
ಬೆಂಗಳೂರು, ಜೂನ್ 1: ಬೆಂಗಳೂರಿನ (Bengaluru) ಅತ್ಯಂತ ಜನನಿಬಿಡ ವಾಣಿಜ್ಯ ಪ್ರದೇಶವಾದ ಬಸವನಗುಡಿಯ ಗಾಂಧಿ ಬಜಾರ್ನಲ್ಲಿ ವಾಹನ ಸವಾರರ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ನೀಡಲು ನಿರ್ಮಿಸಲಾಗಿದ್ದ ಹೈಟೆಕ್ ಮಲ್ಟಿಲೆವೆಲ್ ಪಾರ್ಕಿಂಗ್ ಲಾಟ್ ಈಗ ವಿವಾದದ ಕೇಂದ್ರಬಿಂದುವಾಗಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಬರೋಬ್ಬರಿ 27 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನಾಲ್ಕು ಅಂತಸ್ತಿನ ಈ ಬೃಹತ್ ಪಾರ್ಕಿಂಗ್ ಸಂಕೀರ್ಣವನ್ನು ಕಳೆದ ತಿಂಗಳಷ್ಟೇ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಆದರೆ, ಇದರ ಗುತ್ತಿಗೆ ಪಡೆದಿರುವ ಮಾಲೀಕ ಸಾರ್ವಜನಿಕ ವಾಹನಗಳಿಗೆ ಜಾಗ ನೀಡುವ ಬದಲಿಗೆ ಇಡೀ ಪಾರ್ಕಿಂಗ್ ಲಾಟ್ ಅನ್ನು ಐಷಾರಾಮಿ ‘ಬೆಂಜ್ ಕಾರ್ ಶೋರೂಂ’ನ ಹೊಸ ಕಾರುಗಳ ನಿಲುಗಡೆಗೆ ಅಕ್ರಮವಾಗಿ ಬಾಡಿಗೆಗೆ ನೀಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ಥಳೀಯರು ಮತ್ತು ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಂಧಿ ಬಜಾರ್ ಮಾರುಕಟ್ಟೆಗೆ ಪ್ರತಿದಿನ ಸಾವಿರಾರು ಗ್ರಾಹಕರು ಮತ್ತು ವ್ಯಾಪಾರಿಗಳು ಆಗಮಿಸುತ್ತಾರೆ. ಇಲ್ಲಿ ದಶಕಗಳಿಂದ ಇದ್ದ ಪಾರ್ಕಿಂಗ್ ಸಮಸ್ಯೆಗೆ ಪರಿಹಾರವಾಗಿ ಈ ಬೃಹತ್ ಕಟ್ಟಡ ತಲೆಯೆತ್ತಿತ್ತು. ಆದರೆ, ಗುತ್ತಿಗೆದಾರನ ದುರಾಶೆಯಿಂದಾಗಿ ಸಾರ್ವಜನಿಕರಿಗೆ ಇಲ್ಲಿ ವಾಹನ ನಿಲ್ಲಿಸಲು ಅವಕಾಶವೇ ಸಿಗುತ್ತಿಲ್ಲ. ಇದರಿಂದ ಬೇಸತ್ತ ವಾಹನ ಸವಾರರು ಅನಿವಾರ್ಯವಾಗಿ ಗಾಂಧಿ ಬಜಾರ್ ಸುತ್ತಮುತ್ತಲಿನ ನಿವಾಸಿಗಳ ಮನೆಗಳ ಮುಂದೆ ಹಾಗೂ ಅಂಗಡಿ ಮುಂಗಟ್ಟುಗಳ ಎದುರು ತಮ್ಮ ಕಾರು, ಬೈಕ್ಗಳನ್ನು ನಿಲ್ಲಿಸಿ ಹೋಗುತ್ತಿದ್ದಾರೆ. ಇದು ಸ್ಥಳೀಯ ನಿವಾಸಿಗಳ ನೆಮ್ಮದಿ ಕೆಡಿಸಿದ್ದು, ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
‘ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾದ ಪಾರ್ಕಿಂಗ್ ಜಾಗವನ್ನು ಖಾಸಗಿ ಕಾರ್ ಶೋರೂಂನ ಗೋಡೌನ್ ತರಹ ಬಳಸಿ ಲೂಟಿ ಹೊಡೆಯಲಾಗುತ್ತಿದೆ’ ಎಂದು ಹೆರಿಟೇಜ್ ಬಸವನಗುಡಿ ಸಂಸ್ಥೆಯ ಕಾರ್ಯದರ್ಶಿ ಗುರುಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾರ್ಕಿಂಗ್ ಸಂಕೀರ್ಣದ ಒಳಗೆ ಜಾಗ ಸಿಗದ ಕಾರಣ ಸವಾರರು ರಸ್ತೆ ಮತ್ತು ಫುಟ್ಪಾತ್ಗಳ ಮೇಲೆಯೇ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದು, ಗಾಂಧಿ ಬಜಾರ್ನಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹದಗೆಟ್ಟಿದೆ.
ಇದನ್ನೂ ಓದಿ: 35 ಸಾವಿರ ರೂಗೆ ಬೆಂಗಳೂರಿನಲ್ಲಿ ಆರಾಮ ಜೀವನ ನಡೆಸ್ಬಹುದು; ತಿಂಗಳ ಖರ್ಚು ವೆಚ್ಚ ಬಿಚ್ಚಿಟ್ಟ ಸಾಫ್ಟ್ವೇರ್ ಇಂಜಿನಿಯರ್
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯ ಉದ್ದೇಶವನ್ನೇ ಗುತ್ತಿಗೆದಾರ ಗಾಳಿಗೆ ತೂರಿದ್ದು, ಬಿಬಿಎಂಪಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಅಕ್ರಮ ಬಾಡಿಗೆ ದಂಧೆಯನ್ನು ನಿಲ್ಲಿಸಬೇಕು ಹಾಗೂ ಗುತ್ತಿಗೆದಾರನ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಸಾರ್ವಜನಿಕರು ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ