ಎಚ್ಚೆತ್ತುಕೊಳ್ಳದ ಬಿಬಿಎಂಪಿ: ರಾಮಸ್ವಾಮಿ ಪಾಳ್ಯದ ರೆಸಿಡೆನ್ಶಿಯಲ್ ಏರಿಯಾದಲ್ಲಿ ತಲೆ ಎತ್ತುತ್ತಿದೆ ಅನಧಿಕೃತ ಆಸ್ಪತ್ರೆ ಕಟ್ಟಡ

ಬಾಬುಸ್​ ಪಾಳ್ಯದಲ್ಲಿ ಅನಧಿಕೃತ ಕಟ್ಟಡ ಕುಸಿದು 9 ಮಂದಿ ಸಾವನ್ನಪ್ಪಿದ್ದರೂ ಬಿಬಿಎಂಪಿ ಮಾತ್ರ ಅನಧಿಕೃತ ಕಟ್ಟಡಗಳ ಬಗ್ಗೆ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಕಮ್ಮನಹಳ್ಳಿಯ ರಾಮಸ್ವಾಮಿಪಾಳ್ಯದಲ್ಲಿ ತಲೆ ಎತ್ತುತ್ತಿರುವ ಆರಂತಸ್ತಿನ ಆಸ್ಪತ್ರೆ ಕಟ್ಟಡ ಇದೀಗ ಇಡೀ ಏರಿಯಾ ಜನರ ನಿದ್ದೆಗೆಡಿಸಿದೆ.

ಎಚ್ಚೆತ್ತುಕೊಳ್ಳದ ಬಿಬಿಎಂಪಿ: ರಾಮಸ್ವಾಮಿ ಪಾಳ್ಯದ ರೆಸಿಡೆನ್ಶಿಯಲ್ ಏರಿಯಾದಲ್ಲಿ ತಲೆ ಎತ್ತುತ್ತಿದೆ ಅನಧಿಕೃತ ಆಸ್ಪತ್ರೆ ಕಟ್ಟಡ
ರಾಮಸ್ವಾಮಿ ಪಾಳ್ಯದ ಬಡಾವಣೆ ಪ್ರದೇಶದಲ್ಲಿ ತಲೆ ಎತ್ತುತ್ತಿದೆ ಅನಧಿಕೃತ ಆಸ್ಪತ್ರೆ ಕಟ್ಟಡ
Edited By:

Updated on: Nov 04, 2024 | 10:52 AM

ಬೆಂಗಳೂರು, ನವೆಂಬರ್ 4: ಬೆಂಗಳೂರು ನಗರದಲ್ಲಿ ಅನಧಿಕೃತ ಕಟ್ಟಡಗಳ ಹಾವಳಿ ಹೆಚ್ಚಾಗುತ್ತಿದ್ದರೂ ಬಿಬಿಎಂಪಿ ಇನ್ನೂ ಎಚ್ಚೆತ್ತುಕೊಂಡಿರುವತಂತೆ ಕಾಣಿಸುತ್ತಿಲ್ಲ. ಕಮ್ಮನಹಳ್ಳಿಯ ರಾಮಸ್ವಾಮಿಪಾಳ್ಯದಲ್ಲಿ ಆರಂತಸ್ತಿನ ಆಸ್ಪತ್ರೆ ಕಟ್ಟಡ ತಲೆ ಎತ್ತುತ್ತಿದ್ದು, ಇದೀಗ ಇಡೀ ಪ್ರದೇಶದ ಜನರ ನಿದ್ದೆಗೆಡಿಸಿದೆ. ಇರುವ ನಿಯಮಗಳನ್ನೆಲ್ಲ ಉಲ್ಲಂಘಿಸಿ ಕಟ್ಟಡ ತಲೆ ಎತ್ತುತ್ತಿದ್ದರೆ, ಮತ್ತೊಂದೆಡೆ ರೆಸಿಡೆನ್ಸಿಯಲ್ ಏರಿಯಾದಲ್ಲಿ ನಿರ್ಮಾಣವಾಗುತ್ತಿರುವ ಈ ಆಸ್ಪತ್ರೆ ಕಟ್ಟಡ ಅಕ್ಕಪಕ್ಕದ ನಿವಾಸಿಗಳಿಗೆ ಮತ್ತಷ್ಟು ಸಂಕಷ್ಟ ತಂದಿಟ್ಟಿದೆ. ಸತತ ನಾಲ್ಕು ವರ್ಷಗಳಿಂದ ಇಲ್ಲಿನ ಜನರು ಕಟ್ಟಡ ನಿರ್ಮಾಣ ಬೇಡ ಎಂದು ಹೋರಾಟ ನಡೆಸ್ತಿದ್ದರೂ ಕೂಡ ಪಾಲಿಕೆ ಮೌನವಾಗಿರುವುದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

ಇತ್ತೀಚೆಗಷ್ಟೇ ಬಾಬುಸ್​ ಪಾಳ್ಯದ ಅನಧಿಕೃತ ಕಟ್ಟಡ ಕುಸಿದು 9 ಜನ ಕಾರ್ಮಿಕರು ಬಲಿಯಾಗಿದ್ದರು. ಇದಾದ ಬಳಿಕ ರಾಜಧಾನಿಯ ಅನಧಿಕೃತ ಕಟ್ಟಡಗಳ ಬಗ್ಗೆ ಸರ್ವೇ ಮಾಡಿ ಕ್ರಮ ಕೈಗೊಳ್ಳುವಂತೆ ಡಿಸಿಎಂ ಡಿಕೆ ಶಿವಕುಮಾರ್ ಬಿಬಿಎಂಪಿಗೆ ಖಡಕ್ ಸೂಚನೆ ನೀಡಿದ್ದರು. ಆದರೆ, ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಪಾಲಿಕೆ ಬೊಬ್ಬೆಹಾಕಿದರೂ ರಾಜಧಾನಿಯ ಅನಧಿಕೃತ ಕಟ್ಟಡಗಳಿಗೆ ಮಾತ್ರ ಕಡಿವಾಣ ಬಿದ್ದಿಲ್ಲ.

ಕಮ್ಮನಹಳ್ಳಿಯ ರಾಮಸ್ವಾಮಿಪಾಳ್ಯದಲ್ಲಿಅನಧಿಕೃತ ಆಸ್ಪತ್ರೆ ಕಟ್ಟಡ ತಲೆ ಎತ್ತುತ್ತಿರುವ ಬಗ್ಗೆ ಪಾಲಿಕೆ ಅಧಿಕಾರಿಗಳು ಕಂಡರೂ ಕಾಣದಂತಿದ್ದಾರೆ. 15 ಅಡಿ ಚಿಕ್ಕ ರಸ್ತೆಯಲ್ಲಿ ಕಟ್ಟಡ ನಿರ್ಮಿಸಲಾಗ್ತಿದ್ದು, ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಅವರು ಹೋರಾಟಕ್ಕಿಳಿದಿದ್ದಾರೆ.

ವೈದ್ಯಕೀಯ ತ್ಯಾಜ್ಯದ ಸಮಸ್ಯೆಗೂ ಇಲ್ಲ ಪರಿಹಾರ

ಈ ಆಸ್ಪತ್ರೆ ಕಟ್ಟಡದ ಪಕ್ಕದಲ್ಲಿ ಈಗಾಗಲೇ ಇದೇ ಕಟ್ಟಡದ ಮಾಲೀಕ ಕ್ಲಿನಿಕ್ ನಡೆಸುತ್ತಿದ್ದಾರೆ. ಮೆಡಿಕಲ್ ತ್ಯಾಜ್ಯ, ಸಿರಿಂಜ್​ಗಳನ್ನು ಸರಿಯಾಗಿ ಸಂಸ್ಕರಣೆ ಮಾಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಕ್ಕಪಕ್ಕದ ಮನೆಗಳಿಗೆ ಮೆಡಿಕಲ್ ತ್ಯಾಜ್ಯ ತೂರಿಬರುತ್ತಿದೆ. ಜೊತೆಗೆ ಚಿಕ್ಕರಸ್ತೆಯಲ್ಲೇ ರೋಗಿಗಳ ವಾಹನ ಪಾರ್ಕಿಂಗ್ ಮಾಡುವುದರಿಂದ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿಬಿಟ್ಟಿದ್ದಾರೆ. ಅಲ್ಲದೇ ತಡರಾತ್ರಿ ತನಕ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿರುವುದು ಸಂಕಷ್ಟ ತಂದಿಟ್ಟಿದೆ. ಆಸ್ಪತ್ರೆಯ ಕಾಟಕ್ಕೆ ಸುಸ್ತಾದ ನಿವಾಸಿಗಳು, ನಿಯಮಗಳನ್ನ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಆಸ್ಪತ್ರೆ ಬೇಡ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಾಬುಸಾಬ್​ ​ಪಾಳ್ಯ ಕಟ್ಟಡ ಕುಸಿತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಉಷಾ ಆಸ್ಪತ್ರೆ ಹೆಸರಿನ ಈ ಕಟ್ಟಡ, ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಬಗ್ಗೆ ಸ್ಥಳೀಯರು 2019 ರಲ್ಲೇ ಬಿಬಿಎಂಪಿಗೆ ದೂರು ನೀಡಿದ್ದರು. ಆಗ, ಪಾಲಿಕೆ ಕೂಡ ಕಟ್ಟಡ ಕಾಮಗಾರಿ ನಿಲ್ಲಿಸಬೇಕು ಎಂದು ಆದೇಶ ಕೊಡ ಹೊರಡಿಸಿತ್ತು. ಆದರೆ, ಇದೀಗ ಕಟ್ಟಡ ನಿರ್ಮಾಣವಾಗುತ್ತಿದೆ. ಇತ್ತ ಕೆಲ ಪಾಲಿಕೆ ಅಧಿಕಾರಿಗಳು ಕೂಡ ಮಾಲೀಕರ ಜೊತೆ ಕೈಜೋಡಿಸಿದ್ದಾರೆ. ನಿಯಮ ಉಲ್ಲಂಘಿಸಿದರೂ ಅವರ ಮೇಲೆ ಕ್ರಮವಾಗುತ್ತಿಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ