Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಂಪಸ್​​ ಬಿಟ್ಟು ರೈತರ ಜಮೀನಿನಲ್ಲಿ ಕೃಷಿ ಸಂಶೋಧನೆ ಮಾಡಿ: ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಸಲಹೆ

ಬೆಂಗಳೂರಿನ ಜಿಕೆವಿಕೆ ಮೈದಾನದಲ್ಲಿ ಕೃಷಿ ಮೇಳ ನಡೆಯುತ್ತಿದ್ದು, ಈ ವೇಳೆ ಕ್ಯಾಂಪಸ್​​ ಬಿಟ್ಟು ರೈತರ ಜಮೀನಿನಲ್ಲಿ ಕೃಷಿ ಸಂಶೋಧನೆ ಮಾಡಿ ಎಂದು ವಿವಿ ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಕರೆ ನೀಡಿದರು.

ಕ್ಯಾಂಪಸ್​​ ಬಿಟ್ಟು ರೈತರ ಜಮೀನಿನಲ್ಲಿ ಕೃಷಿ ಸಂಶೋಧನೆ ಮಾಡಿ: ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಸಲಹೆ
ಸಿಎಂ ಬೊಮ್ಮಾಯಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Nov 05, 2022 | 6:18 PM

ಬೆಂಗಳೂರು: ಕ್ಯಾಂಪಸ್​​ ಬಿಟ್ಟು ರೈತರ ಜಮೀನಿನಲ್ಲಿ ಕೃಷಿ ಸಂಶೋಧನೆ (research) ಮಾಡಿ ಎಂದು ವಿವಿ ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಸಲಹೆ ನೀಡಿದರು. ನಗರದಲ್ಲಿ ಜಿಕೆವಿಕೆ ಮೈದಾನದಲ್ಲಿ ಕೃಷಿ ಮೇಳ (Agriculture Fair) ನಡೆಯುತ್ತಿದೆ. ಹೊಸ ಕೃಷಿ ಸಂಶೋಧನೆಯಿಂದ ರೈತರಿಗೆ ಅನುಕೂಲವಾಗಲಿದೆ. ಸಮಗ್ರ ಕೃಷಿ ಸಾಕಷ್ಟು ಪರಿಣಾಮಕಾರಿಯಾಗಿದೆ. ನಾನು ಕೂಡ ಇದನ್ನು ಕೃಷಿ ತಜ್ಞರಿಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಇರುವ ಭೂಮಿಯಲ್ಲಿ ಸಮಗ್ರ ಕೃಷಿ ಮಾಡಿದರೆ ಅನುಕೂಲವಾಗಲಿದೆ. ಸಮಗ್ರ ಕೃಷಿ ಅನ್ನೋದು ಅಭಿಯಾನದ ತರಹ ಮಾಡಬೇಕಿದೆ. ಸಮಗ್ರ ಕೃಷಿ ಜಾರಿಗೆ ಯುದ್ಧೋಪಾದಿಯಲ್ಲಿ ಜಾರಿಗೆ ತರಬೇಕು ಎಂದು ವೇದಿಕೆಯಲ್ಲಿ ಸಚಿವ ಬಿ.ಸಿ.ಪಾಟೀಲ್​ಗೆ ಸಿಎಂ ಬೊಮ್ಮಾಯಿ ಹೇಳಿದರು.

ರೈತರ ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ಕೆಲಸವಾಗುತ್ತಿದೆ: ಸಚಿವ ಆರ್​. ಅಶೋಕ್

ಕೃಷಿ ಮೇಳದಲ್ಲಿ ಕಂದಾಯ ಇಲಾಖೆ ಸಚಿವ ಆರ್​. ಅಶೋಕ್ ಮಾತನಾಡಿದ್ದು, ರೈತರಿಗಾಗಿ ಕಂದಾಯ ಇಲಾಖೆಯಿಂದ ಹಲವು ಯೋಜನೆ ಜಾರಿ ಮಾಡಲಾಗಿದೆ. ಅಕ್ರಮ ಜಮೀನನ್ನು ಸಕ್ರಮ ಮಾಡುವ ಕೆಲಸ ಮಾಡುತ್ತಿದ್ದೇವೆ. ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಕಾಫಿ ಬೆಳೆಯುತ್ತಿದ್ದಾರೆ. ಕಾಫಿ ಬೆಳೆಗಾರರಿಗೆ ಸರ್ಕಾರಿ ಜಮೀನು ಲೀಜ್​​ಗೆ ಕೊಡುವ ಕೆಲಸ ಮಾಡುತ್ತಿದ್ದೇವೆ. ರೈತರ ಮನೆ ಬಾಗಿಲಿಗೆ ಪಿಂಚಣಿಯನ್ನು 74 ಗಂಟೆಗಳಲ್ಲಿ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ದೇವರ ಇಚ್ಛೆ, ಸಿಎಂ ಅದೃಷ್ಟದಿಂದ ಒಳ್ಳೆಯ ಮಳೆ ಬಂದಿದೆ. ಕೃಷಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟರೆ ಒಳ್ಳೆಯ ಬೆಳೆ ಬರುತ್ತದೆ ಎಂದು ಹೇಳಿದರು.

ರೈತರಿಗೆ ಬೇಕಾದ ಸಂಶೋಧನೆಯಾಗಬೇಕು: ಕೃಷ್ಣಭೈರೇಗೌಡ 

ಇನ್ನು ಮಾಜಿ ಸಚಿವ ಕೃಷ್ಣಭೈರೇಗೌಡ ಮಾತನಾಡಿದ್ದು, ಹೊಸ ಸಂಶೋಧನೆ, ಕೃಷಿ ಪದ್ಧತಿ ಬಗ್ಗೆ ತಿಳಿಸಲು ಕೃಷಿ ಮೇಳ. ಹೊಸ ಸಂಶೋಧನೆ ತಲುಪಿದಾಗಲೇ ಸಾಧನೆಗೆ ಒಂದು ಗೌರವ. ನವೋದ್ಯಮಗಳಿಗೆ ಪ್ರೋತ್ಸಾಹ ನೀಡುವ ಕೆಲಸ ನಡೆಯುತ್ತಿದೆ. ಹಳ್ಳಿಯಲ್ಲಿ ರೈತರ ಆದಾಯ ಕುಸಿಯುತ್ತಿದೆ ಎಂದು ಹೇಳಲಾಗುತ್ತಿದೆ. ರೈತರಿಗೆ ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚಾಗಿದೆ. ನೀಡುವ ಕೂಲಿ ಹೆಚ್ಚು ಮತ್ತು ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಯಂತ್ರೋಪಕರಣ ಬಳಸುವುದರಿಂದ ಖರ್ಚು ಕಡಿಮೆ ಆಗಬಹುದು. ಇದರಿಂದಾಗಿ ರೈತರ ಆದಾಯ ಕೂಡ ಹೆಚ್ಚಾಗುತ್ತಿದೆ. ಪ್ರತಿವರ್ಷ ಕೃಷಿ ಮೇಳ ಅದ್ಭುತವಾಗಿ ಆಯೋಜನೆ ಮಾಡುತ್ತಿದ್ದಾರೆ. ರೈತರಿಗೆ ಬೇಕಾದ ಸಂಶೋಧನೆ ಮಾಡಬೇಕೆಂದು ವಿವಿಗೆ ಸಲಹೆ‌ ನೀಡಿದರು.

ರೈತರು ಪ್ರತಿಭಟನೆ ಮಾಡಿದರೆ ಅನ್ನ ಸಿಗಲ್ಲ: ಸಚಿವ ಬಿ.ಸಿ.ಪಾಟೀಲ್

ಎಲ್ಲಾ ರೈತರು ಕೂಡ ಪ್ರತಿಭಟನೆ ಮಾಡಿದರೆ ಅನ್ನ ಸಿಗುವುದಿಲ್ಲ. ಕೃಷಿ ವಿವಿಯಲ್ಲಿ ಕೃಷಿಕ ಮಕ್ಕಳಿಗೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾನಿಧಿ ಯೋಜನೆ ಜಾರಿ ಆಗಿದೆ. ಅಲ್ಲದೇ ರೈತ ಶಕ್ತಿ ಎಂಬ ಯೋಜನೆಯನ್ನೂ ಜಾರಿಗೆ ತಂದಿದ್ದೇವೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರ ಖಾತೆಗೆ ಹಣ ಹಾಕಿದ್ದೇವೆ. ಕೇಂದ್ರ ಸರ್ಕಾರ 3 ಕಂತುಗಳಲ್ಲಿ 6 ಸಾವಿರ ರೂ. ನೀಡುತ್ತಿದೆ. ರಾಜ್ಯ ಸರ್ಕಾರದಿಂದ ತಲಾ 4 ಸಾವಿರ ರೂ. ನೀಡುತ್ತಿದ್ದೇವೆ ಎಂದು ಕೃಷಿ ಮೇಳದಲ್ಲಿ ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.