ಸಿಎಂ ಕುರ್ಚಿ ಕದನ: ಅಖಾಡಕ್ಕಿಳಿದ ಡಿಕೆ ಬ್ರದರ್ಸ್​; ಕೊಟ್ಟ ಮಾತಿನ ವಿಚಾರ ಮತ್ತೆ ಮುನ್ನೆಲೆಗೆ

ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಕದನ ತೀವ್ರಗೊಂಡಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಪರ ಅವರ ಸಹೋದರ ಡಿ.ಕೆ. ಸುರೇಶ್ ಅಖಾಡಕ್ಕಿಳಿದಿದ್ದಾರೆ. ಸಿಎಂ ಸಿದ್ದರಾಮಯ್ಯ ನೀಡಿದ 'ಕೊಟ್ಟ ಮಾತು' ಉಳಿಸಿಕೊಳ್ಳುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿ, ತಮ್ಮ ಸಹೋದರನ ಮುಖ್ಯಮಂತ್ರಿ ಆಕಾಂಕ್ಷೆಯನ್ನು ಪುನರುಚ್ಚರಿಸಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಮತ್ತೆ ಹೊಸ ಚರ್ಚೆ ಹುಟ್ಟುಹಾಕಿದೆ.

ಸಿಎಂ ಕುರ್ಚಿ ಕದನ: ಅಖಾಡಕ್ಕಿಳಿದ ಡಿಕೆ ಬ್ರದರ್ಸ್​; ಕೊಟ್ಟ ಮಾತಿನ ವಿಚಾರ ಮತ್ತೆ ಮುನ್ನೆಲೆಗೆ
ಸಿಎಂ ಕುರ್ಚಿ ಕದನ ಮತ್ತೆ ಮುನ್ನೆಲೆಗೆ
Image Credit source: Tv9 Kannada
Edited By:

Updated on: Feb 11, 2026 | 2:38 PM

ಬೆಂಗಳೂರು, ಫೆಬ್ರವರಿ 11: ರಾಜ್ಯ ಕಾಂಗ್ರೆಸ್​​ನಲ್ಲಿ ಸಿಎಂ ಕುರ್ಚಿ ಫೈಟ್​ ಮತ್ತೆ ಮುನ್ನೆಗೆ ಬಂದಿದ್ದು ಅತ್ತ ಡಿಸಿಎಂ ಡಿ.ಕೆ. ಶಿವಕುಮಾರ್​​ ದೆಹಲಿಗೆ ಹಾರಿದ್ದರೆ, ಇತ್ತ ಡಿ.ಕೆ. ಸುರೇಶ್​ ಸಹೋದರನ ಪರ ಅಖಾಡಕ್ಕಿಳಿದಿದ್ದಾರೆ. ಕೊಟ್ಟ ಮಾತಿನ ವಿಚಾರವನ್ನು ಮತ್ತೆ ಪ್ರಸ್ತಾಪಿಸಿರುವ ಮಾಜಿ ಸಂಸದ, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಲ್ಪ ನಿಧಾನವಾದರೂ ಪರವಾಗಿಲ್ಲ ಕೊಟ್ಟ ಮಾತನ್ನು ಉಳಿಸಿಕೊಳ್ತಾರೆ. ಆ ಬಗ್ಗೆ ನನಗೆ ಈಗಲೂ ಭರವಸೆ ಇದೆ ಎಂದಿದ್ದಾರೆ.

ಡಿಕೆಶಿ ಪರ ಸಹೋದರನ ಬ್ಯಾಟಿಂಗ್​​


ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂದು ಕಾಂಗ್ರೆಸ್​​ ಎಂಎಲ್ಸಿ ಯತೀಂದ್ರ ಹೇಳಿಕೆ ಸಂಬಂಧವೂ ವ್ಯಂಗ್ಯವಾಡಿರುವ ಸುರೇಶ್​​, ಅವರು ಹೇಳಿದ ಮೇಲೆ ಅದೇ ವೇದ ವಾಕ್ಯ ಎಂದಿದ್ದಾರೆ. ಕಾಂಗ್ರೆಸ್​ ಪಕ್ಷದ ಕೆಲ ಶಾಸಕರಿಗೆ ಡಿಕೆಶಿ ವಿದೇಶ ಪ್ರವಾಸ ಆಯೋಜಿಸಿದ್ದಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ವಿದೇಶ ಪ್ರವಾಸಕ್ಕೂ ಡಿ.ಕೆ.ಶಿವಕುಮಾರ್​ಗೂ ಸಂಬಂಧವಿಲ್ಲ. ಯಾರು ವಿದೇಶ ಪ್ರವಾಸ ಹೋಗ್ತಿದ್ದಾರೆ ಅವರನ್ನೇ ನೀವು ಕೇಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ತಾರಕಕ್ಕೇರಲಿದೆ ಕುರ್ಚಿ ಕದನ; ಟೂರ್ ಪಾಲಿಟಿಕ್ಸ್ Vs ರೆಸಾರ್ಟ್ ಪಾಲಿಟಿಕ್ಸ್​ಗೆ ಬಣಗಳ ಸಿದ್ಧತೆ

‘ಹೊರಗಿನಿಂದ ಬಂದ ಅತಿಥಿಗಳಿಗೆ ಮೊದಲ ಆದ್ಯತೆ’

ನಿಗಮ ಮಂಡಳಿಯಲ್ಲಿ ಬಿಜೆಪಿ ಮುಖಂಡನಿಗೆ ಸ್ಥಾನ ನೀಡಿದ ವಿಚಾರವಾಗಿಯೂ ಸರ್ಕಾರದ ವಿರುದ್ಧ ಡಿ.ಕೆ.ಸುರೇಶ್ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಗೌರವಿಸುತ್ತದೆ ಅಂತಾಯ್ತಲ್ಲ. ರಾಜ್ಯ ಸರ್ಕಾರ ಎಲ್ಲರನ್ನೂ ಕೂಡ ಜೊತೆಗೆ ಕರೆದೊಯ್ಯಬೇಕು. ಕಾಂಗ್ರೆಸ್​ ಪಕ್ಷದ್ದು ಸರ್ವಧರ್ಮ ಪಾಲಿಸಿ ಅಲ್ವಾ? ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲರೂ ನಮ್ಮ ಪಕ್ಷದಲ್ಲೇ ಇದ್ದಾರೆ. ಹೀಗಾಗಿ ಎಲ್ಲ ವಿಚಾರದಲ್ಲೂ ಹೊರಗಿನಿಂದ ಬಂದ ಅತಿಥಿಗಳಿಗೆ ಮೊದಲ ಆದ್ಯತೆ ನೀಡುತ್ತೇವೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಎರಡನೇ‌ ಆದ್ಯತೆ ನೀಡಲಾಗುವುದು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ನಡೆ ಬಗ್ಗೆ ಕಿಡಿ ಕಾರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.