ಪ್ರಜಾಸೇವೆ ಅಭಿಯಾನದ ಮೊದಲ ಸಭೆಯಲ್ಲೇ 25 ಸಾವಿರಕ್ಕೂ ಹೆಚ್ಚು ದೂರುಗಳು!

ರಾಜ್ಯ ಸರ್ಕಾರದ 'ಪ್ರಜಾಸೇವೆ' ಅಭಿಯಾನದ ಮೊದಲ ಹಂತದ ಸಭೆಯಲ್ಲಿ ಸಾರ್ವಜನಿಕರಿಂದ 25000ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ. ಭೂಮಿ ಹಾಗೂ ಆಸ್ತಿ ವಿವಾದಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಗೆ ಅತ್ಯಧಿಕ ಅರ್ಜಿಗಳು ಬಂದಿದ್ದು, ಇವುಗಳನ್ನು ಬುಧವಾರ ಮೂರು ಹಂತಗಳಲ್ಲಿ ಪರಿಶೀಲಿಸಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪ್ರಜಾಸೇವೆ ಅಭಿಯಾನದ ಮೊದಲ ಸಭೆಯಲ್ಲೇ 25 ಸಾವಿರಕ್ಕೂ ಹೆಚ್ಚು ದೂರುಗಳು!
ಪ್ರಜಾಸೇವೆ ಅಭಿಯಾನದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಸಿಎಂ
Image Credit source: PTI

Updated on: Sep 08, 2026 | 9:11 AM

ಮುಖ್ಯಾಂಶಗಳು

  • ಪ್ರಜಾಸೇವೆ ಅಭಿಯಾನದ ಮೊದಲ ಸಭೆಯಲ್ಲಿ 25 ಸಾವಿರಕ್ಕೂ ಹೆಚ್ಚು ದೂರು ಸಲ್ಲಿಕೆಯಾಗಿವೆ.
  • ಭೂಮಿ ಮತ್ತು ಆಸ್ತಿ ಸಮಸ್ಯೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಗೆ ಗರಿಷ್ಠ ದೂರು.
  • ಸ್ವೀಕೃತ ಅರ್ಜಿಗಳನ್ನು ಅಧಿಕಾರಿಗಳು ಮೂರು ಹಂತಗಳಲ್ಲಿ ಪರಿಶೀಲಿಸಿ ಶೀಘ್ರವೇ ವಿಲೇವಾರಿ ಮಾಡಲಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 08: ರಾಜ್ಯ ಸರ್ಕಾರದ ನೂತನ ‘ಪ್ರಜಾಸೇವೆ’ ಅಭಿಯಾನದ ಚೊಚ್ಚಲ ಸಭೆಯಲ್ಲೇ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಶನಿವಾರ ರಾಜ್ಯಾದ್ಯಂತ ನಡೆದ ಮೊದಲ ಸುತ್ತಿನ ಪ್ರಜಾಸೇವೆ ದೂರು ಕುಂದುಕೊರತೆ ಸಭೆಗಳಲ್ಲಿ 40ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳಿಗೆ ಒಟ್ಟು 25,000ಕ್ಕೂ ಹೆಚ್ಚು ಕುಂದುಕೊರತೆ ಹಾಗೂ ವಿನಂತಿ ಅರ್ಜಿಗಳು ಸಲ್ಲಿಕೆಯಾಗಿವೆ.

ಕಂದಾಯ ಇಲಾಖೆಗೆ ಅತ್ಯಧಿಕ ದೂರು

ಒಟ್ಟು ಸಲ್ಲಿಕೆಯಾದ ಅರ್ಜಿಗಳಲ್ಲಿ 23,524 ಕುಂದುಕೊರತೆ ದೂರುಗಳಾಗಿದ್ದರೆ, 2,258 ವಿವಿಧ ವಿನಂತಿ ಅರ್ಜಿಗಳಾಗಿವೆ. ಮುಖ್ಯಮಂತ್ರಿಗಳ ಕಚೇರಿ ನೀಡಿದ ಮಾಹಿತಿಯಂತೆ, ಭೂಮಿ ಮತ್ತು ಆಸ್ತಿ ವಿವಾದಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಅಗ್ರಸ್ಥಾನದಲ್ಲಿದ್ದು, ಬರೋಬ್ಬರಿ 9,013 ಅರ್ಜಿಗಳು (8,385 ದೂರುಗಳು, 628 ವಿನಂತಿಗಳು) ಸಲ್ಲಿಕೆಯಾಗಿವೆ. ಇದರ ನಂತರ ವಸತಿ ಇಲಾಖೆ 4,079, ನಗರಾಭಿವೃದ್ಧಿ ಇಲಾಖೆ 3,919, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 3,494 ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 1,423 ಅರ್ಜಿಗಳನ್ನು ಸ್ವೀಕರಿಸಿವೆ. ಈ ಐದು ಇಲಾಖೆಗಳು ಮಾತ್ರವೇ 1,000ಕ್ಕೂ ಹೆಚ್ಚು ಅರ್ಜಿಗಳನ್ನು ಪಡೆದುಕೊಂಡಿವೆ.

ಮೂರು ಹಂತದ ಪರಿಶೀಲನೆ ಮತ್ತು ಮುಂದಿನ ನಡೆ

ಜನರ ಮನೆ ಬಾಗಿಲಿಗೇ ಆಡಳಿತ ತಲುಪಿಸುವ ಉದ್ದೇಶದಿಂದ ಹಳೆಯ ‘ಸಕಾಲ’ ಯೋಜನೆಯನ್ನು ಮರುರೂಪಿಸಿ ‘ಪ್ರಜಾಸೇವೆ’ ಜಾರಿಗೆ ತರಲಾಗಿದೆ. ಗ್ರಾಮ ಪಂಚಾಯಿತಿ, ಹೊಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ‘ಗ್ರಾಮ ಒನ್’ ಮತ್ತು ‘ಕರ್ನಾಟಕ ಒನ್’ ಕೇಂದ್ರಗಳ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಸಲ್ಲಿಕೆಯಾದ ಎಲ್ಲ ದೂರುಗಳನ್ನು ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ತಾಲೂಕು, ಉಪವಿಭಾಗ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಮೂರು ಹಂತಗಳಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಮುಂದಿನ ಶನಿವಾರದಿಂದ ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ತಾಲೂಕು ಮತ್ತು ಹೋಬಳಿ ಮಟ್ಟದ ಸಭೆಗಳು ಮುಂದುವರಿಯಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:08 am, Tue, 8 September 26

Loading...
Unable to load recommendations.
Follow Us