KPTCL ಹಾಗೂ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ನಿರ್ಧಾರ; ಇಂದೇ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದ ಸಿಎಂ ಬೊಮ್ಮಾಯಿ

|

Updated on: Mar 16, 2023 | 12:30 PM

KPTCL ನೌಕರರ ವೇತನ ಶೇ.20ರಷ್ಟು ಹೆಚ್ಚಳ, ಹಾಗೂ ಸಾರಿಗೆ ನೌಕರರ ವೇತನ ಶೇ.15ರಷ್ಟು ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

KPTCL ಹಾಗೂ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ನಿರ್ಧಾರ; ಇಂದೇ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದ ಸಿಎಂ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಸಾಲು ಸಾಲು ಪ್ರತಿಭಟನೆಗೆ ಕರೆ ಕೊಡಲಾಗಿದೆ. ಮಾರ್ಚ್ 16ರಂದು ಪ್ರತಿಭಟನೆ ನಡೆಸಲು ಕೆಪಿಟಿಸಿಎಲ್​ ನೌಕರರ ಸಂಘ ಕರೆ ಕೊಟ್ಟಿತ್ತು. ಹಾಗೂ ಮಾರ್ಚ್ 21ರಿಂದ ಪ್ರತಿಭಟನೆ ನಡೆಸುವುದಾಗಿ ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದರು. ಸದ್ಯ ಇದರಿಂದ ಎಚ್ಚೆತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) KPTCL ಹಾಗೂ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ. KPTCL ನೌಕರರ ವೇತನ ಶೇ.20ರಷ್ಟು ಹೆಚ್ಚಳ ಮಾಡುತ್ತೇವೆ. ಹಾಗೂ ಸಾರಿಗೆ ನೌಕರರ ವೇತನ ಶೇ.15ರಷ್ಟು ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ. ವೇತನ ಹೆಚ್ಚಳ ಬಗ್ಗೆ ಇಂದೇ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಾರ್ಚ್ 16ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲು ಕೆಪಿಟಿಸಿಎಲ್​ ನೌಕರರ ಸಂಘ ಕರೆ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಎಸ್ಕಾಂಗಳು ನೌಕರರು ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸಲು ನಿರ್ಧರಿಸಿದ್ದರು. ಸದ್ಯ ವೇತನ ಪರಿಷ್ಕರಣೆಗೆ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಮುಷ್ಕರ ಹಿಂಪಡೆಯಲಾಗಿದೆ. KPTCL ನೌಕರರ ವೇತನ ಶೇ.20ರಷ್ಟು ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ: KSRTC: ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಕೆಎಸ್​ಆರ್​ಟಿಸಿ ದರ ಹೆಚ್ಚಳದ ಶಾಕ್; ವಿವರ ಇಲ್ಲಿದೆ

ಮತ್ತೊಂದೆಡೆ ಮಾರ್ಚ್​ 21 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನೌಕರರು ಮುಂದಾಗಿದ್ದಾರೆ. ಈ ಮುಷ್ಕರಕ್ಕೆ 4 ನಿಗಮಗಳ ನೌಕರರು ಬೆಂಬಲ ವ್ಯಕ್ತಪಡಿಸಿದ್ದು, ಅಂದಿನಿಂದ ​23,000 ಕೆಎಸ್​ಆರ್​ಟಿಸಿ ಬಸ್​ಗಳು (KSRTC Bus) ರಸ್ತೆಗೆ ಇಳಿಯುವುದಿಲ್ಲ ಎಂದು ಸಾರಿಗೆ ನೌಕರರ ಸಂಘ ಹೇಳಿದೆ. ಇದರಿಂದ ಮಾರ್ಚ್​ 22 ರಂದು ಯುಗಾದಿ ಹಬ್ಬಕ್ಕೆಂದು ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಲಿದೆ.

2023ರ ಮಾರ್ಚ್ 8ರಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಜೊತೆ ವೇತನ ಪರಿಷ್ಕರಣೆ ಕುರಿತು ಚರ್ಚಿಸಲಾಗಿತ್ತು. ಆದರೆ ಮೂಲ ವೇತನದ ಶೇ.10 ರಷ್ಟು ಹೆಚ್ಚಳದ ಭರವಸೆ ನೀಡಿದ್ದರು. ಇದಕ್ಕೆ ಸಮ್ಮತಿ ಇಲ್ಲದ ಕಾರಣ ಮತ್ತೊಮ್ಮೆ ಪ್ರತಿಭಟನೆಗೆ ಕೆಎಸ್​ಆರ್​ಟಿಸಿ ಮುಂದಾಗಿದೆ. ಹಾಗೂ ನಿನ್ನೆ ಕೂಡ ಸಿಎಂ ಬೊಮ್ಮಾಯಿ ಸಮ್ಮುಖದಲ್ಲಿ ಚರ್ಚೆಯಾಗಿದ್ದು ಸಿಎಂ, ಸಾರಿಗೆ ನೌಕರರ ವೇತನ ಶೇ.15ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದ್ದಾರೆ. ಆದ್ರೆ ಸಾರಿಗೆ ನೌಕರರು ಶೇ.20ರಷ್ಟು ಹೆಚ್ಚಳಕ್ಕೆ ಪಟ್ಟುಹಿಡಿದಿದ್ದಾರೆ. ಹೀಗಾಗಿ ಸಭೆ ವಿಫಲವಾಗಿದ್ದು ಯುಗಾದಿ ಹಬ್ಬದ ದಿನ ಸಾರಿಗೆಯ ಬಿಸಿ ತಟ್ಟಲಿದೆ.

ಹೊಸ ವೇತನ ಏಪ್ರಿಲ್ 22ರಿಂದ ಅನ್ವಯ ಆಗಲಿದೆ

KPTCL ನೌಕರರ ವೇತನ ಶೇ.20ರಷ್ಟು ಹೆಚ್ಚಿಸಲು ತೀರ್ಮಾನಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಇಂಧನ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ವೇತನ ಹೆಚ್ಚಳ ವಿಚಾರವಾಗಿ ಸಿಎಂ ಜತೆ ಚರ್ಚೆ ನಡೆಸಲಾಗಿದೆ. ಎಲ್ಲಾ ಮಾಹಿತಿ ಪಡೆದು ಶೇ.20ರಷ್ಟು ವೇತನ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಹೊಸ ವೇತನ ಏಪ್ರಿಲ್ 22ರಿಂದ ಅನ್ವಯ ಆಗಲಿದೆ. ಇದು ಕೆಪಿಟಿಸಿಎಲ್​ನ ಎಲ್ಲಾ ನೌಕರರಿಗೂ ಅನ್ವಯ ಆಗಲಿದೆ ಎಂದು ಇಂಧನ‌ ಸಚಿವ ಸುನೀಲ್ ಕುಮಾರ್ ತಿಳಿಸಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:07 am, Thu, 16 March 23