AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ರಸ್ತೆಗಳಲ್ಲಿ ಹೆಚ್ಚಾಯ್ತು ಸಿರಿವಂತರ ಜಾಲಿ ರೈಡ್​; ಅತಿ ವೇಗದಲ್ಲಿ ಓಡಾಡಿದ ಉದ್ಯಮಿಯ ಬೆನ್ಜ್​ ಕಾರು ಪೊಲೀಸರ ವಶಕ್ಕೆ

ಮೊಜು ಮಸ್ತಿಯಲ್ಲಿ ತೊಡಗಿದ್ದ ಮಕ್ಕಳ ಪೋಷಕರಿಗೆ ಪೊಲೀಸರಿಂದ ಕರೆ ಹೋಗಿದ್ದು, ಬೆನ್ಜ್ ಕಾರ್ ಮಾಲೀಕ ಸಂಜಿತ್ ಶೆಟ್ಟಿಗೆ ನೋಟಿಸ್ ನೀಡಿದ ಸಂಚಾರಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದಾರೆ.

ಬೆಂಗಳೂರಿನ ರಸ್ತೆಗಳಲ್ಲಿ ಹೆಚ್ಚಾಯ್ತು ಸಿರಿವಂತರ ಜಾಲಿ ರೈಡ್​; ಅತಿ ವೇಗದಲ್ಲಿ ಓಡಾಡಿದ ಉದ್ಯಮಿಯ ಬೆನ್ಜ್​ ಕಾರು ಪೊಲೀಸರ ವಶಕ್ಕೆ
ಸಾಂಕೇತಿಕ ಚಿತ್ರ
TV9 Web
| Updated By: preethi shettigar|

Updated on: Sep 13, 2021 | 9:10 AM

Share

ಬೆಂಗಳೂರು: ಬೆಂಗಳೂರಿನಲ್ಲಿ ಸಂಭವಿಸಿದ ಐಷಾರಾಮಿ ಕಾರಿನ ಭೀಕರ ಅಪಘಾತದ ಕಹಿ ನೆನಪು ಮಾಸುವ ಮುನ್ನವೇ ಮತ್ತೆ ಶ್ರೀಮಂತರ ಮೋಜು ಮಸ್ತಿ ಶುರುವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವ ರೀತಿಯಲ್ಲಿ ಅತಿ ವೇಗವಾಗಿ ದುಬಾರಿ ಕಾರು ಚಲಾಯಿಸುತ್ತಿರುವ ಘಟನೆ ವರದಿಯಾಗಿದೆ. ಸದಾಶಿವನಗರದ ಸ್ಯಾಂಕಿಟ್ಯಾಂಕ್ ಬಳಿ‌ ಘಟನೆ ನಡೆದಿದ್ದು, ಉದ್ಯಮಿಯೊಬ್ಬರ ಹೆಸರಿನಲ್ಲಿರುವ ಐಷಾರಾಮಿ ಬೆನ್ಜ್ ಕಾರ್​ನಲ್ಲಿ ಯುವಕರು ಮೋಜು ಮಸ್ತಿ ಮಾಡಿದ್ದಾರೆ. ಅತೀ ವೇಗವಾಗಿ ಕಾರು ಓಡಿಸುವುದಲ್ಲದೇ ಕಿಟಕಿ ಪಕ್ಕ ಕುಳಿತ ಯುವಕ ಯುವತಿಯರು ಅಪಾಯಕಾರಿ ರೀತಿಯಲ್ಲಿ ವರ್ತಿಸಿರುವುದು ಕಂಡುಬಂದಿದೆ.

ಸೆಪ್ಟೆಂಬರ್​ 11 ರ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಉದ್ಯಮಿ ಸಂಜಿತ್ ಶೆಟ್ಟಿ ಮಾಲೀಕತ್ವದ ಬೆನ್ಜ್ ಕಾರು ಸೋಹಮ್ ರಿನವೆಬಲ್ ಎನೆರ್ಜಿ ಪ್ರೈ.ಲಿ. ಕಂಪನಿಗೆ ಸೇರಿದೆ ಎಂದು ತಿಳಿದುಬಂದಿದೆ. ಸಂಚಾರಿ ನಿಯಮ ಉಲ್ಲಂಘಿಸಿ ಕಾರು ಚಲಾಯಿಸಿರುವುದು ತಿಳಿಯುತ್ತಿದ್ದಂತೆಯೇ ಎಚ್ಛೆತ್ತ ಸದಾಶಿವನಗರ ಸಂಚಾರಿ ಪೊಲೀಸರು ಕೂಡಲೇ ಸುಮೋಟೊ ಪ್ರಕರಣ ದಾಖಲಿಸಿಕೊಂಡು ಐಷಾರಾಮಿ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಭಯವಿಲ್ಲದೇ, ಸಂಚಾರಿ ನಿಯಮ, ನೈಟ್​ ಕರ್ಫ್ಯೂ ನಿಯಮಗಳನ್ನು ಗಾಳಿಗೆ ತೂರಿ ಕಾರು ಓಡಿಸಿದ ಬಗ್ಗೆ ತನಿಖೆ ಆರಂಭವಾಗಿದ್ದು, ಶ್ರೀಮಂತರ ಮಕ್ಕಳ ಬೇಕಾಬಿಟ್ಟಿ ಮಸ್ತಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಸದಾಶಿವನಗರ ಸಂಚಾರಿ ಠಾಣೆಯಲ್ಲಿ ಐಪಿಸಿ‌ ಸೆಕ್ಷನ್ 279, 336 ಅಡಿ ಪ್ರಕರಣ‌ ದಾಖಲಾಗಿದ್ದು, ಸೆಕ್ಷನ್ 279ರ ಅಡಿ ಸಾರ್ವಜನಿಕ ಪ್ರದೇಶದಲ್ಲಿ ವೇಗವಾದ ಚಾಲನೆ ಹಾಗೂ ಸೆಕ್ಷನ್ 336ರ ಅಡಿ ನಿರ್ಲಕ್ಷ್ಯದ ಚಾಲನೆ ಎಂದು ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ.

ಎಫ್​ಐಆರ್ ದಾಖಲಿಸಿಕೊಂಡ ಸಂಚಾರಿ ಪೊಲೀಸರು ತನಿಖೆ ಮುಂದುವರೆಸಿದ್ದು, ಘಟನೆ ನಡೆದ ಸ್ಥಳದ ಸುತ್ತಮುತ್ತ ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಪರಿಶೀಲನೆ ವೇಳೆ ಯುವಕ, ಯುವತಿಯರ ಜಾಲಿ ರೈಡ್ ಸ್ಪಷ್ಟವಾಗಿ ಕಂಡುಬಂದಿದ್ದು, ವಿಂಡೋ ಮೇಲೆ ಕುಳಿತು ವೇಗದ ಚಾಲನೆ ಮಾಡಿರುವುದೂ ಕಾಣಿಸಿದೆ ಎನ್ನಲಾಗಿದೆ.

ಮೊಜು ಮಸ್ತಿಯಲ್ಲಿ ತೊಡಗಿದ್ದ ಮಕ್ಕಳ ಪೋಷಕರಿಗೆ ಪೊಲೀಸರಿಂದ ಕರೆ ಹೋಗಿದ್ದು, ಬೆನ್ಜ್ ಕಾರ್ ಮಾಲೀಕ ಸಂಜಿತ್ ಶೆಟ್ಟಿಗೆ ನೋಟಿಸ್ ನೀಡಿದ ಸಂಚಾರಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದಾರೆ. ಕೊರಮಂಗಲ ಘಟನೆ ಬಳಿಕವೂ ಯಾವುದೇ ಆತಂಕವಿಲ್ಲದೇ ಅಪಾಯಕಾರಿ ರೀತಿಯಲ್ಲಿ ಕಾರು ಚಾಲನೆ ಮಾಡಿದ್ದಕ್ಕೆ ಅಸಲಿ ಕಾರಣವೇನು? ನಿಯಮ ಉಲ್ಲಂಘನೆ ವೇಳೆ ಕಾರಿನಲ್ಲಿದ್ದವರು ಯಾರು ಯಾರು? ಎಂದು ಮಾಹಿತಿ ಕಲೆ ಹಾಕಲಾಗುತ್ತಿದೆ.

ಲಭ್ಯವಾಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಸಂಜಿತ್ ಶೆಟ್ಟಿ ಪುತ್ರ ಹಾಗೂ ಗೆಳೆಯರು ಈ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ. ಅಲ್ಲದೇ ಕಾರಿನಲ್ಲಿ ಐದು ಜನ ಇದ್ದರು ಎಂದು ಗೊತ್ತಾಗಿದೆ. ಆದರೆ, ಈವರೆಗೆ ನಿಖರವಾಗಿ ಯಾರ ಗುರುತೂ ಪತ್ತೆಯಾಗಿಲ್ಲ. ಹೀಗಾಗಿ ಈ ಬಗ್ಗೆ ಮಾಹಿತಿ ನೀಡುವಂತೆ ಕೊರಿ ನೋಟಿಸ್ ನೀಡಲಾಗಿದ್ದು, ಇಂದು ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡುವ ಸಾಧ್ಯತೆ ಇದೆ.

ವೇಗವಾಗಿ ಕಾರು ಓಡಿಸಿದ ಯುವಕರು ಎಲ್ಲಿಂದ ಎಲ್ಲಿಗೆ ಹೊರಟಿದ್ದರು, ಎಲ್ಲೆಲ್ಲಿ ಸುತ್ತಾಡಿದ್ದರು ಎನ್ನುವ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದ್ದು, ಯುವಕರ ಜಾಲಿ ರೇಡ್ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ಕೇಳಿದ್ದಾರೆ. ಕೊರಮಂಗಲ ಘಟನೆ ಬಳಿಕವೂ ಇನ್ನೂ ಎಚ್ಚೆತ್ತುಕೊಳ್ಳದ ಕಾರಣ ಪ್ರಕರಣದ ಗಂಭೀರತೆ ಹೆಚ್ಚಾಗಲಿದ್ದು, ತನಿಖೆ ತೀವ್ರವಾಗಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ರಾತ್ರಿ ಮತ್ತೊಂದು ಶಾಸಕ ಪುತ್ರಿ ಕಾರ್ ಅಪಘಾತ: ಯಲಹಂಕ ಫ್ಲೈ ಓವರ್ ಮೇಲೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು 

ಬೆಂಗಳೂರಿನಲ್ಲಿ ಐಷಾರಾಮಿ ಆಡಿ ಕ್ಯೂ3 ಕಾರು ಭೀಕರ ಅಪಘಾತ; ಕಾರಿನಲ್ಲಿದ್ದ 7 ಮಂದಿ ದುರ್ಮರಣ

(Bengaluru Rash Driving in Luxury cars police detained one costly car investigation going on)