ದಾಖಲೆ ಬರೆದ ರಾಜ್ಯದ ವಿದ್ಯುತ್ ಬೇಡಿಕೆ: ಬೆಂಗಳೂರಿನ ಎಸಿ ಅಬ್ಬರಕ್ಕೆ ಬೆವರುತ್ತಿದೆ ಪವರ್ ಗ್ರಿಡ್!

ಕರ್ನಾಟಕವು ಈ ತಿಂಗಳು ದಾಖಲೆ ಮಟ್ಟದ ವಿದ್ಯುತ್ ಬೇಡಿಕೆಯನ್ನು ಎದುರಿಸುತ್ತಿದೆ. ಬೇಸಿಗೆಯ ತೀವ್ರ ಶಾಖ, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಎಸಿ ಬಳಕೆ ಹಾಗೂ ಗ್ರಾಮೀಣ ಭಾಗದಲ್ಲಿ ನೀರಾವರಿ ಪಂಪ್‌ಸೆಟ್‌ಗಳಿಂದ ಇದು 373.6 ಮಿಲಿಯನ್ ಯೂನಿಟ್ ತಲುಪುವ ನಿರೀಕ್ಷೆಯಿದೆ. ಸರ್ಕಾರ ಸೌರಶಕ್ತಿ, ವಿದ್ಯುತ್ ಹಂಚಿಕೆ ಒಪ್ಪಂದ ಹಾಗೂ ಹೆಚ್ಚುವರಿ ಉತ್ಪಾದನೆಯ ಮೂಲಕ ಪರಿಸ್ಥಿತಿ ನಿಭಾಯಿಸಲು ಕ್ರಮ ಕೈಗೊಂಡಿದೆ.

ದಾಖಲೆ ಬರೆದ ರಾಜ್ಯದ ವಿದ್ಯುತ್ ಬೇಡಿಕೆ: ಬೆಂಗಳೂರಿನ ಎಸಿ ಅಬ್ಬರಕ್ಕೆ ಬೆವರುತ್ತಿದೆ ಪವರ್ ಗ್ರಿಡ್!
ಸಾಂದರ್ಭಿಕ ಚಿತ್ರ

Updated on: Mar 30, 2026 | 11:35 AM

ಬೆಂಗಳೂರು, ಮಾ.30: ಕರ್ನಾಟಕ ರಾಜ್ಯವು ಈ ತಿಂಗಳು ತನ್ನ ಇತಿಹಾಸದಲ್ಲೇ ಅತಿ ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಎದುರಿಸುತ್ತಿದೆ. ಬಿಸಿಲಿನ ತಾಪ ಮತ್ತು ಹೆಚ್ಚುತ್ತಿರುವ ಎಸಿ (AC) ಬಳಕೆ ಹೈಟೆಕ್ ಸಿಟಿ ಬೆಂಗಳೂರನ್ನು ಅಕ್ಷರಶಃ ವಿದ್ಯುತ್ ಗುಳುಂ ಮಾಡುವ ದೈತ್ಯನನ್ನಾಗಿ ಮಾಡಿದೆ. ಈ ತಿಂಗಳು ರಾಜ್ಯದ ಒಟ್ಟು ವಿದ್ಯುತ್ ಬಳಕೆ 373.6 ಮಿಲಿಯನ್ ಯೂನಿಟ್ ತಲುಪುವ ನಿರೀಕ್ಷೆಯಿದೆ, ಇದು ಇದುವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.

ಒಂದು ಸಣ್ಣ ರಾಜ್ಯ ಬಳಸುವಷ್ಟು ವಿದ್ಯುತ್ ಅನ್ನು ಕೇವಲ ಬೆಂಗಳೂರು ನಗರವೊಂದೇ ಬಳಸುತ್ತಿದೆ. ನಗರದ ಐಟಿ ಆಫೀಸ್‌ಗಳು, ಮಾಲ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ದಿನವಿಡೀ ಎಸಿಗಳು ಓಡುತ್ತಿರುವುದರಿಂದ ಬೆಂಗಳೂರಿನ ಪೀಕ್ ಡಿಮ್ಯಾಂಡ್ 2,000 ರಿಂದ 2,500 ಮೆಗಾವ್ಯಾಟ್ (MW) ತಲುಪಿದೆ. ಒಂದು ಮೆಗಾವ್ಯಾಟ್‌ನಿಂದ ಸುಮಾರು 800 ರಿಂದ 1,000 ಮನೆಗಳಿಗೆ ವಿದ್ಯುತ್ ನೀಡಬಹುದು ಎನ್ನುವುದನ್ನು ಗಮನಿಸಿದರೆ ನಗರದ ಬೇಡಿಕೆ ಎಷ್ಟು ಬೃಹತ್ ಎಂಬುದು ತಿಳಿಯುತ್ತದೆ.

ಮಾರ್ಚ್ ತಿಂಗಳಲ್ಲಿ ಎರಡು ಪ್ರಮುಖ ಕಾರಣಗಳಿಂದಾಗಿ ವಿದ್ಯುತ್ ಜಾಲದ (Grid) ಮೇಲೆ ಒತ್ತಡ ಹೆಚ್ಚಿದೆ. ಬೇಸಿಗೆಯ ಶಾಖದಿಂದಾಗಿ ನಗರವಾಸಿಗಳು ಎಸಿಗಳ ಮೇಲೆ ಅವಲಂಬಿತರಾಗಿದ್ದಾರೆ.ಗ್ರಾಮೀಣ ಕರ್ನಾಟಕದಲ್ಲಿ ರೈತರು ಬೇಸಿಗೆ ಬೆಳೆಗಾಗಿ ನೀರಾವರಿ ಪಂಪ್‌ಸೆಟ್‌ಗಳನ್ನು ನಿರಂತರವಾಗಿ ಬಳಸುತ್ತಿದ್ದಾರೆ.ಅಡುಗೆ ಅನಿಲದ ಕೊರತೆಯೂ ವಿದ್ಯುತ್ ಬೇಡಿಕೆ ಹೆಚ್ಚಲು ಕಾರಣವಾಗಬಹುದು. ಹೋಟೆಲ್‌ಗಳು ಮತ್ತು ಮನೆಗಳು ಗ್ಯಾಸ್ ಬದಲು ಇಂಡಕ್ಷನ್ ಸ್ಟೌವ್ ಅಥವಾ ಹೀಟರ್‌ಗಳಿಗೆ ಬದಲಾದರೆ, ಗ್ರಿಡ್ ಮೇಲೆ ಮತ್ತೆ 400 ರಿಂದ 500 ಮೆಗಾವ್ಯಾಟ್ ಹೆಚ್ಚುವರಿ ಹೊರೆ ಬೀಳುವ ಆತಂಕವಿದೆ.

ಇದನ್ನೂ ಓದಿ: ಹೋಟೆಲ್ ಬಿಲ್‌ನಲ್ಲಿ ಗ್ಯಾಸ್ ಶುಲ್ಕ, ಎಲ್‌ಪಿಜಿ ಫೀಸ್ ಹಾಕುವಂತಿಲ್ಲ: ಬೆಂಗಳೂರಿನ ಹೋಟೆಲ್‌ಗಳಿಗೆ ಸಿಸಿಪಿಎ ಖಡಕ್​ ಸೂಚನೆ!

ಇನ್ನು ವಿದ್ಯುತ್ ಅಭಾವ ತಲೆದೋರದಂತೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಹಗಲಿನ ಸಮಯದಲ್ಲಿ ಸೌರಶಕ್ತಿಯಿಂದ ಸುಮಾರು 7,000–7,500 ಮೆಗಾವ್ಯಾಟ್ ಪೂರೈಕೆಯಾಗುತ್ತಿದೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದೊಂದಿಗೆ ಕರ್ನಾಟಕವು ವಿದ್ಯುತ್ ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ಈಗ ಅಲ್ಲಿಂದ ವಿದ್ಯುತ್ ಪಡೆದು, ಮಳೆಗಾಲದಲ್ಲಿ ನಮ್ಮಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾದಾಗ ಅವರಿಗೆ ಮರಳಿ ನೀಡಲಾಗುತ್ತದೆ.ಏಪ್ರಿಲ್ 1 ರಿಂದ ಖಾಸಗಿ ಉಷ್ಣ ವಿದ್ಯುತ್ ಸ್ಥಾವರಗಳಿಂದ ಹೆಚ್ಚುವರಿ 1,000 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಾಗಲಿದೆ. ಏಪ್ರಿಲ್ ಆರಂಭದ ವೇಳೆಗೆ ರೈತರು ಬೆಳೆ ಕಟಾವು ಮಾಡುವುದರಿಂದ ಮತ್ತು ಪ್ರೀ-ಮಾನ್ಸೂನ್ ಮಳೆ ಆರಂಭವಾಗುವುದರಿಂದ ವಿದ್ಯುತ್ ಬೇಡಿಕೆ ಕೊಂಚ ತಗ್ಗುವ ನಿರೀಕ್ಷೆಯಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us