ಟ್ರಕ್​ನಲ್ಲಿ ಹಸು ಮಾಂಸ ತ್ಯಾಜ್ಯ ಸಾಗಾಟ: ನಟಿ ಐಂದ್ರಿತಾ​ ರೇ ವಿಡಿಯೋ ಟ್ವೀಟ್​ಗೆ​ ಡಿಸಿಪಿ ಹೇಳಿದ್ದಿಷ್ಟು

ಹಸು ತ್ಯಾಜ್ಯ ಸಾಗಣೆ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್​​) ನಲ್ಲಿ ನಟಿ ಐಂದ್ರಿತಾ ರೈ ಅವರು ಟ್ವೀಟ್​ ಮಾಡಿದ್ದು, ಈ ಬಗ್ಗೆ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಸ್ಪಷ್ಟನೆ ನೀಡಿದ್ದಾರೆ.

ಟ್ರಕ್​ನಲ್ಲಿ ಹಸು ಮಾಂಸ ತ್ಯಾಜ್ಯ ಸಾಗಾಟ: ನಟಿ ಐಂದ್ರಿತಾ​ ರೇ ವಿಡಿಯೋ ಟ್ವೀಟ್​ಗೆ​ ಡಿಸಿಪಿ ಹೇಳಿದ್ದಿಷ್ಟು
ಟ್ವೀಟ್​​ (ಎಡಚಿತ್ರ) ನಟಿ ಐಂದ್ರಿತಾ ರೇ (ಬಲಚಿತ್ರ)
Edited By: ವಿವೇಕ ಬಿರಾದಾರ

Updated on: Sep 08, 2023 | 11:53 AM

ಬೆಂಗಳೂರು: ಕಳೆದ ಬಿಜೆಪಿ (BJP) ಸರ್ಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಈ ಕಾಯ್ದೆ ಪ್ರಕಾರ ಗೋಹತ್ಯೆ ಮಾಡಿದರೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಮತ್ತು ಮೊದಲ ಬಾರಿ ಅಪರಾಧ ಮಾಡಿದರೇ ಐದು ಲಕ್ಷ ರೂ. ದಂಡ. ಇನ್ನು ಅದೇ ಅಪರಾಧವನ್ನು ಮತ್ತೆ ಮಾಡಿದ್ದಲ್ಲಿ ಪ್ರತಿ ಹಸಚಿವಿನ ಹತ್ಯೆಗೆ ಒಂದು ಲಕ್ಷದಿಂದ 10 ಲಕ್ಷ ರೂ.ಗಳವರೆಗೆ ದಂಡ ಮತ್ತು ಏಳು ವರ್ಷ ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೂ ಕೂಡ ಕೆಲ ದುಷ್ಕರ್ಮಿಗಳು ಗೋಹತ್ಯೆ (Cow Slaugter) ಮಾಡುತ್ತಿದ್ದಾರೆ. ಹೀಗೆ ಹಸುಗಳನ್ನು ಹತ್ಯೆ ಮಾಡಿ ಟ್ರಕ್​​ನಲ್ಲಿ ಮಾಂಸ ತ್ಯಾಜ್ಯ ಸಾಗಣೆ ಮಾಡುತ್ತಿರುವ ವಿಡಿಯೋವೊಂದು ವೈರಲ್​​ ಆಗುತ್ತಿದೆ.

ಹಸು ತ್ಯಾಜ್ಯ ಸಾಗಣೆ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್​​) ನಲ್ಲಿ ನಟಿ ಐಂದ್ರಿತಾ ರೈ (Aindrita Ray) ಅವರು ಟ್ವೀಟ್​ ಮಾಡಿ “ನಿನ್ನೆ ರಾತ್ರಿ ಟ್ರಕ್‌ನಲ್ಲಿ ಹಸುವಿನ ತ್ಯಾಜ್ಯವನ್ನು (ಮೂಳೆ, ಕೊಂಬು, ಕಾಲುಗಳು) ಸಾಗಿಸಲಾಗುತ್ತಿತ್ತು. ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಪೊಲೀಸರು ನಿರಾಕರಿಸುತ್ತಿದ್ದಾರೆ. ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಬೇಕು. ಗೋಹತ್ಯೆ ಕಾನೂನು ಬಾಹಿರ” ಎಂದು ಬೆಂಗಳೂರು ನಗರ ಪೊಲೀಸರಿಗೆ, ಬೆಂಗಳೂರು ನಗರ ಪೊಲೀಸ್​ ಕಮಿಷನರ್​, ಬೊಮ್ಮನಹಳ್ಳಿ ಪೊಲೀಸ್​ ಠಾಣೆ, ಬೆಂಗಳೂರು ಆಗ್ನೆಯ ವಿಭಾಗದ ಡಿಸಿಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್​ ಮಾಡಿ ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾನೂನು ರದ್ದುಗೊಳಿಸುವ ಪ್ರಸ್ತಾವವಿಲ್ಲ; ಪರಿಷತ್​​​ನಲ್ಲಿ ಸಚಿವ ಕೆ ವೆಂಕಟೇಶ್​ ಸ್ಪಷ್ಟನೆ

ಇನ್ನು ನಟಿ ಐಂದ್ರಿತಾ ರೇ ಆರೋಪಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಸ್ಪಷ್ಟನೆ ನೀಡಿದ್ದು, ಪಾಲಿಕೆ ಪಶು ವೈದ್ಯರು ಪರಿಶೀಲನೆ ನಡೆಸಿದ್ದಾರೆ. ಅದು ಹಸುವಿನ ತ್ಯಾಜ್ಯವಲ್ಲ ಎಂದು ವೈದ್ಯರು ದೃಡಪಡಿಸಿದ್ದಾರೆ. ಕಸಾಯಿಖಾನೆಯಿಂದ ತಮಿಳುನಾಡು ಕಡೆಗೆ ತ್ಯಾಜ್ಯ ಸಾಗಣೆ ಮಾಡಲಾಗುತ್ತಿತ್ತು, ತ್ಯಾಜ್ಯ ಸಾಗಣೆ ಸಂಬಂಧ ಸಾಗಣೆದಾರ ಪರ್ಮಿಟ್ ಹೊಂದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

2008 ಮೆರವಣಿಗೆ ಚಿತ್ರದಲ್ಲಿ ಪ್ರಜ್ವಲ್​ ದೇವರಾಜ್​ ಅವರ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಐಂದ್ರಿತಾ ರೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ 2009ರಲ್ಲಿ ಚಿರಂಜಿವಿ ಸರ್ಜಾ ಅವರೊಂದಿಗೆ ವಾಯುಪುತ್ರ ಚಿತ್ರದಲ್ಲಿ ನಟಿಸಿದರು. ಇವರು ದುನಿಯಾ ವಿಜಯ್​ ಅವರೊಂದಿಗೆ ಜಂಗ್ಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಖ್ಯಾತಿ ಗಳಿಸಿದರು. ನಂತರ ಬಿಡುಗಡೆಯಾದ ಇವರ ವೀರ ಪರಂಪರೆ, ಪಾರಿಜಾತ ಮತ್ತು ಪರಮಾತ್ಮ ಇವರಿಗೆ ಜನಪ್ರಿಯತೆ ​ತಂದುಕೊಟ್ಟವು. ಪಡ್ಡೆ ಹುಡುಗರ ನಿದ್ದೆ ಕದ್ದ ಐಂದ್ರಿತಾ ರೇ 2018ರಲ್ಲಿ ನಟ ದಿಗಂತ್​ ಅವರೊಂದಿಗೆ ಸಪ್ತಪದಿ ತುಳಿದರು. ​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Rachappaji Naik S

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Follow Us