
ಬೆಂಗಳೂರು, ಆಗಸ್ಟ್ 27: ಸಚಿವ ಬಿ.ನಾಗೇಂದ್ರ ರಾಜೀನಾಮೆ ವಿಚಾರ, ಮಹಿಳಾ ಕೋಟಾ ಆಕಾಂಕ್ಷಿಗಳಿಗೆ ಸಚಿವ ಸ್ಥಾನ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ ಸಂಬಂಧ ಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿರುವ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿಗೊಂಡಿವೆ. ಸೂಕ್ತ ಸ್ಥಾನಮಾನ, ಪ್ರಬಲ ನಿಗಮ ಮಂಡಳಿಗಳ ಸ್ಥಾನದ ಬೇಡಿಕೆ ಇಟ್ಟುಕೊಂಡು ಹೈಕಮಾಂಡ್ ಭೇಟಿಗಾಗಿ ಸಚಿವ ಸ್ಥಾನ ವಂಚಿತ ಅಶೋಕ್ ಪಟ್ಟಣ್, ಡಿ.ಜಿ.ಶಾಂತನಗೌಡ, ಬಸನಗೌಡ ದದ್ದಲ್ ಸೇರಿದಂತೆ ಕಾಂಗ್ರೆಸ್ನ 12ಕ್ಕೂ ಹೆಚ್ಚು ಶಾಸಕರು ದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.
ಇನ್ನು ದೆಹಲಿ ಪ್ರವಾಸ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಅಶೋಕ್ ಪಟ್ಟಣ್. ಮಂತ್ರಿ ಆಗೋಕ್ಕೆ ಪ್ರಯತ್ನ ಮಾಡಿ ಸಿಕ್ಕಿಲ್ಲ ಎಂದು ಬೇಜಾರಿತ್ತು. ಆದ್ರೆ ಅದೆಲ್ಲವೂ ಮುಗಿದುಹೋದ ವಿಚಾರ. ನಾವು ನಾಳೆ ದೆಹಲಿಗೆ ತೆರಳುತ್ತಿದ್ದು, ಗೌರವಯುಕ್ತ ಸ್ಥಾನ ಕೊಡಿ ಎಂದು ವರಿಷ್ಠರನ್ನು ಕೇಳುತ್ತೇವೆ ಎಂದು ತಿಳಿಸಿದ್ದಾರೆ. ಕೆಲ ಸಚಿವರ ರಾಜೀನಾಮೆ ವದಂತಿ ವಿಚಾರವಾಗಿಯೂ ಪ್ರತಿಕ್ರಿಯಿಸಿರುವ ಅವರು, ನನ್ನ ಪ್ರಕಾರ ಯಾರದ್ದೂ ರಾಜೀನಾಮೆ ಇಲ್ಲ. ನಾಗೇಂದ್ರ ವಿಚಾರವನ್ನು ಹೈಕಮಾಂಡ್ ನಾಯಕರು ನಿರ್ಧರಿಸುತ್ತಾರೆ ಎಂದವರು ಹೇಳಿದ್ದಾರೆ.
ಇದನ್ನೂ ಓದಿ: ಹೊಸ ಸರ್ಕಾರದ ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಗಾಂಧಿ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
ಮತ್ತೊಂದೆಡೆ ಸಿಎಂ ಡಿಕೆಶಿ ದೆಹಲಿ ಭೇಟಿ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾನು ಈಗ ಕಲಬುರಗಿಯಲ್ಲಿದ್ದೇನೆ, ನನಗೆ ಮಾಹಿತಿ ಇಲ್ಲ. ಏನೇ ಬದಲಾವಣೆ ಇದ್ದರೂ ನನ್ನ ಬಳಿ ಬರಲೇಬೇಕು. ಡಿ.ಕೆ.ಶಿವಕುಮಾರ್ ನನ್ನ ಬಳಿ ಬಂದ ಮೇಲೆ ನಿಮಗೆ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.
ಮೂರು ವರ್ಷ ಸಚಿವರಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಈಗ ಮತ್ತೆ ಅವಕಾಶ ಕೊಟ್ಟರೆ ಕೆಲಸ ಮಾಡುತ್ತೇನೆ. ಅವಕಾಶ ಕೊಡದಿದ್ದರೆ ಪಕ್ಷಕ್ಕಾಗಿ ಕೆಲ ಮುಂದುವರಿಸುತ್ತೇನೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಸಚಿವಸ್ಥಾನ ತಪ್ಪಲು ನನ್ನ ವಿರುದ್ಧ ಯಾರೂ ಷಡ್ಯಂತ್ರ ಮಾಡಿಲ್ಲ. ಅನಿವಾರ್ಯ ಕಾರಣಗಳಿಂದ ನನಗೆ ಮಂತ್ರಿ ಸ್ಥಾನ ತಪ್ಪಿದೆ. ರಾಜಕಾರಣದಲ್ಲಿ ಯಾವಾಗ ಏನು ಬೇಕಾದ್ರೂ ಆಗಬಹುದು. ಮಹಿಳೆಯರಿಲ್ಲದ ಸಂಪುಟ ನಿಜವಾಗಲೂ ಅದು ಅಪೂರ್ಣ. ಈಗಾಗಲೇ ಉಮಾಶ್ರೀ ಅವರಿಗೆ ಉಪಸಭಾಪತಿ ಸ್ಥಾನ ನೀಡಿದ್ದಾರೆ. ಕಾಂಗ್ರೆಸ್ ಇರುವ ರಾಜ್ಯಗಳಲ್ಲಿ ಮೂವರು ಮಹಿಳೆಯರಿಗೆ ಅವಕಾಶ ನೀಡಲಾಗುತ್ತೆ. ಆದರೆ ಕರ್ನಾಟಕದಲ್ಲಿ ಈಗ ಏನೋ ಹೆಚ್ಚು ಕಡಿಮೆ ಆಗಿದೆ. ಸಿಎಂ ಮಹಿಳೆಯರಿಗೆ ಅವಕಾಶ ಕೊಡುವ ಭರವಸೆ ನೀಡಿದ್ದು, ಸಚಿವಸ್ಥಾನ ನೀಡುವಂತೆ ನಾನು ಯಾರಲ್ಲೂ ಕೂಡ ಕೇಳಿಲ್ಲ. ಒಳ್ಳೆಯ ಮುಖ್ಯಮಂತ್ರಿ ಇದ್ದಾರೆ, ಕೆಲಸ ಮಾಡೋಣ ಬಿಡಿ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.