ಲೋಕಾಯುಕ್ತ ಸಿಬ್ಬಂದಿಯೇ ಅಕ್ರಮದಲ್ಲಿ ಶಾಮೀಲು, ಕೇಳಿಬಂತು ಸಚಿವರ ಪಿಎ ಹೆಸರು: ‘ಕೈ’ ಸರ್ಕಾರಕ್ಕೆ ಮತ್ತೊಂದು ಮುಜುಗರದ ಆತಂಕ
ಭ್ರಷ್ಟರ ಹೆಡೆಮುರಿ ಕಟ್ಟುವ ಲೋಕಾಯುಕ್ತ ಅಧಿಕಾರಿಗಳ ವಿರುದ್ಧವೇ ಇದೀಗ ಗಂಭೀರ ಆರೋಪ ಕೇಳಿಬಂದಿದೆ. ಅಕ್ರಮವೊಂದರಲ್ಲಿ ಲೋಕಾಯುಕ್ತರೇ ಶಾಮೀಲಾಗಿರುವ ಆರೋಪ ಕೇಳಿಬಂದಿದೆ. ಸದ್ಯ ಲೋಕಾಯುಕ್ತ ಎಸ್ಪಿಯನ್ನು ರಾಜ್ಯ ಸರ್ಕಾರ ಕರ್ತವ್ಯದಿಂದ ರಿಲೀವ್ ಮಾಡಿದೆ. ಅಷ್ಟೇ ಅಲ್ಲದೆ ಇಬ್ಬರು ಸಚಿವರ ಆಪ್ತ ಕಾರ್ಯದರ್ಶಿಗಳ ಹೆಸರೂ ತಳುಕು ಹಾಕಿಕೊಂಡಿದೆ.

ಬೆಂಗಳೂರು, ಜೂನ್ 16: ಇದು ಒಂದು ರೀತಿಯಲ್ಲಿ ‘ಬೇಲಿಯೇ ಎದ್ದು ಹೊಲ ಮೇದಂತೆ’. ಏಕೆಂದರೆ ಲೋಕಾಯುಕ್ತರೇ (Lokayukta) ಅಕ್ರಮದಲ್ಲಿ ಶಾಮೀಲಾಗಿರುವ ಆರೋಪ ಕೇಳಿಬಂದಿದೆ. ಆ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ ಎದುರಾಗುವ ಆತಂಕ ಶುರುವಾಗಿದೆ. ಅಕ್ರಮದಲ್ಲಿ ಶಾಮೀಲಾಗಿರುವ ಲೋಕಾಯುಕ್ತ ಎಸ್ಪಿಯನ್ನು ರಾಜ್ಯ ಸರ್ಕಾರ (Government) ಕರ್ತವ್ಯದಿಂದ ರಿಲೀವ್ ಕೂಡ ಮಾಡಿದ್ದು, ಪೊಲೀಸರು ಬಂಧಿಸಿದ್ದಾರೆ.
ಇನ್ನು ಬಂಧನಕ್ಕೆ ಒಳಗಾಗಿರುವ ಲೋಕಾಯುಕ್ತ ಎಸ್ಪಿ, ಇಬ್ಬರು ಸಚಿವರ ಆಪ್ತ ಕಾರ್ಯದರ್ಶಿಗಳ ಹೆಸರು ಉಲ್ಲೇಖಿಸಿದ್ದಾರೆ. ಅಕ್ರಮದಲ್ಲಿ ಕೈಜೋಡಿಸಿದ್ದಾರೆಂದು ಮಾಹಿತಿ ಬಿಚ್ಚಿಟ್ಟಿದ್ದಾರೆ. ಆ ಮೂಲಕ ಅವರು ಕೂಡ ಅಕ್ರಮದಲ್ಲಿ ಶಾಮೀಲಾಗಿರುವ ಗುಮಾನಿ ಕೇಳಿಬಂದಿದೆ. ಒಂದು ವೇಳೆ ಸಚಿವರ ಹೆಸರು ಬಹಿರಂಗಗೊಂಡರೆ ಸರ್ಕಾರಕ್ಕೆ ಮತ್ತಷ್ಟು ಮುಜುಗರ ಉಂಟಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ನಮ್ಮನ್ನು ಬ್ಯಾನ್ ಮಾಡಬೇಡಿ’: ರಾಹುಲ್ ಗಾಂಧಿ, ಸಿದ್ದರಾಮಯ್ಯಗೆ ಪತ್ರ ಬರೆದ ಬೈಕ್ ಟ್ಯಾಕ್ಸಿ ಅಸೋಸಿಯೇಷನ್
ಸದ್ಯ ಸಚಿವರ ಆಪ್ತ ಕಾರ್ಯದರ್ಶಿಗಳ ಪಾತ್ರದ ಬಗ್ಗೆ ಗುಮಾನಿ ಎದ್ದಿದ್ದು, ಇದು ಸರ್ಕಾರದ ವಿರುದ್ಧ ವಿಪಕ್ಷಕ್ಕೆ ಮತ್ತೊಂದು ಅಸ್ತ್ರ ದೊರೆಯುವ ಸಾಧ್ಯತೆ ಇದೆ. ಈ ಮುಂಚೆ ಕೂಡ ಲೋಕಾಯುಕ್ತರೇ ಅಕ್ರಮದಲ್ಲಿ ಶಾಮೀಲಾಗಿದ್ದಕ್ಕೆ ಸಿಎಂ ಸಿದ್ದರಾಮಯ್ಯರ ಮೊದಲ ಅವಧಿಯಲ್ಲೂ ಸರ್ಕಾರಕ್ಕೆ ಮುಜುಗರ ಉಂಟಾಗಿತ್ತು.
ಕೋಲಾರದಲ್ಲಿ ಏಕಕಾಲಕ್ಕೆ ಎರಡು ಕಡೆ ಲೋಕಾ ದಾಳಿ
ಇನ್ನು ಇತ್ತೀಚೆಗೆ ಕೋಲಾರದಲ್ಲಿ ಏಕಕಾಲಕ್ಕೆ ಎರಡು ಸ್ಥಳಗಳಲ್ಲಿ ಲಂಚಬಾಕ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಕೋಲಾರ ಜಿಲ್ಲಾಧಿಕಾರಿ ಕಚೇರಿ ಹಾಗೂ ಮುಳಬಾಗಿಲು ನಂಗಲಿ ಪೊಲೀಸ್ ಠಾಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ಮಾಡಿದ್ದರು. ನಂಗಲಿ ಪೊಲೀಸ್ ಠಾಣೆಯ ಪಿಎಸ್ಐ ಅರ್ಜುನ್ಗೌಡ ಹಾಗೂ ಎಸ್.ಬಿ. ಕಾನ್ಸ್ಟೆಬಲ್ ಸುರೇಶ್ ಲೋಕಾಯುಕ್ತ ಅಧಿಕಾರಿಗಳು ತೋಡಿದ್ದ ಖೆಡ್ಡಾಕ್ಕೆ ಬಿದ್ದಿದ್ದರು.
ಇದನ್ನೂ ಓದಿ: ತುಮಕೂರು: ರಾಷ್ಟ್ರಮಟ್ಟದ ವಿದ್ಯಾರ್ಥಿವೇತನಕ್ಕೆ ಸಿದ್ದಗಂಗಾ ಮಠದ ಆರು ವಿದ್ಯಾರ್ಥಿಗಳು ಆಯ್ಕೆ
ಬಾರ್ ಓನರ್ ಪ್ರಶಾಂತ್ ಎಂಬುವರಿಂದ ತಿಂಗಳ ಮಾಮೂಲಿ ಪಡೆಯುವ ವೇಳೆ ಲೋಕಾ ಬಲೆಗೆ ನಂಗಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಾಗೂ ಪೊಲೀಸ್ ಪೇದೆ ಲೋಕಾಯುಕ್ತ ಬಲೆಗೆ ಬೀಳಿಸಿದ್ದರು. ಇನ್ನೂ ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿರಸ್ತೇದಾರ್ ಚಂದ್ರಪ್ಪ ಹಾಗೂ ಕಂದಾಯ ನಿರೀಕ್ಷಕ, ಸರ್ಕಾರಿ ನೌಕರರ ಸಂಘದ ಕೋಲಾರ ಜಿಲ್ಲಾ ಅಧ್ಯಕ್ಷ ಸಹಾಯಕ ಅಜಯ್ ಅನುಪಸ್ಥಿತಿಯಲ್ಲಿ ಸಹಾಯಕ ಮುನಿರಾಜು ಲಂಚ ಪಡೆಯುವ ವೇಳೆ ಲೋಕಾ ಬಲೆಗೆ ಬಿದಿದ್ದರು. ಭೂ ಪರಿವರ್ತನೆಗಾರಿ ಮಂಜುನಾಥ್ ಎಂಬುವವರಿಂದ 25 ಸಾವಿರ ರೂ ಹಣದ ಬೇಡಿಕೆ ಇಟ್ಟಿದ್ದ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಎನ್ನಲಾಗಿತ್ತು. ಪಿಎಸ್ಐ ಅರ್ಜುನ್ಗೌಡ ಮತ್ತು ಸುರೇಶ್ ಪೊಲೀಸರ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:37 am, Mon, 16 June 25








