
ಬೆಂಗಳೂರು, ಏಪ್ರಿಲ್ 09: ಇತ್ತೀಚೆಗೆ ಒಂದು ವಿಡಿಯೋ ಭಾರೀ ವೈರಲ್ ಆಗಿತ್ತು. ಅದರಲ್ಲಿ ಓರ್ವ ವ್ಯಕ್ತಿ ಗಂಟೆಗಟ್ಟಲ್ಲೇ ನಿಂತಲ್ಲೇ ನಿಂತಿದ್ದ. ಇದನ್ನ ಕೆಲವರು ಬೆಂಗಳೂರಿನಲ್ಲಿ ಜೋಂಬಿ ಡ್ರಗ್ಸ್ (zombie drug) ಕಾಲಿಟ್ಟಿದೆ ಎಂದು ವೈರಲ್ ಮಾಡಲಾಗಿತ್ತು. ಇನ್ನು ಇದೇ ವಿಚಾರವಾಗಿ ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಕೂಡ ಧ್ವನಿ ಎತ್ತಿದ್ದಾರೆ. ಇದೀಗ ಈಶಾನ್ಯ ವಿಭಾಗದ ಪೊಲೀಸರಿಂದ ಈ ಬಗ್ಗೆ ತನಿಖೆ ಮಾಡಲಾಗಿದ್ದು, ಈ ವೇಳೆ ಅಸಲಿಯತ್ತು ಬಯಲಾಗಿದೆ. ಜೋಂಬಿ ಡ್ರಗ್ಸ್ ಎನ್ನುವುದೇ ಇಲ್ಲಾ ಎಂಬ ಸ್ಫೋಟಕ ಸತ್ಯ ಹೊರಬಿದ್ದಿದೆ.
ಅಸಲಿಗೆ ವಿಡಿಯೋದಲ್ಲಿ ಇರುವ ವ್ಯಕ್ತಿ ಪಂಜಾಬ್ ಮೂಲದ ಲಾರಿ ಚಾಲಕ ರಾಜವೀರ್ ಸಿಂಗ್. ಈತ ಈ ಹಿಂದೆ ಅಫೀಮು ಎಂಬ ಡ್ರಗ್ಸ್ ಸೇವನೆ ಮಾಡಿದ್ದ. ಹೀಗಾಗಿ ಆತನ ಕುಟುಂಬ ಅವನನ್ನು ಡಿ ಅಡಿಕ್ಷನ್ ಸೆಂಟರ್ಗೆ ಸೇರಿಸಿದ್ದರು. ಬಳಿಕ ಆತ ಬೆಂಗಳೂರಿಗೆ ಬಂದಿದ್ದ. ಲಾರಿ ಚಾಲಕನಾಗಿ ಕೆಲಸ ಮಾಡಲು ಮುಂದಾಗಿದ್ದ. ಕೆಲ ಚಾಲಕರ ಜೊತೆಗೆ ಸೇರಿಕೊಂಡು ಶೆಡ್ನಲ್ಲಿ ವಾಸ ಮಾಡುತ್ತಿದ್ದ. ಇನ್ನು ಈತನಿಗೆ ಆರ್ಥರೈಟಿಸ್ (ಸಂಧಿವಾತ) ಮತ್ತು ಸೈನಸೈಟಿಸ್ ಎಂಬ ಕಾಯಿಲೆ ಕೂಡ ಇದೆ.
ಇದನ್ನೂ ಓದಿ: ಹೋಟೆಲ್ ಬಳಿ ಡ್ರಗ್ಸ್ ಸೇವನೆ: ಪ್ರಶ್ನಿಸಿದ್ದಕ್ಕೆ ಗಲಾಟೆ; ಸಿಕ್ಕಸಿಕ್ಕ ವಸ್ತುಗಳಿಂದ ಹೊಡೆದಾಟ
ಲಾರಿ ಚಾಲಕರ ಜೊತೆಗೆ ಸೇರಿ ಕಂಠ ಪೂರ್ತಿ ಮದ್ಯ ಸೇವನೆ ಮಾಡಿದ್ದ. ಬಳಿಕ ಎರಡು ಮಾತ್ರೆಯನ್ನು ಎಂದಿನಂತೆ ತೆಗೆದುಕೊಂಡಿದ್ದ. ಮಾತ್ರೆಗಳು ಮತ್ತು ಮದ್ಯ ಸೇರಿ ಕೆಮಿಕಲ್ ರಿಯಾಕ್ಷನ್ನಿಂದ ಕಣ್ಣು ಮಂಜಾಗಿತ್ತು. ನಡೆಯುವುದು, ಓಡಾಡುವುದು ಕಷ್ಟವಾಗಿತ್ತು. ಹೀಗಾಗಿ ಒಂದೇ ಕಡೆ ನಿಂತಲ್ಲಿಯೇ ನಿಂತಿದ್ದ. ಇದನ್ನ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರಿನಲ್ಲಿ ಜೋಂಬಿ ಡ್ರಗ್ಸ್ ಎಂದು ವೈರಲ್ ಮಾಡಲಾಗಿತ್ತು. ಸದ್ಯ ತನಿಖೆಯಿಂದ ಅಸಲಿಯತ್ತು ಬಯಲಿಗೆ. ವಿಡಿಯೋ ಮಾಡಿ ಹರಿಬಿಟ್ಟವರ ವಿರುದ್ಧ ಕೇಸ್ ದಾಖಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಇನ್ನು ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿದ್ದು, ವಿಡಿಯೋದಲ್ಲಿರುವ ವ್ಯಕ್ತಿಯನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ಆ ವ್ಯಕ್ತಿ ಇಲ್ಲಿಯವರು ಅಲ್ಲ, ಎಣ್ಣೆ ಕುಡಿದು ಬಳಿಕ ಮೆಡಿಸಿನ್ ತೆಗೆದುಕೊಂಡಿದ್ದಕ್ಕೆ ಈ ರೀತಿ ಆಗಿದೆ. ಆತನಿಗೆ ಮೆಡಿಕಲ್ ಚಿಕಿತ್ಸೆ ಮಾಡಲಾಗಿದ್ದು ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭರ್ಜರಿ ಡ್ರಗ್ ಬೇಟೆ: ಬಟ್ಟೆ ವ್ಯಾಪಾರದ ನೆಪದಲ್ಲಿ ಎಂಡಿಎಂಎ ಮಾರುತ್ತಿದ್ದ ನೈಜೀರಿಯಾ ಪ್ರಜೆ ಅಂದರ್!
ಈ ರೀತಿ ವಿಡಿಯೋ ಹರಿಬಿಡುವ ಮುನ್ನ ಯೋಚನೆ ಮಾಡಿ. ಇಲ್ಲಾ ಮೊದಲು ಪೊಲೀಸರಿಗೆ ತಿಳಿಸಿ. ಈ ರೀತಿ ಸುಖಾ ಸುಮ್ಮನೆ ವೈರಲ್ ಮಾಡುವುದು ಸರಿಯಲ್ಲ. ಇದು ಸಿಟಿಗೆ ಮತ್ತು ಒಬ್ಬ ವ್ಯಕ್ತಿಗೆ ಕೆಟ್ಟ ಹೆಸರು ತರುವ ವಿಚಾರವಾಗಿದೆ. ಈ ವಿಡಿಯೋ ವೈರಲ್ ಮಾಡಿರುವ ವ್ಯಕ್ತಿ ಪತ್ತೆ ಮಾಡಿ ಕ್ರಮಕೈಗೊಳ್ಳುತ್ತೇವೆ. ನಮ್ಮ ಪೊಲೀಸರು ಡ್ರಗ್ಸ್ ವಿಚಾರವಾಗಿ ಕೆಲಸ ಮಾಡುತ್ತಿದ್ದಾರೆ. ಡ್ರಗ್ಸ್ ಬಗ್ಗೆ ಝೀರೋ ಟಾಲರೆನ್ಸ್ ಇದೆ. ಜನರು ಆತಂಕ ಪಡುವುದು ಬೇಡ. ಸಿಟಿ ಬಗ್ಗೆ ಅಪಪ್ರಚಾರ ಮಾಡಿದವರ ಮೇಲೆ ಕಾನುನೂ ಕ್ರಮ ಆಗಲಿದೆ. ವಿಡಿಯೋ ಶೇರ್ ಮಾಡಿದವರಿಗೂ ನೋಟಿಸ್ ಜಾರಿಯಾಗಲಿದೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.