕ್ರಿಯೆಯ ಮೇಲೆ ದುಷ್ಪರಿಣಾಮ ಬೀರುತ್ತಿವೆ.
ಈ ಸದ್ದಿಲ್ಲದ ಕಾಯಿಲೆಗಳು ಹೃದಯಾಘಾತ ಹಾಗೂ ಮೂತ್ರಪಿಂಡಗಳ (ಕಿಡ್ನಿ) ವೈಫಲ್ಯಕ್ಕೆ ಕಾರಣವಾಗುತ್ತಿರುವುದರಿಂದ ಸಾರ್ವಜನಿಕರು ತಕ್ಷಣವೇ ಮುನ್ನೆಚ್ಚರಿಕೆ ವಹಿಸಿ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕೆಂದು ಆರೋಗ್ಯ ಇಲಾಖೆಯ ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಋತುಮತಿ: ಆಹಾರ ಮತ್ತು ಜೀವನಶೈಲಿಯಲ್ಲಿ ಈ ಬದಲಾವಣೆಗಳು ಅಗತ್ಯ
ಕಚೇರಿಯಲ್ಲಿ ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು ಪ್ರತಿ 45 ನಿಮಿಷಕ್ಕೊಮ್ಮೆ ಸೀಟಿನಿಂದ ಎದ್ದು 5 ನಿಮಿಷಗಳ ಕಾಲ ಕಚೇರಿಯ ಆವರಣದಲ್ಲೇ ಸಣ್ಣ ವಾಕ್ ಮಾಡಬೇಕು. ಲಿಫ್ಟ್ ಬಳಸುವ ಬದಲು ಕನಿಷ್ಠ 2-3 ಮಹಡಿಗಳನ್ನು ಹತ್ತಲು ಮೆಟ್ಟಿಲುಗಳನ್ನು ಬಳಸಿ. ಇದು ದೇಹದ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಜಂಕ್ ಫುಡ್, ಬೇಕರಿ ತಿಂಡಿ ಹಾಗೂ ಸಂಸ್ಕರಿಸಿದ ಆಹಾರಗಳಿಗೆ ಗುಡ್ಬೈ ಹೇಳಿ. ಪ್ರತಿದಿನದ ಊಟದಲ್ಲಿ ಹಸಿರು ಸೊಪ್ಪು, ತರಕಾರಿ, ಬೇಳೆಕಾಳು ಹಾಗೂ ನಾರಿನಾಂಶವಿರುವ (Fibre Rich) ಆಹಾರವನ್ನು ಹೆಚ್ಚಾಗಿ ಬಳಸಿ. ಚಹಾ/ಕಾಫಿಯಲ್ಲಿ ಸಕ್ಕರೆ ಪ್ರಮಾಣ ತಗ್ಗಿಸಿ. ದಿನನಿತ್ಯದ ಅಡುಗೆಯಲ್ಲಿ ಉಪ್ಪಿನ ಬಳಕೆಯನ್ನು ಮಿತಿಗೊಳಿಸುವುದರಿಂದ ರಕ್ತದೊತ್ತಡ ತಾನಾಗಿಯೇ ಹತೋಟಿಗೆ ಬರುತ್ತದೆ.
ಕಾರ್ಪೊರೇಟ್ ಟಾರ್ಗೆಟ್ ಹಾಗೂ ಟ್ರಾಫಿಕ್ ಒತ್ತಡದಿಂದ ಮುಕ್ತಿ ಪಡೆಯಲು ಪ್ರತಿದಿನ ಕನಿಷ್ಠ 10 ನಿಮಿಷಗಳ ಕಾಲ ಪ್ರಾಣಾಯಾಮ, ಧ್ಯಾನ ಅಥವಾ ಆಳವಾದ ಉಸಿರಾಟದ ಪ್ರಕ್ರಿಯೆಯನ್ನು ಅಭ್ಯಾಸ ಮಾಡಿ. ಇದು ಮೆದುಳಿಗೆ ಮತ್ತು ರಕ್ತನಾಳಗಳಿಗೆ ವಿಶ್ರಾಂತಿ ನೀಡುತ್ತದೆ. ಕೆಟ್ಟ ಚಟಗಳಿಂದ ದೂರವಿರುವುದು ನಿಮ್ಮ ಹೃದಯ ಮತ್ತು ಕಿಡ್ನಿಗಳನ್ನು ದೀರ್ಘಕಾಲದವರೆಗೆ ಯುವ ಜನತೆಯಂತೆ ಸದೃಢವಾಗಿಡುತ್ತದೆ. ಇದರೊಂದಿಗೆ ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನೆಮ್ಮದಿಯ ನಿದ್ದೆ ಮಾಡುವುದು ಹಾರ್ಮೋನ್ಗಳ ಸಮತೋಲನಕ್ಕೆ ಅತಿ ಮುಖ್ಯ. 30 ವರ್ಷ ದಾಟಿದ ಪ್ರತಿಯೊಬ್ಬ ಪುರುಷನೂ ವರ್ಷಕ್ಕೊಮ್ಮೆಯಾದರೂ ಕಡ್ಡಾಯವಾಗಿ ಮಾಸ್ಟರ್ ಹೆಲ್ತ್ ಚೆಕಪ್ (ರಕ್ತದ ಪರೀಕ್ಷೆ) ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲೇ ಬಿಪಿ, ಶುಗರ್ ಪತ್ತೆಯಾದರೆ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸಂಪೂರ್ಣ ನಿಯಂತ್ರಣ ಸಾಧಿಸಬಹುದು ಎಂದು ವೈದ್ಯರು ಹೇಳಿದ್ದಾರೆ.
ಆರೋಗ್ಯ ಸುದಗ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ