
ಬೆಂಗಳೂರು, ಸೆಪ್ಟೆಂಬರ್ 20: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಸಡಗರ-ಸಂಭ್ರಮದಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯ ಭರದಿಂದ ಸಾಗಿದೆ. ಇಂದು ಕೂಡ ನಗರದಾದ್ಯಂತ ವಿಸರ್ಜನೆ ನಡೆಯಿತು. ಕಳೆದ ಒಂದು ವಾರದಲ್ಲಿ ನಗರದಲ್ಲಿ ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಗಣೇಶ ಮೂರ್ತಿಗಳ ಸುಲಭ ವಿಸರ್ಜನೆಗಾಗಿ ಹಲಸೂರು ಕೆರೆ, ಸ್ಯಾಂಕಿ ಕೆರೆ, ಯಡಿಯೂರು ಕೆರೆ ಸೇರಿದಂತೆ ನಗರದ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಿಬಿಎ ವತಿಯಿಂದ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಬೃಹತ್ ಗಾತ್ರದ ಮೂರ್ತಿಗಳನ್ನು ಸುಲಭವಾಗಿ ವಿಸರ್ಜನೆ ಮಾಡಲು ಪ್ರಮುಖ ಕೇಂದ್ರ ಸ್ಥಳಗಳಲ್ಲಿ ಮೂರು ಕ್ರೇನ್ಗಳ ಸೌಲಭ್ಯ ಕಲ್ಪಿಸಲಾಗಿದೆ.
ಇದನ್ನೂ ಓದಿ: ಬ್ಯಾಂಕಾಕ್ನಲ್ಲಿ ವಿಶಿಷ್ಟ ಗಣೇಶ ಪೂಜೆ: ಮೋದಕದ ಬದಲಿಗೆ ಗಣಪನಿಗೆ ‘ಬಬಲ್ ಟೀ’ ನೈವೇದ್ಯ!
ಒಂದೆಡೆ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಇನ್ನೊಂದೆಡೆ ಭಕ್ತರಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ಭಕ್ತರು ಡೋಲು, ತಮಟೆ ಸದ್ದು ಹಾಗೂ “ಗಣಪತಿ ಬಪ್ಪಾ ಮೋರ್ಯಾ” ಘೋಷಣೆಗಳೊಂದಿಗೆ, ಭಕ್ತಿಭಾವದಿಂದ ಸಡಗರದಿಂದ ಪಾಲ್ಗೊಂಡು ಬಪ್ಪನಿಗೆ ವಿದಾಯ ಹೇಳಿದರು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡಿರುವ ದೃಶ್ಯಗಳು ಸಾಮಾನ್ಯವಾಗಿದೆ.
ಇನ್ನು ಗಣೇಶ ವಿಸರ್ಜನೆಯ ಸಂಭ್ರಮದ ನಡುವೆಯೇ ನಗರದ ಕೆಲವೆಡೆ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ಅದರಲ್ಲೂ ಹಲಸೂರು ಮತ್ತು ಕಮರ್ಷಿಯಲ್ ಸ್ಟ್ರೀಟ್ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಗಂಟೆಗಟ್ಟಲೆ ವಾಹನಗಳು ನಿಂತಲ್ಲೇ ನಿಂತಿದ್ದವು.
ಇದನ್ನೂ ಓದಿ: ದರ್ಗಾದಲ್ಲೇ ಗಣೇಶೋತ್ಸವ: ಮುಸ್ಲಿಂ ಬಾಂಧವರಿಂದಲೇ ವಿಘ್ನನಿವಾರಕನ ಪೂಜೆ; ದೇಶಕ್ಕೆ ಮಾದರಿಯಾದ ಕುರಂದವಾಡ
ಪರ್ಯಾಯ ಮಾರ್ಗಗಳ ಕುರಿತು ಸೂಕ್ತ ಮಾಹಿತಿ ಇಲ್ಲದೆ ಸವಾರರು ಪರದಾಡಿದ್ದು, ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:17 pm, Sun, 20 September 26