ಶುಶ್ರುತಿ ಸಹಕಾರ ಸೌಹಾರ್ದ ಬ್ಯಾಂಕ್ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಇಡಿ ಎಂಟ್ರಿ: ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಯಲಿಗೆ
Shushruti Souhardha Bank Fraud: ಅದು ಒಬ್ಬ ವ್ಯಕ್ತಿ ಸ್ಥಾಪಿಸಿದ ಸಹಕಾರ ಸೌಹಾರ್ದ ಬ್ಯಾಂಕ್. ಅದನ್ನು ನಂಬಿದ್ದ ಜನರು ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಕೊನೆಗೆ ಆತ ಕುಟುಂಬ ಸಹಿತ ಮೋಸಮಾಡಿಬಿಟ್ಟ. ಈಗ ಅದೇ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ ಪ್ರವೇಶಿಸಿದ್ದು, ಕೇಸ್ ದಾಖಲಿಸಿ ಒಂದೇ ದಿನ 15ಕ್ಕೂ ಹೆಚ್ಚು ಕಡೆ ದಾಳಿ ಮಾಡಿದೆ.

ಬೆಂಗಳೂರು, ಜುಲೈ 18: ಶುಶ್ರುತಿ ಸಹಕಾರ ಸೌಹಾರ್ದ ಬ್ಯಾಂಕ್ನಲ್ಲಿ (Shushruti Souhardha Bank Fraud) ಅಧಿಕ ಲಾಭ ಸಿಗುತ್ತದೆ ಎಂಬ ಆಸೆಯಿಂದ ಸಾವಿರಾರು ಜನರು ಹೂಡಿಕೆ ಮಾಡಿದ್ದರು. ಸಾವಿರಾರು ಜನರ ಒಟ್ಟು ನೂರಾರು ಕೋಟಿ ರೂ. ಕೊನೆಗೆ ನೀರಿನಲ್ಲಿ ಹೋಮ ಮಾಡಿದಂತಾಗಿತ್ತು. ಹಾಗಂತ ಆ ಹಣವನ್ನು ಯಾರೋ ಹೊತ್ತುಕೊಂಡು ಹೋಗಿಲ್ಲ, ಬದಲಾಗಿ ಬ್ಯಾಂಕನ್ನು ಸ್ಥಾಪಿಸಿದ್ದವರೇ ಅದನ್ನು ಬಳಸಿಕೊಂಡಿದ್ದಾರೆ! ಅದನ್ನು ಬಳಸಿಕೊಂಡು ಠೇವಣಿದಾರರಿಗೆ ಹಣ ವಾಪಸ್ಸು ಕೊಡದೆ ವಂಚಿಸಿದ್ದಾರೆ. ಈ ಬಗ್ಗೆ ಈ ಹಿಂದೆ ಬೆಂಗಳೂರು ಸಿಸಿಬಿ ಕೇಸ್ ದಾಖಲು ಮಾಡಿತ್ತು. ಆದರೆ ಈಗ ಈ ಶುಶ್ರುತಿ ಸೌಹಾರ್ದ ಬ್ಯಾಂಕ್ ಮೇಲೆ ಜಾರಿ ನಿರ್ದೇಶನಾಲಯ (ED) ಕೇಸ್ ದಾಖಲು ಮಾಡಿಕೊಂಡು ದಾಳಿ ಮಾಡಿದೆ.
ಶುಶ್ರುತಿ ಸೌಹಾರ್ದ ಬ್ಯಾಂಕ್ ವಂಚನೆ ಪ್ರಕರಣದ ಹಿನ್ನೆಲೆ
2022ರ ಅಕ್ಟೋಬರ್ನಲ್ಲಿ ಶುಶ್ರುತಿ ಸೌಹಾರ್ದ ಬ್ಯಾಂಕ್ ಠೇವಣಿ ದಾರರಿಗೆ ವಾಪಸ್ಸು ಹಣವನ್ನು ಮತ್ತು ಲಾಭವನ್ನು ಕೊಟ್ಟಿಲ್ಲ ಎಂಬ ಕಾರಣಕ್ಕೆ ಸಿಸಿಬಿಯ ಆರ್ಥಿಕ ಅಪರಾಧ ವಿಭಾಗ ಕೇಸ್ ದಾಖಲು ಮಾಡಿತ್ತು. ನಂತರ ಬ್ಯಾಂಕ್ ಮತ್ತು ಇತರ ಆಸ್ತಿ ಪಾಸ್ತಿಗಳ ಮೇಲೆ ದಾಳಿ ಮಾಡಿತ್ತು. ಆ ಬಳಿಕ ಕೆಪಿಐಡಿ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಿ ಕೆಲವರನ್ನು ಬಂಧಿಸಲಾಗಿತ್ತು.
ಶುಶ್ರುತಿ ಸೌಹಾರ್ದ ಬ್ಯಾಂಕ್ ಪ್ರಕರಣ: 15 ಕಡೆ ಇಡಿ ದಾಳಿ
ಆದಾಗಿ ಮೂರು ವರ್ಷಗಳ ಬಳಿಕ ಈಗ ಇಡಿ ಅಧಿಕಾರಿಗಳು ಇಸಿಐಆರ್ ದಾಖಲು ಮಾಡಿ ಬೆಂಗಳೂರು ಸೇರಿದಂತೆ ಒಟ್ಟು 15 ಕಡೆ ದಾಳಿ ಮಾಡಿದ್ದಾರೆ. ಆರೋಪಿಗಳು ಬ್ಯಾಂಕ್ನಲ್ಲಿ ಅಧ್ಯಕ್ಷ, ನಿರ್ದೇಶಕ, ಎಲ್ಲರನ್ನೂ ತಮ್ಮದೇ ಕುಟುಂಬದ ವ್ಯಕ್ತಿಗಳನ್ನು ನೇಮಕ ಮಾಡಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.
ನಕಲಿ ದಾಖಲೆ ಬಳಸಿ ಕೋಟಿ ಕೋಟಿ ಸಾಲ, ಅಕ್ರಮ ಆಸ್ತಿ ಖರೀದಿ
ಆರೋಪಿಗಳು ನಕಲಿ ದಾಖಲಾತಿಗಳನ್ನು ಬಳಸಿ ಕೋಟ್ಯಂತರ ರೂ. ಸಾಲದ ರೂಪದಲ್ಲಿ ನೀಡಿದ್ದಾರೆ. ಆದರೆ, ಅದನ್ನು ವಸೂಲಿ ಮಾಡಿಲ್ಲ. ಜೊತೆಗೆ ಈ ಹಣದಿಂದ ಅಕ್ರಮವಾಗಿ ಆಸ್ತಿ ಪಾಸ್ತಿಗಳನ್ನು ಕೊಂಡಿದ್ದಾರೆ. ಈ ಹಿಂದೆ ತನಿಖೆ ವೇಳೆ ಪತ್ತೆಯಾಗದೆ ಇದ್ದ ಹೊಸ ಹೊಸ ಆಸ್ತಿಗಗಳು ಈಗ ಇಡಿ ತನಿಖೆ ವೇಳೆ ಪತ್ತೆಯಾಗಿದೆ ಎನ್ನಲಾಗಿದೆ. ಶೃಶುತಿ ಜೊತೆಗೆ ಶ್ರೀ ಲಕ್ಷ್ಮಿ ಸೌಹಾರ್ದ ಬ್ಯಾಂಕ್ ಮಾಡಿಕೊಂಡು ಅಲ್ಲಿಯೂ ಇದೇ ಮಾದರಿಯಲ್ಲಿ ವಂಚನೆ ಮಾಡಿದ್ದಾರೆ. ಒಟ್ಟು ಎರಡೂ ಕಡೆಯಿಂದ ಹದಿನೈದು ಸಾವಿರಕ್ಕು ಹೆಚ್ಚು ಜನರ ಠೇವಣಿಯ ನೂರು ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿರುವುದುದು ಪತ್ತೆಯಾಗಿದೆ.
ಇದನ್ನೂ ಓದಿ: ಸ್ಮಾರ್ಟ್ ಮೀಟರ್ ಅಕ್ರಮ ಆರೋಪ: ಸಚಿವ ಕೆಜೆ ಜಾರ್ಜ್ಗೆ ಸಂಕಷ್ಟ, ಕೋರ್ಟ್ ಮೆಟ್ಟಿಲೇರಿದ ಬಿಜೆಪಿ
ಗುರುವಾರದ ಇಡಿ ದಾಳಿ ವೇಳೆ ಈ ಹಿಂದೆ ಸಿಸಿಬಿ ದಾಳಿವೇಳೆ ಪತ್ತೆಯಾಗದ ಹೊಸ ಸಂಪತ್ತು, ಹೊಸ ಆಸ್ತಿಗಳು ಸಿಕ್ಕಿವೆಯಂತೆ. ದಾಳಿ ವೇಳೆ ಇಡಿ ಸಾಕಷ್ಟು ಪ್ರಮಾಣದ ದಾಖಲೆಗಳನ್ನು ಜಪ್ತಿ ಮಾಡಿದೆ ಎಂಬ ಮಾಹಿತಿ ಇದೆ. ಮೊದಲ ಬಾರಿ ಕೇಸ್ ದಾಖಲಾಗಿ ಮೂರು ವರ್ಷ ಆಗುತ್ತಾ ಬಂದರೂ ನೊಂದವರಿಗೆ ಇದುವರೆಗೆ ಹಣ ವಾಪಸ್ಸು ಕೊಡಿಸಿಲ್ಲ. ಈಗ ಇಡಿ ತನಿಖೆ ಶುರುವಾಗಿದೆ. ಇನ್ನು ಮುಂದೆ ಹಣ ಕಳೆದುಕೊಂಡವರಿಗೆ ನ್ಯಾಯ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







