ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಕೇಸ್​ನ ಚಾರ್ಜ್​ಶೀಟ್​ ರೆಡಿ: ಘಟನೆಗೆ RCB ಹೊಣೆ ಎಂದ CID 

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ 11 ಜನರ ಸಾವಿಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಚಾರ್ಜ್ ಶೀಟ್ ಸಿದ್ಧಪಡಿಸಿದ್ದಾರೆ. ಆರ್​ಸಿಬಿ, ಕೆಎಸ್‌ಸಿಎ ಮತ್ತು ಡಿಎನ್‌ಎ ಸಂಸ್ಥೆಗಳು ಘಟನೆಗೆ ನೇರ ಹೊಣೆ ಎಂದು ತನಿಖೆ ವೇಳೆ ಸಾಬೀತಾಗಿದೆ. ಸರಿಯಾದ ಯೋಜನೆ ಇಲ್ಲದಿರುವುದು, ಟಿಕೆಟ್ ಗೊಂದಲ ಹಾಗೂ ಭದ್ರತಾ ವೈಫಲ್ಯ ಸಾವಿಗೆ ಕಾರಣ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ. 2,200ಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧವಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಕೇಸ್​ನ ಚಾರ್ಜ್​ಶೀಟ್​ ರೆಡಿ: ಘಟನೆಗೆ RCB ಹೊಣೆ ಎಂದ CID 
ಸಂಭ್ರಮಾಚರಣೆ ವೇಳೆ ನಡೆದಿದ್ದ ಕಾಲ್ತುಳಿತ
Updated By: ಪ್ರಸನ್ನ ಹೆಗಡೆ

Updated on: Nov 19, 2025 | 12:22 PM

ಬೆಂಗಳೂರು, ನವೆಂಬರ್​ 19: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತದಿಂದ 11 ಜನರ ಸಾವಿನ ಕೇಸ್​​ ಸಂಬಂಧ ತನಿಖೆ ಮುಗಿಸಿ ಚಾರ್ಜ್​ಶೀಟ್ ಸಲ್ಲಿಕೆಗೆ ಸಿಐಡಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. 2,200ಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ರೆಡಿಯಾಗಿದ್ದು, ಹನ್ನೊಂದು ಜನರ ಸಾವಿಗೆ ನೇರ ಹೊಣೆ RCB. ತನಿಖೆ ವೇಳೆ RCB, DNA, KSCA ವಿರುದ್ಧ ಹಲವು ಸಾಕ್ಷ್ಯಗಳು ಪತ್ತೆಯಾಗಿದೆ ಎನ್ನಲಾಗಿದೆ.

ಚಾರ್ಜ್ ಶೀಟ್ ಸಲ್ಲಿಕೆಗೆ ಹೈಕೋರ್ಟ್​​ನಿಂದ ಗ್ರೀನ್ ಸಿಗ್ನಲ್ ಹಿನ್ನೆಲೆ ತನಿಖೆ ಮುಗಿಸಿ ಸಿಐಡಿ ಚಾರ್ಜ್ ಶೀಟ್ ಸಿದ್ಧಪಡಿಸಿದೆ. ನೂರಾರು ಪ್ರತ್ಯಕ್ಷ ಸಾಕ್ಷಿ, ಸಿಸಿಟಿವಿ, ಗಾಯಾಳುಗಳ ಹೇಳಿಕೆ ದಾಖಲಿಸಲಾಗಿದ್ದು, RCB ಜೊತೆ KSCA, DNA ಘಟನೆಗೆ ನೇರ ಕಾರಣ ಅನ್ನೋದು ತನಿಖೆ ವೇಳೆ ಬಯಲಾಗಿದೆ. ಹೀಗಾಗಿ ಚಾರ್ಜ್ ಶೀಟ್​ನಲ್ಲಿ ಮೂರು ಸಂಸ್ಥೆಗಳನ್ನ ಸಿಐಡಿ ನೇರ ಹೊಣೆ ಮಾಡಿದೆ. ಸರಿಯಾದ ಪ್ಲಾನ್ ಇಲ್ಲದೆಯೇ ಕಾರ್ಯಕ್ರಮ ಆಯೋಜನೆ, ಕಾರ್ಯಕ್ರಮ ಆಯೋಜನೆಗೂ ಮುನ್ನ ಸಭೆ ಸರಿಯಾಗಿ ಮಾಡದಿರುವುದು ಸೇರಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡದೇ ಇರುವುದು ತನಿಖೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ: ಇದೆಂತಹ ಫ್ರಾಂಚೈಸಿ… ಸಾಮಾಜಿಕ ಬದ್ಧತೆಯನ್ನೇ ಮರೆತ RCB

ಟಿಕೆಟ್ ಬಗ್ಗೆ ಆರ್​​ಸಿಬಿ ಗೊಂದಲ ಹುಟ್ಟಿಸಿದ್ದೇ, ಘಟನೆಗೆ ಮೊದಲ ಕಾರಣ. ಅಲ್ಲದೇ ಡಿಎನ್​​ಎ ಕಡೆಯಿಂದ ಯಾವುದೇ ಸೆಕ್ಯುರಿಟಿ ಪ್ಲಾನ್ ಇರಲಿಲ್ಲ. ಖಾಸಗಿ ಸೆಕ್ಯುರಿಟಿ ಏಜೆನ್ಸಿ ಬಳಕೆಯೂ ವಿಫಲವಾಗಿದೆ. ಪೊಲೀಸರ ಜೊತೆ ಕೂಡ ಸರಿಯಾದ ಮಾತುಕತೆ ನಡೆಸದೆ ಕಾರ್ಯಕ್ರಮ ಆಯೋಜನೆ ಮಾಡಿರೋದು ತನಿಖೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ. ಎಲ್ಲಾ ಗೇಟ್ ಬಳಿಯ ಸಿಸಿಟಿವಿ ಪರಿಶೀಲನೆ, ವಿಡಿಯೋದಲ್ಲಿದ್ದವರ ಹೇಳಿಕೆ, ಪ್ರತೀ ಗೇಟ್​ನ ಸೆಕ್ಯುರಿಟಿ, ಡ್ಯೂಟಿಗೆ ಹಾಜರಾಗಿದ್ದ ಪೊಲೀಸರ ಹೇಳಿಕೆಗಳನ್ನ ತನಿಖಾ ತಂಡ ದಾಖಲಿಸಿದೆ. ಗಾಯಾಳು ಹೇಳಿಕೆ, ಗಾಯಾಳುಗಳನ್ನ ಸಾಗಿಸಿದವರ ಹೇಳಿಕೆ ಸೇರಿ ನೂರಾರು ಪ್ರತ್ಯಕ್ಷ ಸಾಕ್ಷಿಗಳ ಮಾಹಿತಿ ಚಾರ್ಜ್​​ಶೀಟ್​​ನಲ್ಲಿದೆ.

RCB ತಂಡ 18ನೇ ಆವೃತ್ತಿಯ ಐಪಿಎಲ್ ಫೈನಲ್ ಗೆದ್ದು ಚಾಂಪಿಯನ್ ಆದ ಹಿನ್ನಲೆ ತಂಡದ ಆಟಗಾರರು ಬೆಂಗಳೂರಿಗೆ ಬಂದಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಚರಣೆ ನಡೆದಿತ್ತು. ಈ ಸಂಭ್ರಮಾಚರಣೆ ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಕ್ರೀಡಾಂಗಣದ ಬಳಿ ಸೇರಿದ್ದ ಪರಿಣಾಮ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ 11 ಮಂದಿ ಆರ್​ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರೆ, ಹಲವರು ಅಸ್ವಸ್ಥಗೊಂಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.