45 ಬಿಬಿಎಂಪಿ ಕಂದಾಯ, ನಗರ ಯೋಜನೆ ಕಚೇರಿ ಮೇಲೆ ‘ಲೋಕಾ’ದಾಳಿ ಅಂತ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 05, 2023 | 4:08 PM

Bengaluru News: ಆಗಸ್ಟ್ 3 ರಂದು ಬೆಂಗಳೂರು ನಗರದ ಬಿಬಿಎಂಪಿ ಕಂದಾಯ ಇಲಾಖೆ ಮತ್ತು ನಗರ ಯೋಜನೆ ಕಚೇರಿ ಮೇಲೆ ಏಕ ಕಾಲಕ್ಕೆ ಲೋಕಾಯುಕ್ತ ತಂಡ ದಾಳಿ ನಡೆಸಿತ್ತು. ಮೂರು ದಿನಗಳ ನಿರಂತರ ಕಾರ್ಯಚರಣೆಯಲ್ಲಿ ತೊಡಗಿದ್ದ ಲೋಕಾಯುಕ್ತ ತಂಡ ಶನಿವಾರ ಮಧ್ಯಾಹ್ನದ ಹೊತ್ತಿಗೆ ದಾಳಿ ಅಂತ್ಯಗೊಳಿಸಿದೆ.

45 ಬಿಬಿಎಂಪಿ ಕಂದಾಯ, ನಗರ ಯೋಜನೆ ಕಚೇರಿ ಮೇಲೆ ಲೋಕಾದಾಳಿ ಅಂತ್ಯ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್​ 05: ಸುಮಾರು 200 ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗಳ ಲೋಕಾಯುಕ್ತ (Lokayukta raids) ತಂಡ ಆಗಸ್ಟ್ 3 ರ ಗುರುವಾರ ಸಂಜೆ 4 ಗಂಟೆಗೆ ನಗರದ ಬಿಬಿಎಂಪಿ ಕಂದಾಯ ಇಲಾಖೆ ಮತ್ತು ನಗರ ಯೋಜನೆ ಕಚೇರಿ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿತ್ತು. ನಿರಂತರ ಮೂರು ದಿನಗಳ ಕಚೇರಿಯಲ್ಲಿನ ಕಡತಗಳ ಪರಿಶೀಲನೆ ಬಳಿಕ ಆಗಸ್ಟ್ 5 ರ ಶನಿವಾರ ಮಧ್ಯಾಹ್ನದ ಹೊತ್ತಿಗೆ ದಾಳಿ ಅಂತ್ಯಗೊಳಿಸಿದೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌ ಪಾಟೀಲ್‌ ಖುದ್ದು ದಾಳಿ ನಡೆಸಿದ್ದರಿಂದ ಪಾಲಿಕೆ ಅಧಿಕಾರಿಗಳು ಕಂಗೆಟ್ಟು ಬೆವರಿದ್ದಾರೆ. ಕರ್ತವ್ಯ ಮುಗಿಸಿ ಮನೆಗೆ ಹೊರಡುವ ಧಾವಂತದಲ್ಲಿದ್ದ ಪಾಲಿಕೆ ಅಧಿಕಾರಿಗಳು ಲೋಕಾಯುಕ್ತ ತಂಡ ಕಂಡು ಬೆಚ್ಚಿಬಿದ್ದರು. ಕೆಲವು ಕಚೇರಿಗಳ ಬಳಿಯಿದ್ದ ಏಜೆಂಟರು ಪರಾರಿಯಾಗಿದ್ದರು. ಕೆಲವು ಸಿಬ್ಬಂದಿ ಪರಾರಿಯಾಗಲು ಯತ್ನಿಸಿದರು. ದಾಳಿ ನೇತೃತ್ವದ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ನೀಡದೆ ಕೆಲ ಸಿಬ್ಬಂದಿ ಕಕ್ಕಾಬಿಕ್ಕಿಯಾದರು. ದಾಳಿ ವೇಳೆ ಬಹುತೇಕ ಕಚೇರಿಗಳಲ್ಲಿ ಅನಧಿಕೃತ ಹಣ ಪತ್ತೆಯಾಗಿದೆ.

ಲೋಕಾ ದಾಳಿ ವೇಳೆ ಪತ್ತೆಯಾಯ್ತು ಕರ್ತವ್ಯ ಲೋಪ

ಲೋಕಾಯುಕ್ತ ದಾಳಿಯಿಂದ ಕಂದಾಯ ಇಲಾಖೆ ಕಚೇರಿ ಮತ್ತು ನಗರ ಯೋಜನೆ ಕಚೇರಿಯಲ್ಲಿ ಕಡತ ವಿಲೇವಾರಿ ಮಾಡದಿರುವ ಲೋಪಗಳು ಕಂಡು ಬಂದಿವೆ. ಹಣ, ಕಡತಗಳನ್ನು ಜಪ್ತಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ರಾಜಧಾನಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿರುವ ಪಾಲಿಕೆ ರೆವೆನ್ಯೂ ಇನ್ಸ್‌ಪೆಕ್ಟರ್ಸ್, ಅಸಿಸ್ಟೆಂಟ್‌ ರೆವೆನ್ಯೂ ಇನ್ಸ್‌ಪೆಕ್ಟರ್ಸ್ ಕಚೇರಿಗಳಿಗೆ ಲಗ್ಗೆ ಇಟ್ಟಿದ್ದ ಲೋಕಾಯುಕ್ತ ನ್ಯಾಯಾಂಗ ಅಧಿಕಾರಿಗಳು ಮತ್ತು ಪೊಲೀಸರು ಕಡತ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243 ರಿಂದ 225ಕ್ಕೆ ಇಳಿಸಿದ ರಾಜ್ಯ ಸರ್ಕಾರ

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌ ಪಾಟೀಲ್‌ ನೇತೃತ್ವದ ತಂಡ ವಿಜಯನಗರ ಹಾಗೂ ರಾಜಾಜಿನಗರ ಆರ್‌ಒ,ಎಆರ್‌ಒ ಕಚೇರಿಗಳಿಗೆ ತೆರಳಿತ್ತು. ಪಾಲಿಕೆ ಅಧಿಕಾರಿಗಳ ಬಳಿಯಿದ್ದ ಕಡತಗಳನ್ನು ಪರಿಶೀಲನೆ ನಡೆಸಿದ ಅವರು, ವಿನಾಕಾರಣ ಕೆಲವು ಕಡತ ಬಾಕಿ ಉಳಿಸಿಕೊಂಡಿರುವದನ್ನು ಗಮನಿಸಿ ತರಾಟೆ ತೆಗೆದುಕೊಂಡರು.

ಜತೆಗೆ, ಕೆಲವು ನಾಗರಿಕರಿಗೆ ಕರೆ ಮಾಡಿ ಯಾವ ಕಡತ ಎಷ್ಟು ದಿನದಿಂದ ಬಾಕಿ ಉಳಿದಿದೆ ಎಂದು ಮಾಹಿತಿ ಪಡೆದರು. ಪಾಲಿಕೆ ಕಂದಾಯ ವಿಭಾಗದ ಸಂಬಂಧ ಹಲವು ದೂರುಗಳು ಸಲ್ಲಿಕೆಯಾಗಿದ್ದವು. ಅಧಿಕಾರಿಗಳ ದುರ್ವರ್ತನೆ, ಲಂಚ ಬೇಡಿಕೆ, ವಿನಾಕಾರಣ ಕೆಲಸ ಮಾಡಿಕೊಡದೆ ವಿಳಂಬ ಮಾಡುತ್ತಿರುವುದೂ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಒಳಗೊಂಡಿದ್ದವು.

ಲೋಕಾಯುಕ್ತ ಎಸ್‌ಪಿ, ಡಿವೈಎಸ್ಪಿಗಳು ಸೇರಿ 200 ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳು ವಿಜಯನಗರ, ಜಯನಗರ, ಆರ್‌ಆರ್‌ ನಗರ, ಕೆ ಆರ್‌ ಪುರ, ದೊಮ್ಮಲೂರು, ಶಾಂತಿನಗರ, ಸರ್‌ ಸಿ ವಿ ರಾಮನ್‌ ನಗರ, ಯಲಹಂಕ ಬ್ಯಾಟರಾಯನಪುರ, ವಿದ್ಯಾರಣ್ಯಪುರ ಸೇರಿ 45 ಕಚೇರಿಗಳಲ್ಲಿ ತಪಾಸಣೆ ನಡೆಸಲಾಗಿದೆ. ಕೆಲವು ಕಚೇರಿಗಳಲ್ಲಿ ಲೆಕ್ಕವಿಲ್ಲದ ಹಣ ಪತ್ತೆಯಾಗಿದೆ. ಅನುಮಾನಾಸ್ಪದ ಕಡತಗಳನ್ನು ವಶಕ್ಕೆ ಪಡೆಯಲಾಗಿದೆ.

500 ಕ್ಕೂ ಹೆಚ್ಚು ಕಡತ ವಶಕ್ಕೆ ಪಡೆದ ಲೋಕಾಯುಕ್ತ

ದಾಳಿ ಸಂದರ್ಭದಲ್ಲಿ ಕಂದಾಯ ಮತ್ತು ನಗರ ಯೋಜನೆ ಕಚೇರಿಯಲ್ಲಿದ್ದ 500 ಕ್ಕೂ ಹೆಚ್ಚು ಕಡತಗಳನ್ನು ಲೋಕಾಯುಕ್ತ ತಂಡ ವಶಕ್ಕೆ ಪಡೆದು ಪರಿಶೀಲನೆ‌ ನಡೆಸುತ್ತಿದೆ. ಇದರಿಂದಾಗಿ ಸಾಕಷ್ಟು ಅವ್ಯವಹಾರ, ಭ್ರಷ್ಟಾಚಾರ, ಸರಿಯಾದ ಸಮಯಕ್ಕೆ ಕೆಲಸ ಮಾಡಿಕೊಡದೆ ಜನರಿಗೆ ಕಿರುಕುಳ ನೀಡಿರುವುದು ಕೂಡ ಗೊತ್ತಾಗಿದೆ. ಸದ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನೇತೃತ್ವದಲ್ಲೇ ದಾಳಿ ಮಾಡಿದ್ದು ಖುದ್ದು ಅವರೆ ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ: Bengaluru News: 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಆರ್​ಐ

ಯಾವುದರಲ್ಲಿ ನಡೆದಿದೆ ಅಕ್ರಮ?

ಕಂದಾಯ ಮತ್ತು ನಗರ ಯೋಜನೆ ಅಧಿಕಾರಿಗಳು ಕೈ ಇಟ್ಟ ಕಡೆಯಲ್ಲೆಲ್ಲ ಅಕ್ರಮಗಳೇ ನಡೆದಿದೆ. ಪ್ರಮುಖವಾಗಿ ಆಸ್ತಿಗಳಿಗೆ ಖಾತೆ ಸಂಖ್ಯೆ ನೀಡುವುದು, ತೆರಿಗೆ ಸಂಗ್ರಹ, ಕಟ್ಟಡ ನಕ್ಷೆ ಅನುಮೋದನೆ, ಕಟ್ಟಡ ಸ್ವಾಧೀನ ಪ್ರಮಾಣಪತ್ರ ವಿತರಣೆ ಸೇರಿದಂತೆ ಹಲವು ವಿಷಯಗಳಲ್ಲಿ ನಿಯಮ ಉಲ್ಲಂಘಟನೆ ಆಗಿರುವುದು ಕಂಡು ಬಂದಿದೆ.

ಅಧಿಕಾರಿಗಳಿಗೆ ತಟ್ಟಲಿದೆ ವಿಚಾರಣೆ ಬಿಸಿ

ಲೋಕಾಯುಕ್ತ ದಾಳಿ ವೇಳೆ ಕಂದಾಯ ಮತ್ತು ನಗರ ಯೋಜನೆ ಕಚೇರಿಯಲ್ಲಿ ಹಲವು ದಾಖಲೆಗಳೆ ನಾಪತ್ತೆಯಾಗಿವೆ. ಇನ್ನು ಕೆಲ ದಾಖಲೆಗಳನ್ನು ಲೋಕಾಯುಕ್ತ ತಂಡ ಸೀಜ್ ಮಾಡಿದೆ. ಉಳಿದ ದಾಖಲೆಗಳನ್ನು ಲೋಕಾಯುಕ್ತ ಕಚೇರಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಷ್ಟಾದ ಮೇಲೆ ಅಕ್ರಮದ ಬಗ್ಗೆ ಲೋಕಾಯುಕ್ತ ತಂಡದಿಂದ ವಿಚಾರಣೆ ಶುರುವಾಗಲಿದೆ. ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲು ಸಿದ್ಧತೆಯನ್ನು ಲೋಕಾಯುಕ್ತ ತಂಡ ಮಾಡಿಕೊಳ್ಳುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.