ಹೆಬ್ಬಾಳ-ಸರ್ಜಾಪುರ ಮಾರ್ಗದ ವೆಚ್ಚ ಮರು ಪರಿಶೀಲನೆಗೆ ಕೇಂದ್ರ ಸೂಚನೆ: ಕೆಂಪು ಮಾರ್ಗದ ಮೆಟ್ರೋ ಮತ್ತಷ್ಟು ವಿಳಂಬ?
ನಮ್ಮ ಮೆಟ್ರೋದ ಹೆಬ್ಬಾಳ-ಸರ್ಜಾಪುರ ಕೆಂಪು ಮಾರ್ಗದ ಯೋಜನಾ ವೆಚ್ಚವನ್ನು ಮರುಪರಿಶೀಲಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚಿಸಿದೆ. ವೆಚ್ಚ ಅಧಿಕವಾಗಿರುವ ಕಾರಣ ವಿವರವಾದ ಯೋಜನಾ ವರದಿಯನ್ನು ಹಿಂದಿರುಗಿಸಲಾಗಿದ್ದು, ತಜ್ಞರ ಮೂಲಕ ಮೌಲ್ಯಮಾಪನ ನಡೆಸಲು ಬಿಎಂಆರ್ಸಿಎಲ್ ಮುಂದಾಗಿದೆ. ಆ ಮೂಲಕ ಈ ಮಾರ್ಗದ ನಮ್ಮ ಮೆಟ್ರೋ ಸಂಚಾರ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬೆಂಗಳೂರು, ಸೆಪ್ಟೆಂಬರ್ 27: ನಮ್ಮ ಮೆಟ್ರೋದ (Namma Metro) ಹೆಬ್ಬಾಳ ಟು ಸರ್ಜಾಪುರ ಕೆಂಪು ಮಾರ್ಗದ (Red Line) ಯೋಜನಾ ವೆಚ್ಚದ ಮರು ಪರಿಶೀಲನೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಯೋಜನಾ ವರದಿಯನ್ನು (ಡಿಪಿಆರ್) ವಾಪಸ್ ರಾಜ್ಯಕ್ಕೆ ಕಳುಹಿಸಿದೆ. ಅಂದಾಜು 28,405 ಕೋಟಿ ರೂ. ವೆಚ್ಚದಲ್ಲಿ ಕೆಂಪು ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಡಿಪಿಆರ್ನ್ನು ಮತ್ತೆ ರಾಜ್ಯಕ್ಕೆ ಕಳುಹಿಸಿದೆ. ಆ ಮೂಲಕ ಹೆಬ್ಬಾಳ-ಸರ್ಜಾಪುರ ನಮ್ಮ ಮೆಟ್ರೋ ಕೆಂಪು ಮಾರ್ಗದ ಡಿಪಿಆರ್ನ ಮರು ಪರಿಶೀಲನೆ ಮಾಡಲು ಮೆಟ್ರೋ ಮುಂದಾಗಿದೆ.
ಕೆಂಪು ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ ದೊರೆತರು ಕೂಡ, ಯೋಜನಾ ವೆಚ್ಚವು ಮೀರಿರುವುದರಿಂದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ವೆಚ್ಚವನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಇದನ್ನೂ ಓದಿ: ಮೆಟ್ರೋ ಸ್ಟೇಷನ್ಗಳಲ್ಲಿ ಪಾರ್ಕಿಂಗ್ ಮಾಡೋದೇ ದೊಡ್ಡ ಸವಾಲು: ಯೆಲ್ಲೋ ಲೈನ್ನಲ್ಲಿ ಭಾರಿ ಸಮಸ್ಯೆ
ನಮ್ಮ ಮೆಟ್ರೋ ಹೆಬ್ಬಾಳ- ಸರ್ಜಾಪುರ ಮಾರ್ಗದ ಡಿಪಿಆರ್ ಪ್ರಕಾರ, ಇದರ ನಿರ್ಮಾಣಕ್ಕೆ ಅಂದಾಜು ವೆಚ್ಚ 28,405 ಕೋಟಿ ರೂ.ವನ್ನು (ಪ್ರತಿ ಕಿ.ಮೀ.ಗೆ ಸುಮಾರು 776.3 ಕೋಟಿ ರೂ) ರಾಜ್ಯ ಸಚಿವ ಸಂಪುಟವು 2024ರ ಡಿಸೆಂಬರ್ನಲ್ಲಿ ಅಂಗೀಕರಿಸಿದ್ದು, ಆ ಬಳಿಕ ಕೇಂದ್ರಕ್ಕೆ ಕಳುಹಿಸಿಲಾಗಿತ್ತು. ಈ ಯೋಜನೆಗೆ ಕೇಂದ್ರ ವಸತಿ ಮತ್ತು ವ್ಯವಹಾರಗಳ ಸಚಿವಾಲಯವು ವೆಚ್ಚವನ್ನು ಮರುಪರಿಶೀಲಿಸಲು ಸೂಚನೆ ನೀಡಿದೆ. ವಿವರವಾದ ಯೋಜನಾ ವರದಿಯನ್ನು ರಾಜ್ಯ ಸರಕಾರಕ್ಕೆ ಮತ್ತೆ ಹಿಂದಿರುಗಿಸಿದೆ.
ಇದನ್ನೂ ಓದಿ: Namma Metro Yellow Line: ನಮ್ಮ ಮೆಟ್ರೋ ಯೆಲ್ಲೋ ಲೈನ್ನಲ್ಲಿ ನಾಲ್ಕನೇ ಮೆಟ್ರೋ ರೈಲು ಸಂಚಾರ ಶುರು
ನಮ್ಮ ಮೆಟ್ರೋದಲ್ಲಿ ಕೇಂದ್ರವು ಶೇ.50 ಈಕ್ವಿಟಿ ಹೊಂದಿರುವುದರಿಂದ, ವೆಚ್ಚ ಮರು ಮೌಲ್ಯಮಾಪನ ಮಾಡಲು ಸ್ವತಂತ್ರ ಸಲಹೆಗಾರರನ್ನು ನೇಮಿಸಲು ರಾಜ್ಯವನ್ನು ಕೇಳಿದೆ. ಕೇಂದ್ರದ ನಿರ್ದೇಶನದಂತೆ ಬಾಹ್ಯ ಸಲಹೆಗಾರರೊಂದಿಗೆ ವೆಚ್ಚ ಮರು ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದೆ. 36.59 ಕಿ.ಮೀ. ಮಾರ್ಗದ ನಿರ್ಮಾಣಕ್ಕೆ ಅಂದಾಜು 28,405 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಸ್ವಾಧೀನ ವೆಚ್ಚ ಸುಮಾರು 8,080 ಕೋಟಿ ರೂ. ಖಾಸಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸುಮಾರು 1,224 ಕೋಟಿ ರೂ. ಎಂದು ನಿರೀಕ್ಷಿಸಲಾಗಿದೆ.
28 ನಿಲ್ದಾಣಗಳು
ಹೆಬ್ಬಾಳ- ಸರ್ಜಾಪುರ ಮೆಟ್ರೋ ಮಾರ್ಗದಲ್ಲಿ 28 ನಿಲ್ದಾಣಗಳು ನಿರ್ಮಾಣ ಆಗಲಿದೆ. ಸೋಮಪುರ, ಸರ್ಜಾಪುರ, ಮುತ್ತಾನಲ್ಲೂರು ಕ್ರಾಸ್, ದೊಮ್ಮಸಂದ್ರ, ಕೊಡತಿ ಗೇಟ್, ಸೂಲಿಕುಂಟೆ, ಕಾರ್ಮೆಲರಾಂ, ಅಂಬೇಡ್ಕರ್ನಗರ, ಕೈಕೊಂಡ್ರಹಳ್ಳಿ, ದೊಡ್ಡಕನ್ನಳ್ಳಿ, ಇಬ್ಬಲೂರು, ಬೆಳ್ಳಂದೂರು ಗೇಟ್, ಜಕ್ಕಸಂದ್ರ, ಅಗರ, ಸೇಂಟ್ ಜಾನ್ಸ್ ಆಸ್ಪತ್ರೆ, ಸಿಪಿಡಬ್ಲ್ಯುಡಿ ಕ್ವಾರ್ಟರ್ಸ್, ಡೇರಿ ಸರ್ಕಲ್, ಸುದ್ದಗುಂಟೆಪಾಳ್ಯ, ವಿಲ್ಸನ್ ಗಾರ್ಡನ್, ನಿಮ್ಹಾನ್ಸ್, ಕೆ.ಆರ್.ಸರ್ಕಲ್, ಟೌನ್ ಹಾಲ್, ಪ್ಯಾಲೇಸ್ ಗುಟ್ಟಹಳ್ಳಿ, ಚಾಲುಕ್ಯ ಸರ್ಕಲ್, ವೆಟರ್ನರಿ ಕಾಲೇಜ್, ಮೇಖ್ರಿ ಸರ್ಕಲ್, ಗಂಗಾನಗರ, ಹೆಬ್ಬಾಳ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







