
ಬೆಂಗಳೂರು, ಡಿಸೆಂಬರ್ 19: ರೌಡಿ ಶೀಟರ್ ಬಿಕ್ಲು ಶಿವ (Biklu Shiva) ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕ ಭೈರತಿ ಬಸವರಾಜುಗೆ ಹೈಕೋರ್ಟ್ನಲ್ಲಿ ಹಿನ್ನಡೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಭೈರತಿ ಬಸವರಾಜು (Byrati Basavaraj) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಪೀಠ ಈ ಆದೇಶ ನೀಡಿದೆ. ಆದರೆ, ಪ್ರಕರಣಕ್ಕೆ ಕೋಕಾ (KCOCA) ಕಾಯ್ದೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಭೈರತಿ ಬಸವರಾಜು ಅವರು ವಿಚಾರಣಾ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲಿಯವರೆಗೂ ಬಂಧನದಿಂದ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಇದರಿಂದ ಭೈರತಿ ಬಸವರಾಜು ಬಂಧನ ಭೀತಿಯನ್ನು ಎದುರಿಸುವಂತಾಗಿದೆ.
ಇನ್ನೊಂದೆಡೆ, ಕೋಕಾ ಕಾಯ್ದೆ ರದ್ದಾಗಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಇತರ ಆರೋಪಿಗಳಿಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ, ಇನ್ನೂ ಆರೋಪಪಟ್ಟಿ ಸಲ್ಲಿಕೆಯಾಗದಿರುವ ಕಾರಣ ಮುಂದಿನ ದಿನಗಳಲ್ಲಿ ಜಾಮೀನಿಗೆ ಅವಕಾಶವಿದೆ ಎನ್ನಲಾಗಿದೆ.
ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವನನ್ನು (40) 2025 ರ ಜುಲೈ 15 ರಂದು ಬೆಂಗಳೂರಿನಲ್ಲಿ ಕೊಚ್ಚಿ ಕೊಲ್ಲಲಾಗಿತ್ತು. ಹಲಸೂರು ಪ್ರದೇಶದ ಭಾರತಿನಗರದ ಮೀನಿ ಅವೆನ್ಯೂ ರಸ್ತೆಯಲ್ಲಿರುವ ಶಿವ ಮನೆಯ ಬಳಿ 12 ಜನರ ಗುಂಪೊಂದು ಮಾರಕ ಆಯುಧಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು.
ಪ್ರಮುಖ ಆರೋಪಿ (A1) ಮತ್ತು ಶಂಕಿತ ಮಾಸ್ಟರ್ ಮೈಂಡ್ ಜಗದೀಶ್ ಅಲಿಯಾಸ್ ಜಗ್ಗ ಕೊಲೆಯಾದ ತಕ್ಷಣ ದುಬೈ ಮತ್ತು ಇತರ ದೇಶಗಳಿಗೆ ಪರಾರಿಯಾಗಿದ್ದ. ಬ್ಲೂ ಕಾರ್ನರ್ ನೋಟಿಸ್ ಜಾರಿಯಾದ ನಂತರ 2025 ರ ಆಗಸ್ಟ್ 26 ರಂದು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲ್ಪಟ್ಟಿದ್ದ.
ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್: ಹತ್ಯೆಗೆ ಪ್ರಮುಖ ಕಾರಣ ಪತ್ತೆ ಮಾಡಿದ ಪೊಲೀಸರು! ಮತ್ತಷ್ಟು ರೋಚಕ ಅಂಶ ಬಯಲು
ಶಿವನ ತಾಯಿಯ ದೂರಿನ ಆಧಾರದ ಮೇಲೆ ಎಫ್ಐಆರ್ನಲ್ಲಿ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವರ ಭೈರತಿ ಬಸವರಾಜುರನ್ನು 5 ನೇ ಆರೋಪಿ ಎಂದು ಹೆಸರಿಸಲಾಗಿದೆ .