
ಬೆಂಗಳೂರು, ಜುಲೈ 14: ವಿವಾದಿತ ಬಿಡದಿ ಟೌನ್ಶಿಪ್ ವಿರುದ್ಧ ಅನ್ನದಾತರ ಕಿಚ್ಚು ಕಟ್ಟೆಯೊಡೆದಿರುವ ಬೆನ್ನಲ್ಲೇ ಯೋಜನೆಯನ್ನ ತಕ್ಷಣವೇ ಕೈ ಬಿಡುವಂತೆ ಆಗ್ರಹಿಸಿ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪತ್ರ ಬರೆದಿದ್ದಾರೆ. ಒಂದೊಮ್ಮೆ ರಾಜ್ಯ ಸರ್ಕಾರ ತಮ್ಮ ಮನವಿ ತಿರಸ್ಕರಿಸಿದ್ದೇ ಆದಲ್ಲಿ ಈಗಾಗಲೇ ನಿರಂತರ ಹೋರಾಟ ಮತ್ತು ಧರಣಯಲ್ಲಿ ಇರುವ ರೈತರನ್ನು ಬೆಂಬಲಿಸಿ, ನಮ್ಮ ಜನತಾದಳ (ಜಾತ್ಯಾತೀತ) ಪಕ್ಷದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದವರು ಎಚ್ಚರಿಸಿದ್ದಾರೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಬೈರಮಂಗಲ, ಬನಗಿರಿ, ಹೊಸೂರು, ಕೆ.ಜಿ.ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ (ಭಾಗಶಃ) ಗ್ರಾಮಗಳಲ್ಲಿ ಇರುವ 7481 ಎಕರೆ 21.08 ಗುಂಟೆ ರೈತರ ಕೃಷಿ ಜಮೀನನ್ನು ವಶಪಡಿಸಿಕೊಂಡು ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯನ್ನು 18,133 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಆದರೆ ಈಗಾಗಲೇ ರಾಮನಗರ ಮತ್ತು ಕನಕಪುರ ತಾಲೂಕುಗಳಲ್ಲಿ ಸಾವಿರಾರು ಎಕರೆ ರೈತರ ಕೃಷಿಭೂಮಿಯನ್ನು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಪ್ರದೇಶ ಮಂಡಳಿಯಿಂದ ವಶಪಡಿಸಿಕೊಂಡು ಕಾರ್ಖಾನೆಗಳನ್ನು ಸ್ಥಾಪಿಸಲು, ಅಭಿವೃದ್ಧಿ ಪಡಿಸಿದ ಕೈಗಾರಿಕಾ ಪ್ರದೇಶವನ್ನು ಹಂಚಿದೆ.
ಇದನ್ನೂ ಓದಿ: ರಾಮನಗರದಲ್ಲಿ ಭುಗಿಲೆದ್ದ ಟೌನ್ಶಿಪ್ ಕಿಚ್ಚು; ಸರ್ವೆಗೆ ಬಂದಿದ್ದ ಅಧಿಕಾರಿಗಳಿಗೆ ಮಹಿಳೆಯರಿಂದ ಪೊರಕೆ ಸೇವೆ
ಸರ್ಕಾರಿ ದಾಖಲಾತಿಗಳ ಪ್ರಕಾರ ಬಿಡದಿ ಸಮಗ್ರ ಉಪನಗರ ಯೋಜನಗೆ ಹೊರಡಿಸಿರುವ ಅಂತಿಮ ಅಧಿಸೂಚನೆಯಲ್ಲಿ ನಮೂದು ಆಗಿರುವಂತೆ 10,580 ಮಂದಿ ಸಣ್ಣ ರೈತರಾಗಿರುತ್ತಾರೆ. ಈ ಪೈಕಿ ಶೇ. 82ರಷ್ಟು ರೈತರು ಒಂದು ಎಕರೆಗಿಂತ ಕಮ್ಮಿ ಹಿಡುವಳಿ ಹೊಂದಿರುವ ಅತಿ ಸಣ್ಣ ರೈತರು ಆಗಿರುತ್ತಾರೆ. ಸುಮಾರು 2555 ರೈತರು 5 ಗುಂಟೆಗಿಂತ ಕಮ್ಮಿ ಕೃಷಿ ಜಮೀನು ಹೊಂದಿರುತ್ತಾರೆ. ನಿಮಗೆ ತಿಳಿದಿರುವಂತೆ ಒಂದು ಸಾವಿರ ಎಕರೆ ಅಂಗಳವುಳ್ಳ ಮತ್ತು ಹಲವು ದಶಕಗಳಿಂದ ನೀರಾವರಿಗೆ ಆಶ್ರಯವಾಗಿದ್ದ ಭೈರಮಂಗಳ ಕೆರೆಯು ಇಂದು ವೃಷಭಾವತಿ ಕಣಿವೆಯಿಂದ ಬರುವ ತ್ಯಾಜ್ಯದ ನೀರು ಮತ್ತು ಕೈಗಾರಿಕ ಮಾಲಿನ್ಯ ನೀರಿನಿಂದ ತುಂಬಿ ಕೆರೆ ಅಂಗಳ ನೊರೆ ಮತ್ತು ಕಳೆಯಿಂದ ಅವೃತವಾಗಿದೆ. ಇದರಿಂದ ಸುತ್ತು-ಮುತ್ತಲಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ನಾಗರೀಕರು ಮತ್ತು ಜಾನುವಾರುಗಳ ಮೇಲೆ ಪರಿಸರ ಮಾಲಿನ್ಯ, ಕಲುಷಿತ ನೀರಿನ ವಾಸನೆಯಿಂದ ತೀವ್ರತರವಾದ ಆರೋಗ್ಯ ಸಮಸ್ಯೆ ಉಂಟಾಗಿದೆ.
ಅಲ್ಲದೇ ರಾಜ್ಯ ಸರ್ಕಾರ ಸಣ್ಣ ನೀರಾವರಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಂದಾಜು 300 ಕೋಟಿ ರೂ. ವೆಚ್ಚದಲ್ಲಿ ಈ ಕೆರೆಯನ್ನು ಪುನರ್ ಜೀವನಗೊಳಿಸಲು ಕೈಗೊಂಡಿರುವ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿವೆ. ಇಂತಹ ಪರಿಸ್ಥಿತಿಯಲ್ಲಿ ಭೈರಮಂಗಲ ಕೆರೆಯ ಪಕ್ಕದಲ್ಲಿ ಸಮಗ್ರ ಉಪನಗರ ಯೋಜನೆಯನ್ನು ಕೈಗೊಂಡು ಸುತ್ತಮುತ್ತಲಿನ ಪರಿಸರಕ್ಕೆ ಧಕ್ಕೆ ತರುವುದು ಸಾರ್ವಜನಿಕ ದೃಷ್ಠಿಯಲ್ಲಿ ಒಳ್ಳೆಯದಲ್ಲ ಎಂದು ಹೆಚ್ಡಿಡಿ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ 7 ದಶಕಗಳ ಸಾರ್ವಜನಿಕ ಜೀವನದಲ್ಲಿ ರಾಜ್ಯ ಮತ್ತು ದೇಶದ ರೈತರ ಹಿತಕ್ಕೆ ಶ್ರಮಿಸುತ್ತಿದ್ದೇನೆ ಹಾಗೂ ಅಧಿಕಾರ ತ್ಯಾಗ ಮಾಡಿದ್ದೇನೆ. ರಾಜ್ಯ ಸರ್ಕಾರ ನನ್ನ ಮನವಿಯನ್ನು ತಿರಸ್ಕರಿಸಿದರೆ ಹಾಗೂ ತಮ್ಮ ಈ ಕೂಗಿಗೆ ಕಿವಿಕೊಡದೆ ಇದ್ದರೆ, ವಿಧಾನಸೌಧದ ಆವರಣದಲ್ಲಿನ ಗಾಂಧೀಜಿ ಪ್ರತಿಮೆ ಮುಂದೆ ಕುಳಿತು ಸತ್ಯಾಗ್ರಹ ನಡೆಸುತ್ತೇನೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ ಎಂದೂ ದೇವೇಗೌಡರು ಪತ್ರಮುಖೇನ ಸಿಎಂಗೆ ತಿಳಿಸಿದ್ದಾರೆ.
Published On - 2:49 pm, Tue, 14 July 26