ಮನೆ ಕಟ್ಟುವವರಿಗೆ ‘ನಂಬಿಕೆ ರಕ್ಷೆ’ ವಿತರಣೆ: ಬಿಬಿಎಂಪಿ ಹೊಸ ಆಸ್ತಿ ತೆರಿಗೆ ಪದ್ಧತಿ ಜಾರಿ

| Updated By: Rakesh Nayak Manchi

Updated on: Mar 11, 2024 | 6:53 PM

ವಿಧಾನಸೌಧದಲ್ಲಿ ಇಂದು ಸ್ವಂತ ಮನೆಗಳನ್ನು ಕಟ್ಟುವವರಿಗೆ ಅನುಕೂಲವಾಗಲು ನಂಬಿಕೆ ರಕ್ಷೆ ಯೋಜನೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್, ಮನೆ ಕಟ್ಟುವವರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ರಾಂತಿಕಾರಕ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದರು. ಅಲ್ಲದೆ, ಹೊಸ ಆಸ್ತಿ ತೆರಿಗೆ ಪದ್ಧತಿ ಜಾರಿ ಮಾಡಲಾಗುತ್ತಿದೆ ಎಂದರು.

ಮನೆ ಕಟ್ಟುವವರಿಗೆ ನಂಬಿಕೆ ರಕ್ಷೆ ವಿತರಣೆ: ಬಿಬಿಎಂಪಿ ಹೊಸ ಆಸ್ತಿ ತೆರಿಗೆ ಪದ್ಧತಿ ಜಾರಿ
ನಂಬಿಕೆ ರಕ್ಷೆ ಯೋಜನೆಗೆ ಡಿಕೆ ಶಿವಕುಮಾರ್ ಚಾಲನೆ
Follow us on

ಬೆಂಗಳೂರು, ಮಾ.11: ಸ್ವಂತ ಮನೆ ಕಟ್ಟುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೂಪಿಸಲಾದ ನಂಬಿಕೆ ರಕ್ಷೆ (Nambike Raksha) ಯೋಜನೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ವಿಧಾನಸೌಧದಲ್ಲಿ ಇಂದು ಚಾಲನೆ ನೀಡಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ನಾಗರೀಕರಿಗೆ ಪಾರದರ್ಶಕ ನೀತಿ ರೂಪಿಸಿದ್ದೇವೆ. ಮನೆ ಕಟ್ಟುವವರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ರಾಂತಿಕಾರಕ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದರು.

50×80 ಅಡಿ ಅಳತೆಯ ನಿವೇಶನ ಆಟೋಮೇಟೆಡ್ ಕಟ್ಟಡ ನಕ್ಷೆ ಮಂಜೂರಾತಿ ಮಾಡಲಾಗುವುದು. ಅನುಮತಿಗಳನ್ನ ಮಂಜುರು ಮಾಡುವ ಬದಲು ಆನ್ ಲೈನ್ ನಲ್ಲಿ ಮಂಜೂರಾತಿ ಮಾಡಲಾಗುವುದು. ಆನ್ ಲೈನ್​ನಲ್ಲಿ ಅರ್ಜಿ ಹಾಕಿದ ನಂತರ ಇಂಜಿನಿಯರ್​ಗಳಿಂದ ಮಂಜೂರಾತಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು. ಮೊದಲ ಹಂತದಲ್ಲಿ ರಾಜರಾಜೇಶ್ವರಿ ಹಾಗೂ ದಾಸರಹಳ್ಳಿ ವಲಯದಲ್ಲಿ ಮೊದಲು ಪ್ರಾರಂಭ ಮಾಡಲಾಗುತ್ತದೆ. ಆ ನಂತರ ಬೆಂಗಳೂರಿನಲ್ಲಿ ಜಾರಿಯಾಗುತ್ತದೆ. ಆನ್ ಲೈಲ್​ನಲ್ಲಿ ಏನೆಲ್ಲಾ ಜಾಹೀರಾತು ಕೊಡಬೇಕು ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಡಿಕೆ ಶಿವಕುಮಾರ್ ಎಕ್ಸ್ ಪೋಸ್ಟ್

ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಕಟ್ಟುವವರಿಗೆ ನಕ್ಷೆ ಮಂಜೂರಾತಿ ಒಂದು ಕ್ರಾಂತಿಕಾರಕ ವ್ಯವಸ್ಥೆಯಾದ ʼನಂಬಿಕೆ ನಕ್ಷೆʼಯನ್ನು ವಿಧಾನಸೌಧದಲ್ಲಿ ಇಂದು ಉದ್ಘಾಟಿಸಿದೆ. ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಯಡಿಯಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದ್ದು 50×80 ಅಡಿವರೆಗಿನ 4 ಯೂನಿಟ್‌ವರೆಗಿನ ಮನೆಗಳ ನಕ್ಷೆಯನ್ನು ಮನೆ ಬಾಗಿಲಿಗೆ ತಲುಪಿಸುವ ಮಹತ್ತರ ವ್ಯವಸ್ಥೆ ಇದಾಗಿದೆ.

ಮನೆ ಕಟ್ಟಲು ಬಯಸುವವರು ಆನ್‌ಲೈನ್‌ ಮೂಲಕ ತಮ್ಮ ದಾಖಲೆಗಳನ್ನು ಸಲ್ಲಿಸಿ ಸರ್ಕಾರವೇ ನಿಗದಿಪಡಿಸಿರುವ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಿದರೆ, ಎಂ ಪ್ಯಾನಲ್‌ ಮೂಲಕ ನೋಂದಣಿಯಾದ ಎಂಜಿನಿಯರ್‌ ದಾಖಲೆಗಳನ್ನು ಪರಿಶೀಲಿಸಿ ನಕ್ಷೆಯನ್ನು ಅರ್ಜಿದಾರರ ಮನೆಬಾಗಿಲಿಗೆ ತಲುಪಿಸಲಿದ್ದಾರೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಇದು ಜಾರಿಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡಿಎ ವ್ಯಾಪ್ತಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕಟ್ಟಡದ ನಕ್ಷೆ ಅನುಮತಿ: ತಪ್ಪಿತು ಕಚೇರಿ ಅಲೆದಾಟ

ಈ ಹಿಂದೆ ಬೆಂಗಳೂರಿನಲ್ಲಿ ಮನೆ ಕಟ್ಟುವವರು ಕಟ್ಟಡದ ನಕ್ಷೆಗೆ ಅನುಮತಿ ಪಡೆಯಲು ಪಾಲಿಕೆ ಕಚೇರಿ ಅಲೆದಾಡಬೇಕಿತ್ತು. ಆದರೆ, ಈಗ 50X80 ವಿಸ್ತೀರ್ಣವರೆಗಿನ ನಿವೇಶನ ಹೊಂದಿರುವ ಹಾಗೂ 4 ಯುನಿಟ್ ಮನೆ ಕಟ್ಟಿಕೊಳ್ಳುವವರು ಸರ್ಕಾರದ ಪಟ್ಟಿಯಲ್ಲಿ ನೊಂದಾಯಿತರಾಗಿರುವ ವಾಸ್ತುಶಿಲ್ಪಿ ಅಥವಾ ಇಂಜಿನಿಯರ್ ಮೂಲಕ ಆನ್ ಲೈನ್​ನಲ್ಲಿ ಕಟ್ಟಡದ ನಕ್ಷೆಗೆ ಸ್ವಯಂ ಅನುಮತಿ ಪಡೆಯಬಹುದಾಗಿದೆ.

ಇದನ್ನೂ ಓದಿ: ಬೆಂಗಳೂರಿನ 6,900 ಬೋರ್ ವೆಲ್​ನಲ್ಲಿ ನೀರು ಬರುತ್ತಿಲ್ಲ, ಸ್ಲಂಗಳಿಗೆ ಪೂರೈಕೆ ಮಾಡುವ ನೀರಿಗೂ ದರ ನಿಗದಿ: ಡಿಕೆ ಶಿವಕುಮಾರ್​

ಕಟ್ಟಡದ ನಕ್ಷೆಯನ್ನು ತಂತ್ರಜ್ಞಾನದ ಮೂಲಕ ಪರಿಶೀಲನೆ ಮಾಡಲಾಗುತ್ತದೆ. ಕಳೆದ ವರ್ಷ 9 ಸಾವಿರ ಕಟ್ಟಡ ನಕ್ಷೆ ಅನುಮತಿ ನೀಡಲಾಗಿದ್ದು, ಈ ಬಾರಿ 10 ಸಾವಿರ ನಕ್ಷೆ ಅನುಮತಿ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಹೊಸ ತೆರಿಗೆ ಪದ್ಧತಿ ಜಾರಿ

ಹೊಸ ಆಸ್ತಿ ತೆರಿಗೆ ಪದ್ದತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. 2008ರಲ್ಲಿ ಜಾರಿ ಮಾಡಲಾಗಿದ್ದ ಆಸ್ತಿ ತೆರಿಗೆ ಪದ್ಧತಿಯಲ್ಲಿ ಆಸ್ತಿಗಳನ್ನು ಒಟ್ಟು 18 ವರ್ಗೀಕರಣ ಮಾಡಲಾಗಿತ್ತು. ಇದರಿಂದ ತೆರಿಗೆ ಪಾವತಿಯಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಇದೀಗ ತೆರಿಗೆ ಪದ್ಧತಿಯನ್ನು ಸರಳೀಕರಣ ಮಾಡಲಾಗಿದ್ದು, 6 ವರ್ಗೀಕರಣಗಳನ್ನು ಮಾಡಲಾಗಿದೆ. ವಸತಿ (ಸ್ವಂತ ಬಳಕೆ ಹಾಗೂ ಬಾಡಿಗೆದಾರರ ಬಳಕೆ), ವಾಣಿಜ್ಯ, ಕೈಗಾರಿಕಾ, ಸ್ಟಾರ್ ಹೊಟೇಲ್, ವಿನಾಯಿತಿ ನೀಡಲಾದ ಹಾಗೂ ಸಂಪೂರ್ಣ ಖಾಲಿ ಜಮೀನುಗಳು ಎಂದು ವರ್ಗೀಕರಣ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬಿಬಿಎಂಪಿ ಖಾತಾ ವಿತರಣೆ

ಆಸ್ತಿ ತೆರಿಗೆ ಪಾವತಿಗೆ ತಮ್ಮನ್ನು ತಾವು ಘೋಷಣೆ ಮಾಡಿಕೊಳ್ಳದ ನಾಗರಿಕರು ತಮ್ಮ ಆಸ್ತಿಯನ್ನು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಅಂತಹವರಿಗೆ ಆಸ್ತಿ ತೆರಿಗೆ ಸಂಖ್ಯೆ ಮತ್ತು ಬಿಬಿಎಂಪಿ ಖಾತಾ ನೀಡಲಾಗುವುದು. ಬಿಬಿಎಂಪಿಯಿಂದ ದಾಖಲೆ ಸರಿಯಾಗಿ ಇರುವರಿಗೆ ಎ ಖಾತಾ ನೀಡಲಾಗುತ್ತದೆ. ಕನ್ವರ್ಷನ್ ಮಾಡಿಕೊಳ್ಳದೇ, ಯೋಜನೆ ಇಲ್ಲದವರಿಗೆ ಬಿ ಖಾತಾ ನೀಡಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Mon, 11 March 24