
ಬೆಂಗಳೂರು, ಏಪ್ರಿಲ್ 16: ನಗರದಲ್ಲಿ ನಮ್ಮ ಮೆಟ್ರೋ (Namma Metro) ಕಾಮಗಾರಿ ವೇಳೆ ಬಾರಿ ಅನಾಹುತವೊಂದು ನಡೆದಿದೆ. ಬೃಹತ್ ವಯಾಡೆಕ್ಟ್ (ಬೃಹದಾಕಾರದ ತಡೆಗೋಡೆ) ಸಾಗಿಸುವ ವೇಳೆ ನಿರ್ಲಷ್ಯದಿಂದ ಮಾಡಿದ ಎಡವಟ್ಟು ವ್ಯಕ್ತಿಯೋರ್ವನ ಬಲಿ (death) ಪಡೆದುಕೊಂಡಿದೆ. ಖಾಸಿಂ ಮೃತ ಆಟೋ ಚಾಲಕ. ಬೆಂಗಳೂರಿನ ಯಲಹಂಕ ಬಳಿಯ ಕೋಗಿಲು ಕ್ರಾಸ್ ಬಳಿ ಘಟನೆ ನಡೆದಿದೆ. 20 ವರ್ಷದಿಂದ ಆಟೋ ಓಡಿಸುತ್ತಿದ್ದ ಖಾಸಿಂ, ಫೈನಾನ್ಸ್ನಲ್ಲಿ ಸಾಲ ಮಾಡಿ ಆಟೋ ಖರೀದಿಸಿ ಕೇಲವ 20 ದಿನವಾಗಿತ್ತು. ಅಷ್ಟರಲ್ಲೇ ದಾರುಣ ಘಟನೆ ಸಂಭವಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ವೇಳೆ ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಮೆಟ್ರೋ ಕಾಮಗಾರಿ ವೇಳೆ ಮುನ್ನೆಚ್ಚರಿಕಾ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು! ರಾತ್ರಿ ಮೆಟ್ರೋ ಕಾಮಗಾರಿಗೆಂದು ಲಾರಿಯಲ್ಲಿ ತರಲಾಗುತಿದ್ದ, ವಯಾಡೆಕ್ಟ್ ಕೆಳಗೆ ಬಿದಿದ್ದು, ಪರಿಣಾಮ ರಸ್ತೆಯಲ್ಲಿ ನಿಂತಿದ್ದ ಆಟೋ ಮೇಲೆ ಬಿದ್ದು, ಆಟೋ ಚಾಲಕ ಸಾವನಪ್ಪಿದ್ದಾರೆ. ಸರಿಸುಮಾರು ಮಧ್ಯರಾತ್ರಿ 12 ಗಂಟೆ ದುರಂತ ಸಂಭವಿಸಿದ್ದು, ಘಟನೆ ಬಳಿಕ ಕೊಂಚ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಜೋಡಿಯ ರೋಮ್ಯಾನ್ಸ್ ವಿಡಿಯೋ ವೈರಲ್: ಛೀ, ಥೂ ಎಂದ ನೆಟ್ಟಿಗರು
ಘಟನೆ ಕಣ್ಣಾರೆ ಕಂಡ ಜನ ಆತನ ರಕ್ಷಣೆಗೆ ದಾವಿಸಿದ್ದರು. ಆದರೆ ಬೃಹತ್ ಗಾತ್ರದ ವಯಾಡೆಕ್ಟ್ ತೆಗೆಯಲು ಕ್ರೇನ್ ಅತ್ಯಗತ್ಯವಾಗಿತ್ತು. ಸ್ಥಳಕ್ಕೆ ಪೊಲೀಸರು ಬಂದರೂ ಸಹ ಕ್ರೇನ್ ಮಾತ್ರ ಬರಲು ತಡವಾಯಿತು. ಇದರಿಂದ ಆಕ್ರೋಶಗೊಂಡ ಜನ ಕಲ್ಲುತೂರಾಟ ಸಹ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಎರಡು ಗಂಟೆ ಬಳಿ ಕ್ರೇನ್ ತರಿಸಿ ವಯಾಡೆಕ್ಟ್ ಪಕ್ಕಕ್ಕೆ ಇಡುವ ಮೂಲಕ ಮೃತದೇಹ ಹೊರ ತೆಗೆಯಲಾಗಿದೆ. ಇನ್ನು ಈ ದುರಂತಕ್ಕೆ ಮೆಟ್ರೋ ಅಧಿಕಾರಿಗಳ ಬೇಜವಾಬ್ದಾರಿ ತನವೇ ಕಾರಣ ಅಂತ ಜನ ಆಕ್ರೋಶ ವ್ಯಕ್ತ ಪಡಿದಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರಿಗೆ ಬೆಳಗ್ಗೆಯೇ ಕೈಕೊಟ್ಟ ನಮ್ಮ ಮೆಟ್ರೋ: ಕಿಕ್ಕಿರಿದ ಜನಸಂದಣಿಯ ವಿಡಿಯೋ ವೈರಲ್
ಅಸಲಿಗೆ ಆಟೋ ಚಾಲಕ ಪ್ಯಾಸಂಜರ್ ಇಳಿಸಿದ ಬಳಿಕ ಹಣ ಪಡೆಯುತಿದ್ದನಂತೆ. ಆದರೆ ಈ ವೇಳೆ ಪಕ್ಕದಲ್ಲೇ ದೊಡ್ಡ ತಿರುವು ಪಡೆದುಕೊಳ್ಳುತಿದ್ದ ಲಾರಿಗೆ ಬಸ್ ಅಡ್ಡವಾಯ್ತು ಅಂತ ಕಂಟ್ರೋಲ್ ಮಾಡಲು ಹೋದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಯಾವಾಗ ವಯಾಡೆಕ್ಟ್ ಮುಗುಚಿ ಆಟೋ ಮೇಲೆ ಬಿತ್ತೋ ಲಾರಿ ಚಾಲಕ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:35 am, Wed, 16 April 25