ಮಳೆ ಅವಘಡ ತಡೆಯಲು ಟ್ರಾಫಿಕ್ ಪೊಲೀಸರಿಗೆ ಟಾಸ್ಕ್ ಕೊಟ್ಟ ಕಮಿಷನರ್ ಸಲೀಂ, ಕಬ್ಬನ್ ಪಾರ್ಕ್​ಗೆ ಹೋಗುವವರೇ ಇರಲಿ ಎಚ್ಚರ!

ಮಹಾಮಳೆಗೆ ಸಂಭವಿಸುತ್ತಿರುವ ದುರಂತಗಳನ್ನು ತಡೆಯುವ ನಿಟ್ಟಿನಲ್ಲಿ ಸ್ಪೆಷಲ್ ಟ್ರಾಫಿಕ್ ಕಮಿಷನರ್ ಸಲೀಂ ಅವರು ಇಲಾಖೆಯ ಎಲ್ಲಾ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗೆ ಟಾಸ್ಕ್ ನೀಡಿದ್ದಾರೆ.

Follow us
|

Updated on:May 23, 2023 | 7:08 AM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದೆರಡು ದಿನಗಳಿಂದ ವರುಣಾ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ(Bengaluru Rain). ಮಹಾ ಮಳೆಯ ಆರ್ಭಟಕ್ಕೆ ಜನ ತತ್ತರಿಸಿದ್ದಾರೆ. ಇದರ ನಡುವೆ ಹಚ್ಚ ಹಸಿರಾಗಿದ್ದ ಕಬ್ಬನ್ ಪಾರ್ಕ್ ಅಕ್ಷರಶಃ ನಲುಗಿ ಹೋಗಿದೆ(Cubbon Park). ಇನ್ನು ಹವಮಾನ ಇಲಾಖೆಯಿಂದ ಮೂರ್ನಾಲ್ಕು ದಿನ ಮಳೆ ಮುನ್ಸೂಚನೆ ಹಿನ್ನೆಲೆ ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ(Bengaluru Traffic Police).

ಮಹಾಮಳೆಗೆ ಸಂಭವಿಸುತ್ತಿರುವ ದುರಂತಗಳನ್ನು ತಡೆಯುವ ನಿಟ್ಟಿನಲ್ಲಿ ಸ್ಪೆಷಲ್ ಟ್ರಾಫಿಕ್ ಕಮಿಷನರ್ ಸಲೀಂ ಅವರು ಇಲಾಖೆಯ ಎಲ್ಲಾ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗೆ ಟಾಸ್ಕ್ ನೀಡಿದ್ದಾರೆ. ಸಿಬ್ಬಂದಿಯ ಕಾರ್ಯ ನಿರ್ವಹಣೆಯ ಸ್ಥಳದ ವ್ಯವಸ್ಥೆ ಬಗ್ಗೆ ಮ್ಯಾಪಿಂಗ್ ಮಾಡಲು ಸೂಚನೆ ನೀಡಿದ್ದಾರೆ. ತಗ್ಗು ಪ್ರದೇಶ, ರಸ್ತೆ ಬದಿ ನೀರು ನಿಲ್ಲುವ ಸ್ಥಳ, ಅಂಡರ್ ಪಾಸ್, ಬೀಳುವ ಹಂತದಲ್ಲಿರೋ ಮರಗಳು, ರಸ್ತೆ ಗುಂಡಿಗಳು, ಮೇಲ್ಸೇತುವೆಗಳ ನೀರು ಹೋಗುವ ಪೈಪ್ ಸಿಸ್ಟಮ್,‌ ರಸ್ತೆ ಬದಿಯಲ್ಲಿ ನೀರು ಇಂಗಲು ಹಾಕಿರೋ ಪೈಪ್ ಗಳ ಪರಿಸ್ಥಿತಿಯ ಚಿತ್ರಣದ ಸಂಪೂರ್ಣ ಮಾಹಿತಿಗೆ ಸೂಚನೆ ನೀಡಲಾಗಿದೆ. ನಗರದ ಎಲ್ಲಾ ಠಾಣಾಧಿಕಾರಿಗಳಿಗೆ ಸೂಚನೆ‌ ಕೊಟ್ಟಿದ್ದು, ಅವ್ಯವಸ್ಥೆಯ ಫೋಟೋಗಳನ್ನ ಗ್ರೂಪ್ ನಲ್ಲಿ ಲೊಕೇಷನ್ ಸಮೇತ ಕಳಿಸಲು ಸಲಹೆ ನೀಡಿದ್ದಾರೆ. ಅದಲ್ಲದೆ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಜಂಟಿಯಾಗಿ ಬಗೆಹರಿಸಲು ಸೂಚಿಸಿದ್ದಾರೆ. ಮುಖ್ಯವಾಗಿ ಮೇಲ್ಸೇತುವೆ ಹಾಗೂ ಅಂಡರ್ ಪಾಸ್ ಗಳ ಮಳೆ ನೀರಿನ ಇಂಗುವಿನ ವ್ಯವಸ್ಥೆ ಸರಿಪಡಿಸೋ ಬಗ್ಗೆಯೂ ಸೂಚಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಭಾರೀ ಗಾಳಿ, ಮಳೆ ಸಾಧ್ಯತೆ; ಕರಾವಳಿಯಲ್ಲಿ ಹೈ ಅಲರ್ಟ್

ಕಬ್ಬನ್​​ಪಾರ್ಕ್​​​ನಲ್ಲಿ 40ಕ್ಕೂ ಹೆಚ್ಚು ಮರಗಳು ಧರೆಗೆ

ಹಚ್ಚ ಹಸಿರು, ಎತ್ತರದ ಹಳೇ ಮರಗಳಿಂದ ಅಂದ ಹೆಚ್ಚಿಸಿಕೊಂಡಿದ್ದ ಪ್ರವಾಸಿಗರ ಫೇವರೇಟ್ ಸ್ಪೋಟ್ ಕಬ್ಬನ್ ಪಾರ್ಕ್​ನಲ್ಲಿ ನಿನ್ನೆ(ಮೇ 22) ಸುರಿದ ರಣ ಮಳೆಗೆ ಮರಗಳೇ ನಲುಗಿಹೋಗಿವೆ. ಬಿರುಗಾಳಿ ಸಹಿತ ಮಳೆಗೆ ದೊಡ್ಡ ದೊಡ್ಡ ಮರಗಳೇ ಬುಡಮೇಲಾಗಿವೆ. ಕಬ್ಬನ್ ಪಾರ್ಕ್​​​ನಲ್ಲಿ 2 ಸಾವಿರಕ್ಕೂ ಹೆಚ್ಚು ಮರಗಳಿವೆ. ನಿನ್ನೆಯ ಬಿರುಗಾಳಿ ಸಹಿತ ಮಳೆಗೆ, 40 ಕ್ಕೂ ಹೆಚ್ಚು ಮರಗಳು ಧರಶಾಹಿಯಾಗಿವೆ. ನೂರಾರು ಮರಗಳ ರಂಬೆ, ಕೊಂಬೆಗಳು ನೆಲಕ್ಕುರುಳಿವೆ.

ಪಾರ್ಕ್​​ನ ಒಳಗೆ ಫುಟ್ ಪಾತ್ ಮೇಲೆಲ್ಲ ಮರ ಬಿದ್ದಿದ್ದು, ಎಲ್ಲವನ್ನೂ ತೆರವು ಮಾಡಲಾಗ್ತಿದೆ. ಇನ್ನು ಸಿಟಿಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಇನ್ನೆರಡು ದಿನ ಸಾರ್ವಜನಿಕರು ಪಾರ್ಕ್​ಗೆ ಬರುವುದನ್ನ ಅವೈಡ್ ಮಾಡಬೇಕು ಅಂತ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕಬ್ಬನ್ ಪಾರ್ಕ್​ನ ಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ ವಾಯುವಿಹಾರಿಗಳು

ಮಳೆ ಬಂದರೆ ಜನ ಮರದ ಬುಡದಲ್ಲೇ ನಿಲ್ಲಬೇಕು. ಅದೇ ಮರ ಬಿದ್ದುಬಿಟ್ರೆ ನಿಜಕ್ಕೂ ಕಷ್ಟ ಆಗುತ್ತೆ. 70 ,80 ವರ್ಷ ಹಳೆಯ ಮರಗಳೆ ಬೀಳ್ತಿವೆ. ಜಸ್ಟ್ 30 ಸೆಕೆಂಡ್ ಬೀಸಿದ ಗಾಳಿಗೆ ಇಷ್ಟೊಂದು ಮರ ಬಿದ್ದಿದೆ. ಇನ್ನೂ ಅರ್ಧ ಗಂಟೆ ಗಾಳಿ ಬೀಸಿಬಿಟ್ರೆ ಕಥೆ ಏನು? ಎಂದು ವಾಯುವಿಹಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:07 am, Tue, 23 May 23