ಬೆಂಗಳೂರಿನಲ್ಲಿ ಕಡಲ್ ಥೆರಪಿ ಟ್ರೆಂಡ್: ಇಲ್ಲಿ ಅಪ್ಪಿಕೊಳ್ಳುತ್ತಾರೆ, ಕೈ ಹಿಡಿಯುತ್ತಾರೆ, ಗಂಟೆಗೆ 5,000 ರೂ.
ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚುತ್ತಿರುವ ಒಂಟಿತನ, ಕೆಲಸದ ಒತ್ತಡ ಮತ್ತು ಟ್ರಾಫಿಕ್ ಸಮಸ್ಯೆಗಳ ನಡುವೆ 'ಕಡಲ್ ಥೆರಪಿ' ಅಥವಾ ವೃತ್ತಿಪರ ಆಲಿಂಗನ ಚಿಕಿತ್ಸೆ ಜನಪ್ರಿಯವಾಗುತ್ತಿದೆ. ಇದು ಲೈಂಗಿಕೇತರ ಸ್ಪರ್ಶ ಚಿಕಿತ್ಸೆಯಾಗಿದ್ದು, ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆ ಮಾಡಿ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಆದರೂ ಇದು ತಾತ್ಕಾಲಿಕ ಪರಿಹಾರವಾಗಿದ್ದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವುದು ಉತ್ತಮ ಮಾರ್ಗ.

ಬೆಂಗಳೂರು, ಫೆ.18: ಜೀವನದಲ್ಲಿ ತುಂಬಾ ಸೋತು, ಕೆಲಸದ ಒತ್ತಡ, ಮತ್ತೊಂದು ಕಡೆ ಮಾನಸಿಕ ನೆಮ್ಮದಿ ಇಲ್ಲದಾಗ ಒಂಟಿತನ ಕಾಡುವುದು ಸಹಜ, ಆದರೆ ಅದರಿಂದ ಹೊರಗೆ ಬರುಲು ತುಂಬಾ ಸಮಯ ತೆಗೆದುಕೊಳ್ಳುತ್ತೇವೆ. ಅದರಲ್ಲೂ ಬೆಂಗಳೂರಿಗರೇ ಈ ಎಲ್ಲ ತೊಂದರೆಗಳ ನಡುವೆ ಟ್ರಾಫಿಕ್ ಗೋಳು ಕೂಡ ಮಾನಸಿಕ ಒತ್ತಡವಾಗಿದೆ. ಅದಕ್ಕಾಗಿ ಇಂದಿನ ಯಾಂತ್ರಿಕ ಜೀವನದಲ್ಲಿ ಜನರು ಎದುರಿಸುತ್ತಿರುವ ಒಂಟಿತನ ಮತ್ತು ಒತ್ತಡವನ್ನು ನಿವಾರಿಸಲು ‘ಕಡಲ್ ಥೆರಪಿ’ ಅಥವಾ ವೃತ್ತಿಪರ ಆಲಿಂಗನ ಚಿಕಿತ್ಸೆ (Professional Snuggling) ಜನಪ್ರಿಯವಾಗುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ 32-35 ವರ್ಷ ವಯಸ್ಸಿನ ಜನರು ಹೆಚ್ಚಾಗಿ ಈ ಸೇವೆಯನ್ನು ಬಳಸುತ್ತಿದ್ದಾರೆ .
ಕಡಲ್ ಥೆರಪಿ ಎಂದರೇನು?
ಇದು ಸಂಪೂರ್ಣವಾಗಿ ಲೈಂಗಿಕೇತರ (Non-sexual), ಸ್ನೇಹಪೂರ್ವಕ ಸ್ಪರ್ಶ ಚಿಕಿತ್ಸೆಯಾಗಿದೆ. ಇದರಲ್ಲಿ ತರಬೇತಿ ಪಡೆದ ಥೆರಪಿಸ್ಟ್ಗಳು ಗ್ರಾಹಕರ ಜೊತೆ ಸಮಯ ಕಳೆಯುತ್ತಾರೆ. ಅವರು ಗ್ರಾಹಕರ ಕೈ ಹಿಡಿಯುವುದು, ಪಕ್ಕದಲ್ಲಿ ಕುಳಿತು ಹರಟೆ ಹೊಡೆಯುವುದು ಅಥವಾ ಆತ್ಮೀಯವಾಗಿ ಆಲಿಂಗಿಸಿಕೊಳ್ಳುವ ಮೂಲಕ ಅವರ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತಾರೆ.
ಭಾರತದಲ್ಲಿ ಈ ಟ್ರೆಂಡ್ ಹೇಗಿದೆ?
ವಿದೇಶಗಳಲ್ಲಿ ಮೊದಲೇ ಜನಪ್ರಿಯವಾಗಿದ್ದ ಈ ಚಿಕಿತ್ಸೆ ಈಗ ಭಾರತದ ಬೆಂಗಳೂರು, ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಈ ಸೇವೆಯನ್ನು ಪಡೆಯಲು ಗಂಟೆಗೆ ಅಥವಾ 3-4 ಗಂಟೆಗಳ ಅವಧಿಗೆ ಸುಮಾರು 5,000 ರೂಪಾಯಿಗಳವರೆಗೆ ದರ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಿಂದ 60 ದಶಲಕ್ಷ ಗುಲಾಬಿ ರಫ್ತು: ಹೂವಿನ ರಫ್ತಿನಲ್ಲಿ ದಾಖಲೆ
ಹೇಗೆ ಕೆಲಸ ಮಾಡುತ್ತದೆ?
ಚಿಕಿತ್ಸೆಯ ಮೊದಲು ಇದರಲ್ಲಿ ಭಾಗಿಯಾಗುವ ಗ್ರಾಹಕ ನಿಯಮಗಳಿಗೆ ಒಪ್ಪಿಗೆ ನೀಡಬೇಕು. ಚಿಕಿತ್ಸೆಯ ಸಮಯದಲ್ಲಿ ಪೂರ್ಣವಾಗಿ ಬಟ್ಟೆ ಧರಿಸಿರಬೇಕು. ಮುದ್ದು ಮಾಡುವುದು ಅಥವಾ ಲೈಂಗಿಕ ಸ್ಪರ್ಶಕ್ಕೆ ಇಲ್ಲಿ ಅವಕಾಶವಿಲ್ಲ.
ಮಾನವ ಸ್ಪರ್ಶದಿಂದ ದೇಹದಲ್ಲಿ ‘ಆಕ್ಸಿಟೋಸಿನ್’ (Oxytocin) ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದನ್ನು ‘ಫೀಲ್ ಗುಡ್’ ಹಾರ್ಮೋನ್ ಎನ್ನಲಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.
ಮುನ್ನೆಚ್ಚರಿಕೆಗಳು:
ಈ ಸೇವೆಯನ್ನು ಒದಗಿಸುವವರ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸಬೇಕು.
ನಕಲಿ ವೆಬ್ಸೈಟ್ಗಳ ಬಗ್ಗೆ ಎಚ್ಚರಿಕೆ ಇರಬೇಕು.
ಇದು ಕೇವಲ ತಾತ್ಕಾಲಿಕ ಪರಿಹಾರವಾಗಿದ್ದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವುದೇ ಅತ್ಯುತ್ತಮ ಮಾರ್ಗ ಎಂದು ತಜ್ಞರು ಸಲಹೆ ನೀಡುತ್ತಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:07 am, Wed, 18 February 26
