ನೆರವು ಕೇಳಿಬಂದ ಮಹಿಳೆಗೆ ಕಪಾಳಮೋಕ್ಷ: ಸಚಿವ ವಿ.ಸೋಮಣ್ಣ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು

ನೆರವು ಕೇಳಿಬಂದ ಮಹಿಳೆಗೆ ಸೋಮಣ್ಣ ಕಪಾಳಮೋಕ್ಷ ಪ್ರಕರಣ ಹಿನ್ನೆಲೆ ಸಚಿವ ವಿ.ಸೋಮಣ್ಣ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ,

ನೆರವು ಕೇಳಿಬಂದ ಮಹಿಳೆಗೆ ಕಪಾಳಮೋಕ್ಷ: ಸಚಿವ ವಿ.ಸೋಮಣ್ಣ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು
ಸಚಿವ ವಿ.ಸೋಮಣ್ಣ
Edited By:

Updated on: Oct 25, 2022 | 5:01 PM

ಬೆಂಗಳೂರು: ನೆರವು ಕೇಳಿಬಂದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಪ್ರಕರಣ ಸಂಬಂಧ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್​ ಪ್ರಚಾರ ಸಮಿತಿಯಿಂದ ಸೋಮಣ್ಣ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಸೋಮಣ್ಣ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಅ.23ರಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಮಹಿಳೆಗೆ ಸಚಿವ ಸೋಮಣ್ಣ ಕಪಾಳಮೋಕ್ಷ ಮಾಡಿದ್ದರು. ಈ ಕುರಿತು ವಿ. ಸೋಮಣ್ಣ ಮಾತನಾಡಿದ್ದು, ಕಾರ್ಯಕ್ರಮದಲ್ಲಿ ಸಣ್ಣ ಅಪಚಾರವನ್ನು ಮಾಡಿಲ್ಲ. ಪ್ರಾಯಶಃ ಯಾರಿಗಾದರು ಮನಸ್ಸಿಗೆ ನೋವಾಗಿದ್ದಾರೆ ಕ್ಷಮೆ ಯಾಚಿಸುತ್ತೇನೆ, ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕ್ಷಮೆ ಕೇಳಿದ್ದಾರೆ. 45 ವರ್ಷ ಹಲವು ಏಳುಬೀಳು ಕಂಡಿದ್ದೇನೆ. ನಿನ್ನೆಯ ಘಟನೆ ಘಟನೆಯೇ ಅಲ್ಲ. ಹೆಣ್ಣು ಮಗಳು ಪದೇಪದೇ ವೇದಿಕೆ ಮೇಲೆ ಬರ್ತಾ ಇದ್ದಳು. ತಾಯಿ ಎಷ್ಟು ಸಾರಿ ಬರ್ತೀಯ ಅಂತ ವಿಚಾರಿಸಿದೆ, ನಿನ್ನ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದ್ದೇನೆ,  ವಿನಃ ಇನ್ನೇನು ಉದ್ದೇಶ ಇರಲ್ಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಅಪಾರವಾದ ಗೌರವ, ಮಮಕಾರ ಇದೆ. ನಾನು ಕೂಡ ಬಡತನದಿಂದಲೇ ಬಂದವನು. ಆ ಹೆಣ್ಣು ಮಗಳಿಗೆ ಸಹ ಹಕ್ಕು ಪತ್ರ ಕೊಡಿಸಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕ್ಷಮೆ ಕೇಳಿದ್ದಾರೆ.

ಸಚಿವರು ಹೊಡೆಯಲಿಲ್ಲ ಎಂದ ಪೆಟ್ಟು ತಿಂದ ಮಹಿಳೆ

ಘಟನೆ ಕುರಿತು ಸ್ಪಷ್ಟನೆ ನೀಡಿರುವ ಪೆಟ್ಟು ತಿಂದ ಮಹಿಳೆ ಕೆಂಪಮ್ಮ, ನನಗೆ ಸಚಿವರು ಕಪಾಳಮೋಕ್ಷ ಮಾಡಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನನಗೂ ಸೈಟ್‌ ಕೊಡಿ ಎಂದು ಕಾಲಿಗೆಬಿದ್ದೆ. ಸಚಿವರು ನನ್ನನ್ನು ಎತ್ತಿ ಕ್ಷಮೆ ಕೇಳಿ ಸಮಾಧಾನಪಡಿಸಿದರು. ಸಚಿವರು ನನಗೆ ಹೊಡೆಯಲಿಲ್ಲ. ಆದರೆ ಅವರು ನನಗೆ ಹೊಡೆದಿದ್ದಾರೆಂದು ತಪ್ಪು ಅಪವಾದ ಹೊರಿಸಿದ್ದಾರೆ. ಸೈಟಿಗೆಂದು ಕೊಟ್ಟಿದ್ದ ನಾಲ್ಕು ಸಾವಿರ ರೂಪಾಯಿಯನ್ನು ವಾಪಸ್ ಕೊಡಿಸಿದ್ದಾರೆ. ಪುಣ್ಯಾತ್ಮ ನನಗೆ ಸೈಟ್ ಕೊಡ್ಸಿ ನನ್ನ ಮಕ್ಕಳಿಗೆ ದಾರಿ ತೋರಿಸಿ ಒಳ್ಳೆಯದು ಮಾಡಿದ್ದಾರೆ. ನಾನು ಅವರ ಫೋಟೋ ಇಟ್ಕೊಂಡು ಪೂಜೆ ಮಾಡುತ್ತೇನೆ ಎಂದು ಹೇಳಿದರು. ಸಚಿವರ ಆಪ್ತ ಸಹಾಯಕನಿಂದ ಮಹಿಳೆಯ ಸ್ಪಷ್ಟನೆ ವಿಡಿಯೋ ಬಿಡುಗಡೆ ಮಾಡಲಾಗಿದೆ. ಆದರೆ ಇದಕ್ಕೂ ಮೊದಲು ಹರಿದಾಡಿದ್ದ ವಿಡಿಯೋದಲ್ಲಿ ಸಚಿವ ವಿ.ಸೋಮಣ್ಣ ಮಹಿಳೆಯ ಕೆನ್ನೆಗೆ ಹೊಡೆಯುವುದು ಸ್ಪಷ್ಟವಾಗಿ ದಾಖಲಾಗಿದೆ.

ಸಚಿವ ಸೋಮಣ್ಣ ವಜಾಗೊಳಿಸಲು ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹ

ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿದ್ದು, ಕೂಡಲೆ ಸಚಿವ ವಿ. ಸೋಮಣ್ಣ ಅವರನ್ನು ವಜಾಗೊಳಿಸಬೇಕೆಂದು ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹಿಸಿದ್ದಾರೆ. ಪ್ರಧಾನ ಮಂತ್ರಿಗಳು ಕೆಂಪುಕೋಟೆ ಮೇಲೆ ನಿಂತು ಮಹಿಳೆಯ ರಕ್ಷಣೆ ಬಗ್ಗೆ ‌ಮಾತನಾಡುತ್ತಾರೆ. ಭಾರತೀಯ ಮಹಿಳೆಯರನ್ನ ಗೌರವದಿಂದ ಕಾಣಬೇಕು ಎಂದು ಭಾಷಣ ಮಾಡುತ್ತಾರೆ. ಇದೇನಾ ಭಾರತೀಯ ಜನತಾ ಪಾರ್ಟಿ ಮಹಿಳೆಯರಿಗೆ ನೀಡುವ ಗೌರವ? ಇದೇನಾ ಬಿಜೆಪಿ ಮಹಿಳೆಯರಿಗೆ ನೀಡುವ ಭದ್ರತೆ ಸುರಕ್ಷತೆ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಮಂತ್ರಿಗಳೇ ಕೂಡಲೇ ಸಚಿವ ಸೋಮಣ್ಣ ಅವರನ್ನ ಸಂಪುಟದಿಂದ ವಜಾ ಮಾಡಿಸಿ. ಪೇ ಸಿಎಂ, 40% ಕಮಿಷನ್ ಸಿಎಂ ಬೊಮ್ಮಾಯಿ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಕೂಡಲೇ ಸಂಪುಟದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಮಹಿಳೆಯರ ಬಗ್ಗೆ ನಿಮ್ಮ ಹೇಳಿಕೆಗಳು ಬಾಯಿ ಮಾತಿಗಷ್ಟೇ ಸೀಮಿತ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:01 pm, Tue, 25 October 22

Loading...
Unable to load recommendations.
Follow Us