ಐಪಿಎಲ್ ಉದ್ಘಾಟನಾ ಪಂದ್ಯ: ‘ಬೆಂಗಳೂರು ಮಾಡೆಲ್’ ಯಶಸ್ಸಿಗೆ ಮುಂಬೈ-ಕೋಲ್ಕತ್ತಾ ಫಿದಾ!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಟ್ರಾಫಿಕ್ ಮತ್ತು ಜನಸಂದಣಿ ನಿರ್ವಹಿಸಿದ ರೀತಿ ಈಗ ದೇಶಕ್ಕೆ ಮಾದರಿಯಾಗಿದೆ. ಟಿಕೆಟ್ ಜೊತೆ ಮೆಟ್ರೋ ಸೌಲಭ್ಯ ನೀಡಿದ ಬೆಂಗಳೂರು ಪೊಲೀಸರ ಮತ್ತು ಕೆಎಸ್‌ಸಿಎ ಕಾರ್ಯವೈಖರಿಯನ್ನು ಮುಂಬೈ ಹಾಗೂ ಕೋಲ್ಕತ್ತಾ ಕ್ರಿಕೆಟ್ ಮಂಡಳಿಗಳು ಮೆಚ್ಚಿಕೊಂಡಿದ್ದು, ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿವೆ.

ಐಪಿಎಲ್ ಉದ್ಘಾಟನಾ ಪಂದ್ಯ: ‘ಬೆಂಗಳೂರು ಮಾಡೆಲ್’ ಯಶಸ್ಸಿಗೆ ಮುಂಬೈ-ಕೋಲ್ಕತ್ತಾ ಫಿದಾ!
ಎಂ.ಚಿನ್ನಸ್ವಾಮಿ ಕ್ರೀಡಾಂಗಣ
Image Credit source: @RCBTweets
Edited By:

Updated on: Apr 02, 2026 | 8:57 AM

ಬೆಂಗಳೂರು, ಏಪ್ರಿಲ್ 2: ಸಿಲಿಕಾನ್ ಸಿಟಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಈಗ ಕೇವಲ ಕ್ರಿಕೆಟ್ ಪಂದ್ಯಗಳಿಗಷ್ಟೇ ಅಲ್ಲ, ಸುಸಜ್ಜಿತ ಜನಸಂದಣಿ ನಿರ್ವಹಣೆಗೂ (Crowd Management) ಮಾದರಿಯಾಗಿ ಹೊರಹೊಮ್ಮಿದೆ. ಆರ್​ಸಿಬಿ (RCB) ವಿಜಯೋತ್ಸವ ಕಾಲ್ತುಳಿತ ಘಟನೆಯಿಂದ ಇಡೀ ದೇಶದ ಗಮನ ಸೆಳೆದಿದ್ದ, ಜನಸಂದಣಿ ನಿರ್ವಹಣೆಯಲ್ಲಿ ವಿಫಲವಾಗಿದ್ದ ಬೆಂಗಳೂರು ಅದಾಗಿ ಒಂದು ವರ್ಷದ ಒಳಗೇ ದೇಶದ ಇತರ ರಾಜ್ಯಗಳ ಹುಬ್ಬೇರುವಂತೆ ಮಾಡಿದೆ. ಇತ್ತೀಚೆಗೆ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದ ಅದ್ಭುತ ವ್ಯವಸ್ಥೆಯನ್ನು ಕಂಡು ಮುಂಬೈ ಮತ್ತು ಕೋಲ್ಕತ್ತಾದಂತಹ ಮೆಟ್ರೋ ಪಾಲಿಟನ್ ನಗರಗಳ ಕ್ರಿಕೆಟ್ ಆಡಳಿತ ಮಂಡಳಿಗಳು ಬೆಂಗಳೂರು ಮಾದರಿಯ ಮಾಹಿತಿಯನ್ನು ಕೋರಿವೆ.

ಕಳೆದ ವರ್ಷ ಆರ್‌ಸಿಬಿ ಐಪಿಎಲ್ ವಿಜಯೋತ್ಸವ ಕಾರ್ಯಕ್ರಮದ ವೇಳೆ ನಡೆದ ಕಾಲ್ತುಳಿತ ಮತ್ತು ಗೊಂದಲದ ಪರಿಸ್ಥಿತಿಯಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮತ್ತು ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡಿತ್ತು. ಆ ಕಹಿ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ ಆಡಳಿತ ಮಂಡಳಿ, ಈ ಬಾರಿ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಮೈದಾನದ ಒಳಗೆ ಮತ್ತು ಹೊರಗೆ ಯಾವುದೇ ನೂಕುನುಗ್ಗಲು ಉಂಟಾಗದಂತೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಇದು ಗಮನ ಸೆಳೆದಿದೆ.

ಐಪಿಎಲ್ ಟಿಕೆಟ್​​ನಲ್ಲಿ ಮೆಟ್ರೋ ಕ್ಯೂಆರ್ ಕೋಡ್: ದೇಶಾದ್ಯಂತ ಮೆಚ್ಚುಗೆ

ಬೆಂಗಳೂರಿನ ಈ ಯಶಸ್ಸಿನ ಹಿಂದೆ ಇದ್ದ ಪ್ರಮುಖ ಸೂತ್ರವೆಂದರೆ ‘ಮ್ಯಾಚ್ ಟಿಕೆಟ್ ಜೊತೆಯೇ ಮೆಟ್ರೋ ಟಿಕೆಟ್’ ಸೌಲಭ್ಯ. ಕ್ರಿಕೆಟ್ ಟಿಕೆಟ್ ಖರೀದಿಸಿದವರಿಗೇ ಮೆಟ್ರೋ ಪ್ರಯಾಣದ ಕ್ಯೂಆರ್ ಕೋಡ್ (QR Code) ನೀಡಿದ ವ್ಯವಸ್ಥೆಗೆ ಮುಂಬೈ ಮತ್ತು ಕೋಲ್ಕತ್ತಾ ಕ್ರಿಕೆಟ್ ಮಂಡಳಿಗಳು ಮಾರುಹೋಗಿವೆ. ಇದರಿಂದ ಸ್ಟೇಡಿಯಂ ಸುತ್ತಮುತ್ತ ಖಾಸಗಿ ವಾಹನಗಳ ಹಾವಳಿ ಕಡಿಮೆಯಾಗಿ, ಟ್ರಾಫಿಕ್ ಸಮಸ್ಯೆ ಗಣನೀಯವಾಗಿ ತಗ್ಗಿದೆ.

ಐಪಿಎಲ್ ಪಂದ್ಯಗಳಿಗಾಗಿ ಮುಂದಿನ ಯೋಜನೆಗಳೇನು?

ಮೆಟ್ರೋ ಯಶಸ್ಸಿನ ಬೆನ್ನಲ್ಲೇ, ಮುಂದಿನ ಪಂದ್ಯಗಳ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಿಂದ ನೇರವಾಗಿ ಮೆಜೆಸ್ಟಿಕ್‌ಗೆ ವಿಶೇಷ ಬಸ್ ವ್ಯವಸ್ಥೆ ಮಾಡಲು ಬಿಎಂಟಿಸಿ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಮತ್ತೊಂದೆಡೆ, ನಕಲಿ ಟಿಕೆಟ್ ಹಾವಳಿಗೆ ಬ್ರೇಕ್ ಹಾಕಲೂ ಕ್ರಮ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಸಿಸಲು ಬರುವವರಿಗೆ ಹೊಸ ರೂಲ್ಸ್! ಅಭಿಮಾನಿಗಳೇ ಈ ವಿಚಾರ ತಿಳಿದಿರಿ

1,500 ರೂಪಾಯಿ ಮುಖಬೆಲೆಯ ಟಿಕೆಟ್‌ಗಳಲ್ಲಿ ನಕಲಿ ಹಾವಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಇನ್ನು ಮುಂದೆ ಕಡಿಮೆ ಬೆಲೆಯ ಟಿಕೆಟ್‌ಗಳನ್ನು ಕೇವಲ ಆನ್‌ಲೈನ್‌ನಲ್ಲಿ ಮಾತ್ರ ಮಾರಾಟ ಮಾಡಲು ಚಿಂತನೆ ನಡೆಸಲಾಗಿದೆ. ಆಫ್‌ಲೈನ್ ಕೌಂಟರ್‌ಗಳಲ್ಲಿ ಉಂಟಾಗುವ ಜನಸಂದಣಿ ತಪ್ಪಿಸಲು ಇದು ಸಹಕಾರಿಯಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us