ರಾಜ್ಯಸಭಾ ಚುನಾವಣೆಗೆ ‘ಕೈ’ನಲ್ಲಿ ಭಾರಿ ಪೈಪೋಟಿ: ಮುಂಚೂಣಿಯಲ್ಲಿವೆ ಕೆಲ ನಾಯಕರ ಹೆಸರು

ಜೂನ್ 18ರಂದು ನಡೆಯಲಿರುವ ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಶುರುವಾಗಿದೆ. ಸುಪ್ರಿಯಾ ಶ್ರೀನೇಟ್ ಮತ್ತು ಪವನ್ ಖೇರಾ ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ ಪಕ್ಷದ ಕೆಲ ನಾಯಕರು, ಕರ್ನಾಟಕದ ನಾಯಕರಿಗೆ ಅವಕಾಶ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮಾಜಿ ಶಾಸಕರು ಮತ್ತು ಮಾಜಿ ರಾಜ್ಯಸಭಾ ಸದಸ್ಯರು ಸೇರಿ ಹಲವು ಪ್ರಮುಖರ ಹೆಸರುಗಳೂ ರೇಸ್​​ನಲ್ಲಿವೆ.

ರಾಜ್ಯಸಭಾ ಚುನಾವಣೆಗೆ ಕೈನಲ್ಲಿ ಭಾರಿ ಪೈಪೋಟಿ: ಮುಂಚೂಣಿಯಲ್ಲಿವೆ ಕೆಲ ನಾಯಕರ ಹೆಸರು
ಸಾಂದರ್ಭಿಕ ಚಿತ್ರ
Image Credit source: mathrubhumi.com

Updated on: May 24, 2026 | 9:14 AM

ಬೆಂಗಳೂರು, ಮೇ 24: ಜೂನ್ 18ರಂದು ನಡೆಯಲಿರುವ ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಕಾಂಗ್ರೆಸ್​​ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದ್ದು, ಪಕ್ಷದ ರಾಷ್ಟ್ರೀಯ ನಾಯಕರುಗಳಾದ ಸುಪ್ರಿಯಾ ಶ್ರಿನೇಟ್ ಮತ್ತು ಪವನ್​​ ಖೇರಾ ಅವರ ಹೆಸರುಗಳು ಮುಂಚೂಣಿಯಲ್ಲಿವೆ ಎನ್ನಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕದಿಂದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಸೇರಿದಂತೆ ಹಾಲಿ ಶಾಸಕರ ಅವಧಿ ಪೂರ್ಣಗೊಂಡ ನಂತರ ಜೂನ್ ಮತ್ತು ಜುಲೈನಲ್ಲಿ 24 ಸ್ಥಾನಗಳು ತೆರವಾಗಲಿರುವ ಹಿನ್ನೆಲೆ ಪೈಪೋಟಿ ಜೋರಾಗಿದೆ.

ಮುಖ್ಯಾಂಶಗಳು

  • ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್​​ನಲ್ಲಿ ಭಾರಿ ಪೈಪೋಟಿ
  • ಕರ್ನಾಟಕದಿಂದ ಸುಪ್ರಿಯಾ, ಖೇರಾ ಹೆಸರು ಮುಂಚೂಣಿಯಲ್ಲಿ
  • ಬಿ.ಕೆ. ಹರಿಪ್ರಸಾದ್​​ ಸೇರಿ ಪೈಪೋಟಿಯಲ್ಲಿವೆ ಹಲವರ ಹೆಸರು

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಈ ಇಬ್ಬರು ನಾಯಕರು ರಾಜ್ಯ ಕಾಂಗ್ರೆಸ್ ಘಟಕದೊಂದಿಗೆ ಸಕ್ರಿಯವಾಗಿ ಕೆಲಸ ಮಾಡಿದ್ದ ಹಿನ್ನೆಲೆ ಅವರನ್ನು ರಾಜ್ಯಸಭೆ ಚುನಾವಣೆಗೆ ಪರಿಗಣಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಜೊತೆಗೆ ಜೂನ್ 30ರಂದು ವಿಧಾನ ಪರಿಷತ್ ಸದಸ್ಯತ್ವ ಅವಧಿ ಮುಗಿಯಲಿರುವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್​​ ಹೆಸರೂ ರಾಜ್ಯಸಭಾ ಚುನಾವಣೆ ಸಂಬಂಧ ಕೇಳಿಬರುತ್ತಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಶಾಶ್ವತ ಸದಸ್ಯರಾಗಿರುವ ಹರಿಪ್ರಸಾದ್, ಹರಿಯಾಣದ ಎಐಸಿಸಿ ಉಸ್ತುವಾರಿಯೂ ಆಗಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆ

ಆದರೆ ಪಕ್ಷದ ಕೆಲ ನಾಯಕರು, ಸುಪ್ರಿಯಾ ಶ್ರೀನೇಟ್ ಮತ್ತು ಪವನ್ ಖೇರಾ ಅವರನ್ನು ಅವರವರ ರಾಜ್ಯಗಳಿಂದಲೇ ರಾಜ್ಯಸಭೆಗೆ ಕಳುಹಿಸಬೇಕು. ಕರ್ನಾಟಕದ ನಾಯಕರಿಗೆ ಅವಕಾಶ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನಿತರ ಆಕಾಂಕ್ಷಿಗಳ ಪಟ್ಟಿಯಲ್ಲಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮೋಹನ್ ಕಟಾರ್ಕಿ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್​​, ಮಾಜಿ ರಾಜ್ಯಸಭಾ ಸದಸ್ಯ ರಾಜೀವ್​​ ಗೌಡ, ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಬಿ.ಸಿ. ಮುದ್ದುಗಂಗಾಧರ್ ಹಾಗೂ ಮಾಜಿ ಕೇಂದ್ರ ಸಚಿವ ಕೆ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿ ಖಾನ್ ಅವರ ಹೆಸರುಗಳೂ ಚರ್ಚೆಯಲ್ಲಿವೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:11 am, Sun, 24 May 26

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us