
ಬೆಂಗಳೂರು, ಆಗಸ್ಟ್ 30: ಉಗ್ರ ಸಂಘಟನೆ ಐಸಿಸ್ (ISIS) ಜೊತೆ ಸೇರಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣದ ಸೂತ್ರಧಾರಿ ಸೈಯದ್ ಫಸಿಯುರ್ ರೆಹಮಾನ್ಗೆ ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿಶೇಷ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ಹಾಗೂ 48 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
2020ರ ಜನವರಿ 10ರಂದು ಬೆಂಗಳೂರು ಪೊಲೀಸರು ರೆಹಮಾನ್ ವಿರುದ್ಧ ಮೊದಲು ಪ್ರಕರಣ ದಾಖಲಿಸಿದ್ದರು. ಬಳಿಕ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಎನ್ಐಎ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ‘ಅಲ್-ಹಿಂದ್ ಐಸಿಸ್’ ಸಂಚಿಗೆ ಸಂಬಂಧಿಸಿದಂತೆ ಎನ್ಐಎ ತೀವ್ರ ವಿಚಾರಣೆ ನಡೆಸಿ, ಇದುವರೆಗೆ ಒಟ್ಟು 20 ಆರೋಪಿಗಳ ವಿರುದ್ಧ 3 ಚಾರ್ಜ್ಶೀಟ್ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಹನೀಫ್ ಖಾನ್ ಈಗಾಗಲೇ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಈ ಭಯೋತ್ಪಾದಕ ಜಾಲದ ಮುಖ್ಯ ಸೂತ್ರಧಾರಿಯಾಗಿದ್ದ ಮೆಹಬೂಬ್ ಪಾಷಾಗೂ ಶಿಕ್ಷೆಯಾಗಿದೆ. ಬೆಂಗಳೂರಿನ ಗುರುಪ್ಪನಪಾಳ್ಯದಲ್ಲಿದ್ದ ತನ್ನ ನಿವಾಸದಲ್ಲಿಯೇ ಮೆಹಬೂಬ್ ಪಾಷಾ ಹಲವು ಸಭೆಗಳನ್ನು ಮಾಡಿದ್ದ. ದೇಶವಿರೋಧಿ ಚಟುವಟಿಕೆಗಳನ್ನು ಹೆಚ್ಚಿಸುವುದು, ಕೋಮು ಗಲಭೆಗಳನ್ನು ಪ್ರಚೋದಿಸುವುದು ಹಾಗೂ ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ‘ಟಾರ್ಗೆಟ್ ಕಿಲ್ಲಿಂಗ್ಸ್’ ನಡೆಸಲು ಯೋಜನೆ ರೂಪಿಸಲಾಗಿತ್ತು.
ಇನ್ನು ಮೆಹಬೂಬ್ ಪಾಷಾ ನಡೆಸುತ್ತಿದ್ದ ಈ ಸಂಚಿನ ಸಭೆಗಳಲ್ಲಿ ಸೈಯದ್ ಫಸಿಯುರ್ ರೆಹಮಾನ್ ಸಕ್ರಿಯವಾಗಿ ಭಾಗವಹಿಸುತ್ತಿದ್ದ. ಅಷ್ಟೇ ಅಲ್ಲದೆ, ಅಲ್-ಹಿಂದ್ ಗುಂಪಿನ ಸದಸ್ಯರಿಗೆ ಕಾಡಿನಲ್ಲಿ ತರಬೇತಿ ನೀಡಲು ಆತ ನೆರವಾಗಿದ್ದ. ಇದಕ್ಕಾಗಿ ಸ್ಪೋರ್ಟ್ಸ್ ಶೋರೂಮ್ಗೆ ತೆರಳಿ ಟೆಂಟ್ಗಳು ಹಾಗೂ ಚಾಕುಗಳನ್ನು ಖರೀದಿಸಿ ತಂದುಕೊಟ್ಟಿದ್ದ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.
ಇದನ್ನೂ ಓದಿ: ಪಾಕಿಸ್ತಾನದ ಗ್ಯಾಂಗ್ಸ್ಟರ್ಗಳ ಜೊತೆ ಸಂಪರ್ಕ: ದೊಡ್ಡಬಳ್ಳಾಪುರದಲ್ಲಿ ಎಸಿ ಮೆಕ್ಯಾನಿಕ್ ಬಂಧನ!
ಭಾರತದಲ್ಲಿ ಐಸಿಸ್ ಪ್ರಾಂತ್ಯವನ್ನು ಸ್ಥಾಪಿಸುವುದೇ ಈ ಗುಂಪಿನ ಪ್ರಮುಖ ಉದ್ದೇಶವಾಗಿತ್ತು. ಸದ್ಯ ಸ್ಥಳೀಯ ಮಟ್ಟದಲ್ಲಿ ಕೃತ್ಯಕ್ಕೆ ಸಂಚು ರೂಪಿಸಿದ್ದವರಿಗೆ ಶಿಕ್ಷೆಯಾಗಿದ್ದು, ಇವರ ಹಿಂದಿದ್ದು ನಿರ್ದೇಶನ ನೀಡುತ್ತಿದ್ದ ಪ್ರಮುಖ ಆನ್ಲೈನ್ ಹ್ಯಾಂಡ್ಲರ್ನ ಪತ್ತೆಗಾಗಿ ತನಿಖಾ ಸಂಸ್ಥೆ ತನ್ನ ಶೋಧ ಕಾರ್ಯವನ್ನು ಮುಂದುವರಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.