
ಬೆಂಗಳೂರು, ಜೂನ್ 16: ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್ಮೇಲ್ (Government Officers Blackmail) ಮಾಡಿ ಹಣ ವಸೂಲಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ (Lokayukta Police) ವಿಚಾರಣೆ ವೇಳೆ ಮಾಜಿ ಹೆಡ್ಕಾನ್ಸ್ಟೇಬಲ್, ಆರೋಪಿ ನಿಂಗಪ್ಪ ಸ್ಫೋಟಕ ಮಾಹಿತಿ ಹೇಳಿದ್ದಾನೆ. ಬ್ಲ್ಯಾಕ್ಮೇಲ್ ಮಾಡಿ ಹಲವು ಅಧಿಕಾರಿಗಳಿಂದ ಪಡೆದ ಹಣವನ್ನು ಬಿಟ್ಕಾಯಿನ್ನಲ್ಲಿ ಹೂಡಿಕೆ ಮಾಡಿದ್ದಾಗಿ ಹೇಳಿದ್ದಾನೆ. ಆರೋಪಿ ನಿಂಗಪ್ಪ ದಾಳಿ ಮಾಡುವುದಾಗಿ ಹೆದರಿಸಿ ಸರ್ಕಾರಿ ಅಧಿಕಾರಿಗಳಿಗೆ ಹೆದರಿಸಿ, ಅವರಿಂದ ಶೇಷಾದ್ರಿಪುರಂ, ಆನಂದರಾವ್ ವೃತ್ತ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಣ ಪಡೆದಿದ್ದರು ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.
ಅಲ್ಲದೆ, ಆರೋಪಿ ನಿಂಗಪ್ಪ ಇಬ್ಬರು ಸಚಿವರ ಆಪ್ತ ಸಹಾಯಕರ ಹೆಸರುಗಳನ್ನು ಸಹಿತ ಲೋಕಾಯುಕ್ತ ಪೊಲೀಸರಿಗೆ ಮುಂದೆ ಹೇಳಿದ್ದಾನೆ. ಈ ಪ್ರಕರಣದಲ್ಲಿ ಸಚಿವರಿಬ್ಬರ ಆಪ್ತ ಸಹಾಯಕರ ಪಾತ್ರ ಏನು ಎಂಬುವುದು ಇನ್ನೂ ಬಹಿರಂಗವಾಗಬೇಕಿದೆ.
ಪೊಲೀಸ್ ಕಸ್ಟಡಿ ಅವಧಿ ಮಂಗಳವಾರಕ್ಕೆ (ಜೂ.17) ಅಂತ್ಯವಾಗುಲಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸೋಮವಾರ (ಜೂ.16) ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಲೋಕಾಯುಕ್ತ ನ್ಯಾಯಾಲಯ14 ದಿನಗಳ ಕಾಲ (ಜೂನ್ 30) ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇದೇ ವೇಳೆ ನಿಂಗಪ್ಪ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದರು. ನ್ಯಾಯಾಲಯ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದೆ.
ಇನ್ನು, ಆರೋಪಿ ನಿಂಗಪ್ಪ ಹೇಳಿರುವಂತೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆ ಇಬ್ಬರು ಸಚಿವರ ಆಪ್ತ ಸಹಾಯಕರು ಯಾರು, ಈ ಪ್ರಕರಣದಲ್ಲಿ ಅವರು ಹೇಗೆ ಭಾಗಿಯಾಗಿದ್ದಾರೆ ಮತ್ತು ಸಚಿವರ ಆಪ್ತ ಸಹಾಯಕರ ಹೆಸರುಗಳು ಬಹಿರಂಗವಾಗಬೇಕಿದೆ. ಒಂದು ವೇಳೆ ಸಚಿವರ ಆಪ್ತ ಸಹಾಯಕರು ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಭೀತಾದರೇ ಅಥವಾ ಸಚಿವರ ಹೆಸರುಗಳು ಬಹಿರಂಗಗೊಂಡರೆ ಸರ್ಕಾರಕ್ಕೆ ಮತ್ತಷ್ಟು ಮುಜುಗರ ಉಂಟಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಮರುನಾಮಕರಣಗೊಂಡರೂ ಬದಲಾಗಿಲ್ಲ ರಾಮನಗರದ ಸರ್ಕಾರಿ ಕಚೇರಿಗಳ ನಾಮಫಲಕ
ಪೊಲೀಸ್ ಇಲಾಖೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿದ್ದ ನಿಂಗಪ್ಪ, ಕೆಲ ವರ್ಷಗಳ ಹಿಂದೆ ಸೇವೆಯಿಂದ ವಜಾಗೊಂಡಿದ್ದನು. ಬಳಿಕ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದನು. ಈ ಸಂಬಂಧ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.