
ಬೆಂಗಳೂರು, ಜೂ.3: ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಜಾರಿಯಾಗುತ್ತಿರುವ ಎರಡು ಪ್ರಮುಖ ಸಾರಿಗೆ ಯೋಜನೆಗಳಾದ ‘ನಮ್ಮ ಮೆಟ್ರೋ’ (Namma Metro) ಮತ್ತು ‘ಬೆಂಗಳೂರು ಉಪನಗರ ರೈಲು’ (Suburban Rail) ಪೂರ್ವ ಬೆಂಗಳೂರಿನ ಬೆನ್ನಿಗಾನಹಳ್ಳಿಯಲ್ಲಿ ಸಂಪರ್ಕ ಸಾಧಿಸಲಿದೆ. ನಗರದ ಸಾರಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ, ಈ ಎರಡು ಬೃಹತ್ ಸಾರಿಗೆ ವ್ಯವಸ್ಥೆಗಳು ಒಂದೇ ಮಾರ್ಗದಲ್ಲಿ (Shared Alignment), ಒಂದರ ಕೆಳಗೆ ಮತ್ತೊಂದರಂತೆ ಸಂಚರಿಸುವ ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಇದು ಭೂಸ್ವಾಧೀನದ ವೆಚ್ಚ ಮತ್ತು ಯೋಜನಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಬೆನ್ನಿಗಾನಹಳ್ಳಿ ಫ್ಲೈಓವರ್ ಬಳಿ ಸುಮಾರು 500 ಮೀಟರ್ಗಳವರೆಗೆ ಉಪನಗರ ರೈಲಿನ ‘ಕನಕ ಲೈನ್’ ಮೇಲ್ಸೇತುವೆಯು, ನಮ್ಮ ಮೆಟ್ರೋದ ‘ಬ್ಲೂ ಲೈನ್’ ಮೇಲ್ಸೇತುವೆಯ ಕೆಳಭಾಗದಲ್ಲೇ ನೇರವಾಗಿ ಹಾದುಹೋಗಲಿದೆ. ಹೀಗಾಗಿ ಒಂದೇ ಪಿಲ್ಲರ್ ಬೇಸ್ನ ಮೇಲ್ಭಾಗದಲ್ಲಿ ಮೆಟ್ರೋ ಹಾಗೂ ಅದರ ಕೆಳಭಾಗದಲ್ಲಿ ಸಬರ್ಬನ್ ರೈಲು ಸಂಚರಿಸಲಿವೆ. ಕನಕ ಲೈನ್ ಹೀಲಳಿಗೆಯಿಂದ ರಾಜಾನುಕುಂಟೆಯನ್ನು (46 ಕಿ.ಮೀ) ಸಂಪರ್ಕಿಸಿದರೆ, ಮೆಟ್ರೋ ಬ್ಲೂ ಲೈನ್ ಕೆ.ಆರ್. ಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುತ್ತದೆ.
ಈ ಮಾದರಿಯಿಂದಾಗಿ ಬೆಂಗಳೂರಿನ ಅತ್ಯಂತ ದುಬಾರಿ ವಸತಿ ಪ್ರದೇಶದ ಸುಮಾರು 1.65 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡಲಾಗಿದೆ. ಇದರಿಂದಾಗಿ ಆ ಭಾಗದಲ್ಲಿ ವಾಸವಿದ್ದ ಸುಮಾರು 600 ಕ್ಕೂ ಹೆಚ್ಚು ನಿವಾಸಿಗಳು ತಮ್ಮ ಮನೆಗಳನ್ನು ಕಳೆದುಕೊಂಡು ಸ್ಥಳಾಂತರಗೊಳ್ಳುವ ದೊಡ್ಡ ಆಪತ್ತಿನಿಂದ ಪಾರಾಗಿದ್ದಾರೆ. ಈ ಅತ್ಯಾಧುನಿಕ ಕಲ್ಪನೆಯಿಂದ ಯೋಜನೆಗೆ ಅಂದಾಜು 150 ಕೋಟಿ ರೂಪಾಯಿಯಿಂದ 169 ಕೋಟಿ ರೂಪಾಯಿಗಳಷ್ಟು ಸಾರ್ವಜನಿಕ ಹಣ ಉಳಿತಾಯವಾಗಿದೆ ಎಂದು ಕೆ-ರೈಡ್ ಹೇಳಿದೆ.
ಈ ಯೋಜನೆಯಲ್ಲಿ ಎರಡು ವಿಭಿನ್ನ ವಿದ್ಯುತ್ ಶಕ್ತಿ ವ್ಯವಸ್ಥೆಗಳನ್ನು ಸಂಯೋಜಿಸುವುದು ಎಂಜಿನಿಯರ್ಗಳಿಗೆ ದೊಡ್ಡ ಸವಾಲಾಗಿತ್ತು. ಉಪನಗರ ರೈಲು ಆಲ್ಟರ್ನೇಟಿಂಗ್ ಕರೆಂಟ್ (AC) ಬಳಸಿದರೆ, ಮೆಟ್ರೋ ಡೈರೆಕ್ಟ್ ಕರೆಂಟ್ (DC) ತಂತ್ರಜ್ಞಾನದಲ್ಲಿ ಚಲಿಸುತ್ತದೆ. ಈ ಎರಡೂ ವಿಭಿನ್ನ ತಾಂತ್ರಿಕ ಸುರಕ್ಷತೆಯನ್ನು ಭಾರತೀಯ ವಿಜ್ಞಾನ ಸಂಸ್ಥೆಯು ಕೂಲಂಕಷವಾಗಿ ಮೌಲ್ಯಮಾಪನ ಮಾಡಿ ಗ್ರೀನ್ ಸಿಗ್ನಲ್ ನೀಡಿದೆ. ಜಾಗದ ಅಭಾವವಿರುವ ಭಾರತದ ಇತರೆ ಮೆಟ್ರೋ ಸಿಟಿಗಳಿಗೆ ಬೆಂಗಳೂರಿನ ಈ ಮಾದರಿಯನ್ನೇ ತರಲಾಗುವುದು ಎಂದು ಹೇಳಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ