ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ 2022ಕ್ಕಿಂತ 2023ರಲ್ಲಿ ಕಡಿಮೆಯಾಗಿದೆ: ಪೊಲೀಸ್ ಆಯುಕ್ತ ದಯಾನಂದ

| Updated By: ವಿವೇಕ ಬಿರಾದಾರ

Updated on: Feb 06, 2024 | 12:33 PM

ಬೆಂಗಳೂರಿನಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಟ್ರಾಫಿಕ್​ ಜಾಮ್​ ಕಿರಿಕಿರಿ ತಪ್ಪಿದ್ದಲ್ಲ. ಒಂದಲ್ಲಾ ಒಂದು ಸ್ಥಳದಲ್ಲಿ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಳ್ಳುತ್ತಾರೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಗರ ಸಂಚಾರಿ ಪೊಲೀಸ್​ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಟ್ರಾಫಿಕ್​ ಪೊಲೀಸರ ಪರಿಶ್ರಮಕ್ಕೆ ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ ನೀಡಿದ ವರದಿ ಸಂತಸ ಉಂಟುಮಾಡಿದೆ. ಈ ವರದಿಯಲ್ಲಿ ಏನಿದೆ ಎಂಬುವುದರ ಬಗ್ಗೆ ಪೊಲೀಸ್​ ಆಯುಕ್ತ ಬಿ. ದಯಾನಂದ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ 2022ಕ್ಕಿಂತ 2023ರಲ್ಲಿ ಕಡಿಮೆಯಾಗಿದೆ: ಪೊಲೀಸ್ ಆಯುಕ್ತ ದಯಾನಂದ
ಪೊಲೀಸ್​ ಆಯುಕ್ತ ಬಿ ದಯಾನಂದ
Follow us on

ಬೆಂಗಳೂರು, ಫೆಬ್ರವರಿ 06: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸಂಚಾರ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆಯಾಗಿದೆ. ಡಚ್ ಸಂಸ್ಥೆಯ ಟಾಮ್ ಇತ್ತೀಚೆಗೆ 2023 ಸರ್ವೆ ವರದಿ ಬಿಡುಗಡೆ ಮಾಡಿದೆ. ಟಾಮ್ ಸರ್ವೆ ವರದಿ ಪ್ರಕಾರ ಜಾಗತಿಕ ಸಂಚಾರ ದಟ್ಟಣೆಯ (Traffic Congestion) ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದ ಬೆಂಗಳೂರು ಆರನೇ ಸ್ಥಾನಕ್ಕೆ ಇಳಿದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ (B Dayananda) ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಂಚಾರ ದಟ್ಟಣೆಯಲ್ಲಿ ಬೆಂಗಳೂರು ನಗರ 2022ರಲ್ಲಿ ಎರಡನೇ ಸ್ಥಾನದಲ್ಲಿತ್ತು. 2023ರಲ್ಲಿ ಆರನೇ ಸ್ಥಾನಕ್ಕೆ ಇಳಿದಿದೆ ಎಂದು ಟಾಮ್​ ವರದಿ ನೀಡಿದೆ ತಿಳಿಸಿದರು.

ಹಲವು ಸುಧಾರಣೆಗಳ ಮೂಲಕ ಸಂಚಾರ ದಟ್ಟಣೆಯನ್ನು ನಿಯಂತ್ರಣ ತರಲಾಗಿದೆ. ಸುಗಮ ಸಂಚಾರಕ್ಕೆ ಜಂಕ್ಷನ್​ಗಳಲ್ಲಿ ಕರ್ತವ್ಯ ನಿರತ ಸಿಬ್ಬಂದಿ ಅಥವಾ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅತ್ಯಾಧುನಿಕ ಡ್ರೋಣ್, ಸಿಸಿಟಿವಿಇತರೆ ಸುಧಾರಿತ ತಂತ್ರಜ್ಞಾನಗಳನ್ನು ಬಳಸಲಾಗಿದೆ. ನಮ್ಮ ಮೆಟ್ರೋ ಸಂಪರ್ಕವನ್ನು ಸುಧಾರಿಸಲಾಗಿದೆ. ಟ್ರಾಫಿಕ್ ಬಸ್ ಸ್ಟಾಪ್ ಸ್ಥಳಾಂತರ, ಯೂಟರ್ನ್ ಮುಚ್ಚುವಿಕೆ, ಸಿಗ್ನಲ್ ಹಂತ ಬದಲಾವಣೆ ಹೀಗೆ ವಿವಿಧ ಕ್ರಮಗಳಿಂದ ವಾಹನ ದಟ್ಟಣೆ ಪ್ರಮಾಣ ಕಡಿಮೆಯಾಗಿದೆ. ಪ್ರಯಾಣದ ಸಮಯ ಕಡಿಮೆ ಮಾಡಿದ ಟಾಪ್ 10 ಪಟ್ಟಿಯಲ್ಲಿ ಬೆಂಗಳೂರು ನಂಬರ್ ಒನ್​ನಲ್ಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಜಾಗತಿಕ ಸಂಚಾರ ದಟ್ಟಣೆಯ ಶ್ರೇಯಾಂಕದಲ್ಲಿ 2 ರಿಂದ 6ನೇ ಸ್ಥಾನಕ್ಕೆ ಇಳಿದ ಬೆಂಗಳೂರು

ಸಬ್ಸಿಡಿ ದರದಲ್ಲಿ ಕಾರು, ಸೈಟ್​ ಕೊಡಿಸುವುದಾಗಿ ವಂಚನೆ, ಆರೋಪಿಗಳು ಅರೆಸ್ಟ್​

ಬಿಬಿಎಂಪಿಯಿಂದ ಸಬ್ಸಿಡಿ ದರದಲ್ಲಿ ಕಾರು ಮತ್ತು ಸೈಟ್​ ಕೊಡಿಸುವುದಾಗಿ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಸಬ್ಸಿಡಿ ದರದಲ್ಲಿ ಕಾರು, ಸೈಟ್, ಯುವಕರಿಗೆ ಕೆಲಸ, ವಿಧವೆಯರಿಗೆ ಮಾಸಾಶನ ಮತ್ತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಕೊಡಿಸುವುದಾಗಿ 60ಕ್ಕೂ ಹೆಚ್ಚು ಜನರಿಂದ ಹಣ ಪಡೆದು ವಂಚಿಸಿದ್ದರು ಎಂದು ಪೊಲೀಸ್ ಆಯುಕ್ತ ದಯಾನಂದ್ ಹೇಳಿದರು.

ಆರೋಪಿಗಳು ಹಣವನ್ನು ನೇರವಾಗಿ ತಮ್ಮ ಅಕೌಂಟ್​ಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಆರೋಪಿಗಳು ಸುಮಾರು 15ಲಕ್ಷ ಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಉತ್ತರ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ತನಿಖೆ ಮುಂದುವರೆದಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ