ಸಿನಿಮಾ ಸ್ಟೈಲಲ್ಲಿ ಯುವಕನ ಅಡ್ಡಗಟ್ಟಿ, ಲಾಂಗ್ ಬೀಸಿ 31 ಕ್ಷ ರೂ. ದರೋಡೆ: ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ಕೃತ್ಯ

ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಸಕಲವಾರ ರಸ್ತೆಯಲ್ಲಿ ಹಾಡಹಗಲೇ 31.38 ಲಕ್ಷ ರೂ. ದರೋಡೆ ನಡೆದಿದೆ. ಸಿನಿಮಾಶೈಲಿಯಲ್ಲಿ ಯುವಕನನ್ನು ಅಡ್ಡಗಟ್ಟಿ, ಲಾಂಗ್‌ನಿಂದ ಬೆದರಿಸಿ ಹಣ ಕಸಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಭೀಕರ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಿನಿಮಾ ಸ್ಟೈಲಲ್ಲಿ ಯುವಕನ ಅಡ್ಡಗಟ್ಟಿ, ಲಾಂಗ್ ಬೀಸಿ 31 ಕ್ಷ ರೂ. ದರೋಡೆ: ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ಕೃತ್ಯ
ಆನೇಕಲ್ ದರೋಡೆಯ ಸಿಸಿಟಿವಿ ದೃಶ್ಯದ ಸ್ಕ್ರೀನ್​​ಗ್ರ್ಯಾಬ್
Image Credit source: tv9
Edited By:

Updated on: Feb 02, 2026 | 11:15 AM

ಆನೇಕಲ್, ಫೆಬ್ರವರಿ 2: ಬೆಂಗಳೂರಿನ (Bangalore) ಹೊರವಲಯದ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಸಕಲವಾರ ರಸ್ತೆಯಲ್ಲಿ ಹಾಡಹಗಲೇ ನಡೆದ ಸಿನಿಮಾಶೈಲಿಯ ದರೋಡೆ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಯುವಕನೊಬ್ಬನ ಬೈಕ್ ಅಡ್ಡಗಟ್ಟಿ, ಲಾಂಗ್ ಬಳಸಿ ಬೆದರಿಸಿ, ಬೈಕ್ ಸಮೇತ 31.38 ಲಕ್ಷ ರೂ. ಹಣವನ್ನು ದರೋಡೆ ಮಾಡಿ ನಾಲ್ವರು ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಭಾನುವಾರ ಸಂಜೆ ಸುಮಾರು 4.20ರ ವೇಳೆಗೆ ಈ ಘಟನೆ ನಡೆದಿದ್ದು, ಕೈಲಾಸ್ ಎಂಬ ಯುವಕನಿಂದ ದರೋಡೆ ಮಾಡಲಾಗಿದೆ. ರಾಕೇಶ್ ಎಂಬುವರ ಬಳಿ ಕ್ಯಾಷ್ ಪಿಕಪ್ ಕೆಲಸ ಮಾಡಿಕೊಂಡಿದ್ದ ಕೈಲಾಸ್, ಉಡಾನ್ ಕಂಪನಿಯ ವಿವಿಧ ಬ್ರಾಂಚ್‌ಗಳಲ್ಲಿ ಬೈಕ್ ಮೂಲಕ ತೆರಳಿ ಹಣ ಸಂಗ್ರಹಿಸುವ ಜವಾಬ್ದಾರಿ ಹೊಂದಿದ್ದರು.

ಭಯಾನಕ ಸಿಸಿಟಿವಿ ವಿಡಿಯೋ ಇಲ್ಲಿ ನೋಡಿ

ಎಂದಿನಂತೆಯೇ ಭಾನುವಾರ ಕೂಡ ಉಡಾನ್ ಕಂಪನಿಯ ಮೂರು ಶಾಖೆಗಳಿಂದ ಕೈಲಾಸ್ ಒಟ್ಟು 31,38,625 ರೂ. ಹಣವನ್ನು ಸಂಗ್ರಹಿಸಿ, ಜೂಪಿಟರ್ ಬೈಕ್‌ನ ಡಿಕ್ಕಿಯಲ್ಲಿ ಇಟ್ಟುಕೊಂಡು ಸಕಲವಾರ ಕಡೆಯಿಂದ ಬನ್ನೇರುಘಟ್ಟ ರಸ್ತೆಯತ್ತ ತೆರಳುತ್ತಿದ್ದರು. ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಆತನ ಬೈಕ್‌ನ್ನು ಅಡ್ಡಗಟ್ಟಿ, ಲಾಂಗ್‌ನಿಂದ ಹಲ್ಲೆ ನಡೆಸಿ ಬೆದರಿಸಿ ಬೈಕ್ ಸಮೇತ ದರೋಡೆ ನಡೆಸಿದ್ದಾರೆ.

ಬೈಕ್ ಬಿಟ್ಟು ಹಣ ಸಮೇತ ಪರಾರಿಯಾದ ದುಷ್ಕರ್ಮಿಗಳು

ದರೋಡೆ ಬಳಿಕ ದುಷ್ಕರ್ಮಿಗಳು ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಬೈಕ್‌ ಬಿಟ್ಟು, ಅದರಲ್ಲಿ ಇದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಸಂಪೂರ್ಣ ದರೋಡೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ನೇಪಾಳಿ ದಂಪತಿಗೆ ಬಲೆ ಬೀಸಿದ ಪೊಲೀಸರು!

ಘಟನೆಯ ಮಾಹಿತಿ ತಿಳಿದ ತಕ್ಷಣ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಹಾಡಹಗಲೇ ಇಂತಹ ದೊಡ್ಡ ಮಟ್ಟದ ದರೋಡೆ ನಡೆದಿರುವುದು ಬೆಂಗಳೂರಿನಲ್ಲಿ ಆತಂಕಕ್ಕೆ ಕಾರಣವಾಗಿದೆ.ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ