ಪ್ರಿಯಕರನ ಮೇಲೆಯೇ ರಾಬರಿ ಮಾಡಿಸಿ ಹೈಡ್ರಾಮ​; ಯುವತಿ ಸೇರಿ ನಾಲ್ವರ ಬಂಧನ

ಬೆಂಗಳೂರಿನಲ್ಲಿ ಪ್ರಿಯತಮೆಯೇ ಸಿನಿಮೀಯ ರೀತಿಯಲ್ಲಿ ಪ್ರಿಯಕರನ ಮೇಲೆ ರಾಬರಿ ಮಾಡಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ. ಈ ಕುರಿತು ತನಿಖೆ ಕೈಗೊಂಡಿದ್ದ ಬೆಳ್ಳಂದೂರು ಪೊಲೀಸರು ಯುವತಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸತ್ಯಾಂಶ ಬಯಲಾಗಿದೆ.

ಪ್ರಿಯಕರನ ಮೇಲೆಯೇ ರಾಬರಿ ಮಾಡಿಸಿ ಹೈಡ್ರಾಮ​; ಯುವತಿ ಸೇರಿ ನಾಲ್ವರ ಬಂಧನ
ಎಸ್ಪಿ, ಬಂಧಿತ ಆರೋಪಿಗಳು
Edited By: ಕಿರಣ್ ಹನುಮಂತ್​ ಮಾದಾರ್

Updated on: Sep 28, 2024 | 3:26 PM

ಬೆಂಗಳೂರು, ಸೆ.28: ಪ್ರಿಯತಮೆಯೇ ಸಿನಿಮೀಯ ರೀತಿಯಲ್ಲಿ ಪ್ರಿಯಕರನ ಮೇಲೆ ರಾಬರಿ ಮಾಡಿಸಿ, ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರಿನಲ್ಲಿ(Bengaluru) ನಡೆದಿದೆ. ಇದೀಗ ಕಳ್ಳತನ ಮಾಡಿಸಿದ ಟೆಕ್ಕಿ ಶೃತಿ ಸೇರಿ ನಾಲ್ವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ಸೆಪ್ಟೆಂಬರ್ 20 ರಂದು ಪ್ರಿಯಕರ ವಂಶಿಕೃಷ್ಣರೆಡ್ಡಿ ಎಂಬಾತ ಶೃತಿ ಭೇಟಿಗೆ ತೆರಳಿದ್ದ. ಅದರಂತೆ ಭೇಟಿಯಾಗಿ ಆಕೆಯನ್ನು ಕರೆದುಕೊಂಡು ಹೊರಬರುತ್ತಿದ್ದಂತೆ ಸ್ವಿಫ್ಟ್ ಕಾರಿನಲ್ಲಿ ಬಂದವರು, ವಂಶಿಕೃಷ್ಣನ ಬೈಕ್​ಗೆ ಡಿಕ್ಕಿ ಹೊಡೆದಿದ್ದಾರೆ.

ವಂಶಿ ಮುಂದೆ ಡ್ರಾಮ ಮಾಡಿದ ಯುವತಿ

ಈ ವೇಳೆ ಜಗಳ ತೆಗೆದು ಆತನ ಬಳಿಯಿದ್ದ ಮೊಬೈಲ್ ಕಸಿದುಕೊಂಡಿದ್ದಾರೆ. ಅಲ್ಲದೇ ವಂಶಿಕೃಷ್ಣನ ಜೊತೆಯಲ್ಲಿಯೇ ಇದ್ದ ಶೃತಿಯ ಮೊಬೈಲ್​ನ್ನು ಸಹ ಕಸಿದು ಕೊಂಡಿದ್ದಾರೆ. ನಂತರ ದೂರು ಕೊಡುವುದು ಬೇಡ, ಮೊಬೈಲ್ ಹೋದರೆ ಹೋಗಲಿ ಎಂದು ಪ್ರಿಯತಮೆ ಶೃತಿ, ವಂಶಿ ಮುಂದೆ ಡ್ರಾಮ ಮಾಡಿದ್ದಾಳೆ. ಆದರೂ, ವಂಶಿಕೃಷ್ಣ ಬೆಳ್ಳಂದೂರು ಠಾಣೆಗೆ ಕಾರಿನ ನಂಬರ್ ಸಮೇತ ದೂರು ನೀಡಿದ್ದರು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಇದನ್ನೂ ಓದಿ:ಬೆಂಗಳೂರಲ್ಲಿ‌ ಹದಗೆಟ್ಟ ಕಾನೂನು ಸುವ್ಯವಸ್ಥೆ; ಡೆಲಿವರಿ ಬಾಯ್ ಅಡ್ಡಗಟ್ಟಿ ರಾಬರಿ, ತಲ್ವಾರ್​ನಿಂದ ಹೊಡೆದು ಅಟ್ಟಹಾಸ

ರಾಬರಿಗೆ ಕಾರಣವೇನು?

ಪೊಲೀಸರ ವಿಚಾರಣೆ ವೇಳೆ ಶೃತಿಯೇ ಬೈಕ್​ಗೆ ಡಿಕ್ಕಿ ಮಾಡಿ ಮೊಬೈಲ್ ಕಸಿದುಕೊಳ್ಳಲಿಕ್ಕೆ ಹೇಳಿದ್ದಳು ಎಂಬುದನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಹೌದು, ಇತ್ತೀಚೆಗೆ ವಂಶಿಕೃಷ್ಣನಿಂದ ದೂರವಾಗಲು ಶೃತಿ ಯತ್ನಿಸುತ್ತಿದ್ದಳು. ಆದರೆ, ವಂಶಿಕೃಷ್ಣನ ಮೊಬೈಲ್​ನಲ್ಲಿ ಇಬ್ಬರು ಜೊತೆಗಿದ್ದ ಫೋಟೋಗಳಿದ್ದವು. ಈ ಹಿನ್ನಲೆ ಫೋಟೋಸ್​, ವಿಡಿಯೋಸ್ ಡಿಲೀಟ್ ಮಾಡಿಸಲಿಕ್ಕೆ ಒಂದೂವರೆ ಲಕ್ಷ ಹಣ ಕೊಟ್ಟು ಮೊಬೈಲ್ ರಾಬರಿ ಮಾಡುವ ಖರ್ತನಾಕ್ ಪ್ಲಾನ್ ಮಾಡಿರುವುದು ತನಿಖೆ ಬಳಿಕ ತಿಳಿದಿದೆ.  ಸಧ್ಯ ಬೆಳ್ಳಂದೂರು ಪೊಲೀಸರಿಂದ ಟೆಕ್ಕಿ ಶೃತಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us