ನಿಯಮ ಉಲ್ಲಂಘಿಸುವ ಮಾಲೀಕರಿಗೆ ಆರ್​​ಟಿಒ ಶಾಕ್: ಔಡಿ, ಹುಂಡೈ ಸೇರಿ 50 ಕಾರು ಸೀಜ್, 25 ಲಕ್ಷ ರೂ. ವಸೂಲಿ

ಬೇರೆ ಬೇರೆ ರಾಜ್ಯಗಳಲ್ಲಿ ಕಾರು ನೋಂದಣಿ ಮಾಡಿ ಕರ್ನಾಟಕದಲ್ಲಿ ಸಂಚಾರ ಮಾಡಲು ಯಾವುದೇ ತೆರಿಗೆ ಪಾವತಿಸದೆ, ಎನ್ಓಸಿ ಕೂಡ ಪಡೆಯದೆ ವೈಟ್ ಬೋರ್ಡ್​ನಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದವರ ಮೇಲೆ ಬೆಂಗಳೂರು ಆರ್​​ಟಿಒ ಕ್ರಮ ಕೈಗೊಂಡಿದೆ. ಔಡಿ, ಹುಂಡೈ, ವರ್ನಾ ಸೇರಿದಂತೆ 50 ವಾಹನಗಳನ್ನು ಸೀಜ್ ಮಾಡಿದ್ದು, 250 ಕ್ಕೂ ಹೆಚ್ಚು ಕೇಸ್ ದಾಖಲಿಸಲಾಗಿದೆ 25 ಲಕ್ಷ ರುಪಾಯಿ ದಂಡ ವಸೂಲಿ ಮಾಡಲಾಗಿದೆ.

ನಿಯಮ ಉಲ್ಲಂಘಿಸುವ ಮಾಲೀಕರಿಗೆ ಆರ್​​ಟಿಒ ಶಾಕ್: ಔಡಿ, ಹುಂಡೈ ಸೇರಿ 50 ಕಾರು ಸೀಜ್, 25 ಲಕ್ಷ ರೂ. ವಸೂಲಿ
ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿರುವುದು
Edited By:

Updated on: Jul 11, 2024 | 3:12 PM

ಬೆಂಗಳೂರು, ಜುಲೈ 11: ವರ್ಷಗಳ ಕಾಲ ಅನಧಿಕೃತವಾಗಿ ಬೆಂಗಳೂರಿನಲ್ಲಿ ಸಂಚಾರ ಮಾಡುತ್ತಿದ್ದ ಬೇರೆಬೇರೆ ರಾಜ್ಯದ ಕಾರುಗಳ ಮೇಲೆ ಇದೀಗ ಬೆಂಗಳೂರು ಆರ್​​ಟಿಒ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಬೇರೆ ರಾಜ್ಯದ ಕಾರುಗಳು ರಾಜ್ಯದಲ್ಲಿ ಸಂಚಾರ ಮಾಡಬೇಕಿದ್ದರೆ ಎನ್ಓಸಿ ಪಡೆದಿರಬೇಕು. ಜತೆಗೆ ತೆರಿಗೆ ಪಾವತಿಸಿರಬೇಕು. ಆದರೆ ಈ ಕಿಲಾಡಿ ಕಾರು ಮಾಲೀಕರು ಬೇರೆ ರಾಜ್ಯದಲ್ಲಿ ಕಾರು ಖರೀದಿ ಮಾಡಿ ಇಲ್ಲಿ ಆರ್​​ಟಿಒ ಅನುಮತಿ ಪಡೆಯದೆ ಸಂಚಾರ ಮಾಡುತ್ತಿದ್ದರು.

ದೆಹಲಿ, ಮಹಾರಾಷ್ಟ್ರ, ಜಾರ್ಖಂಡ್, ಹರಿಯಾಣ, ನ್ಯಾಗಲ್ಯಾಂಡ್ ರಿಜಿಸ್ಟ್ರೇಷನ್ ವಾಹನಗಳು ನಿಯಮಬಾಹಿರವಾಗಿ ಬೆಂಗಳೂರಿನಲ್ಲಿ ಸಂಚಾರ ಮಾಡುತ್ತಿದ್ದವು. ಅಂತಹ ವಾಹನಗಳ ವಿರುದ್ಧ ಕೋರಮಂಗಲ ಆರ್​ಟಿಒ ವ್ಯಾಪ್ತಿಯಲ್ಲಿ ಹತ್ತು ತಂಡಗಳಲ್ಲಿ ಅಧಿಕಾರಿಗಳು ಕಾರ್ಯಚರಣೆ ನಡೆಸಿದ್ದಾರೆ. ಸುಮಾರು 500 ವಾಹನಗಳನ್ನು ತಪಾಸಣೆ ಮಾಡಿ ಐಷಾರಾಮಿ ಕಾರುಗಳಾದ ಔಡಿ, ಹುಂಡೈ ವರ್ನಾ, ಇನ್ನೋವಾ ಸೇರಿದಂತೆ 50 ಕಾರುಗಳನ್ನು ಸೀಜ್ ಮಾಡಲಾಗಿದೆ. 250 ಕೇಸ್ ದಾಖಲಿಸಿ 25 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ‌. ಈ ಬಗ್ಗೆ ಆರ್​​ಟಿಒ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ ಕಾರ್ಯಾಚರಣೆ?

ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ಕಾರ್ಯಾಚರಣೆ ಆರಂಭ ಮಾಡಿದ ಆರ್​​ಟಿಒ ಅಧಿಕಾರಿಗಳು ಮಡಿವಾಳ, ಹೆಚ್ಎಸ್ಆರ್ ಲೇಔಟ್, ಸಿಲ್ಕ್ ಬೋರ್ಡ್, ಬೆಳ್ಳಂದೂರು, ರಿಂಗ್ ರೋಡ್ ಸೇರಿದಂತೆ ಹತ್ತು ಕಡೆಗಳಲ್ಲಿ ತಪಾಸಣೆ ಮಾಡಿದ್ದಾರೆ. ಕಾರುಗಳ ಮೇಲೆ ಅನಧಿಕೃತವಾಗಿ ಜಾಹೀರಾತು ಹಾಕಿಕೊಂಡಿದ್ದ, ಟ್ಯಾಕ್ಸ್ ಕಟ್ಟದ, ವೈಟ್ ಬೋರ್ಡ್​​​ನಲ್ಲಿ ಟ್ರಾವೆಲ್ಸ್ ನಡೆಸುತ್ತಿದ್ದ, ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಿದ್ದ ಅಗ್ರಿಗೇಟರ್ ಕಂಪನಿಗಳ ವಾಹನಗಳನ್ನು ತಪಾಸಣೆ ಮಾಡಿದ್ದಾರೆ.

Bengaluru RTO Officers shock for car owners from other states who violate rules, Bangalore news in Kannada

ಆರ್​ಟಿಒ ಅಧಿಕಾರಿಗಳು ಸೀಜ್ ಮಾಡಿರುವ ಕಾರುಗಳು

ಈ ವೇಳೆ ಮಾತಾನಾಡಿದ ಒಬ್ಬ ಕಾರು ಚಾಲಕ, ‘ನಾನು ಚೆನ್ನೈಯಿಂದ ಬಂದಿದ್ದೇನೆ. ನಮ್ಮ ಕಾರಿನ ಮಾಲೀಕರು ವಿದೇಶದಲ್ಲಿದ್ದರು. ಈಗ ಶಾಪಿಂಗ್ ಮಾಡಲು ಬೆಂಗಳೂರಿಗೆ ಬಂದಿದ್ದಾರೆ. ಎರಡು ತಿಂಗಳ ಹಿಂದೆ ಬಂದಿದ್ದೆವು. ಈಗ ಆರ್​​ಟಿಒ ಅಧಿಕಾರಿಗಳು ಎನ್ಓಸಿ ಕೇಳ್ತಿದ್ದಾರೆ ನನ್ನ ಬಳಿ ಇಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಕಾಮಗಾರಿ, ಬದಲಿ ಮಾರ್ಗ ಇಲ್ಲಿದೆ

ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ನಾವು ಆಡಿದ್ದೇ ಆಟ, ನಾವು ಮಾಡ್ಕೊಂಡಿದ್ದೇ ನಿಯಮ ಎಂದು ಆರ್​​ಟಿಒ ಕಣ್ಣಿಗೆ ಮಣ್ಣೆರಚ್ಚುತ್ತಿದ್ದ ಕಾರು ಮಾಲೀಕರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us