
ಬೆಂಗಳೂರು, ಫೆಬ್ರವರಿ 16: ಹೋಳಿ ಹಬ್ಬದ (Holi Festival) ಹಿನ್ನೆಲೆ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿವಾರಣೆಗೆ ಭಾರತೀಯ ರೈಲ್ವೆ (Indian Railways) ಮಹತ್ವದ ಕ್ರಮ ಕೈಗೊಂಡಿದೆ. ವಿಶಾಖಪಟ್ಟಣ ಮತ್ತು ಎಸ್ಎಂವಿಟಿ ಬೆಂಗಳೂರು ನಡುವೆ ಸಂಚರಿಸುವ ವಿಶೇಷ ರೈಲು ಸೇವೆಯ ಅವಧಿಯನ್ನು ವಿಸ್ತರಿಸಿದೆ. ರೈಲು ಸಂಖ್ಯೆ 08581 ಬೆಂಗಳೂರು ಕಡೆಗೆ ಬರುವ ವಿಶಾಖಪಟ್ಟಣಂ–ಎಸ್ಎಂವಿಟಿ ಬೆಂಗಳೂರು ವಾರಾಂತ್ಯ ಎಕ್ಸ್ಪ್ರೆಸ್ (ಭಾನುವಾರ ಸಂಚಾರ) ಅನ್ನು ಮಾರ್ಚ್ 29ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ ರೈಲು ಸಂಖ್ಯೆ 08582 ಎಸ್ಎಂವಿಟಿ ಬೆಂಗಳೂರು–ವಿಶಾಖಪಟ್ಟಣಂ ವಾರಾಂತ್ಯ ಎಕ್ಸ್ಪ್ರೆಸ್ (ಸೋಮವಾರ ಸಂಚಾರ) ಮಾರ್ಚ್ 30ರವರೆಗೆ ಓಡಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇಂದಿನಿಂದ ಜಾರಿಗೆ ಬರುವಂತೆ ಬೆಂಗಳೂರಿನ ನಾಯಂಡಹಳ್ಳಿ ನಿಲ್ದಾಣದಲ್ಲಿ ನಾಲ್ಕು ರೈಲುಗಳಿಗೆ ಪ್ರಯೋಗಾತ್ಮಕವಾಗಿ ಒಂದು ನಿಮಿಷದ ನಿಲುಗಡೆ ನೀಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿಲುಗಡೆಗಳನ್ನು ಪ್ರಾಯೋಗಿಲಕವಾಗಿ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.