ನ.5ರ ಒಳಗೆ ಡೀಸೆಲ್ ದರ ಕಡಿಮೆ ಮಾಡದಿದ್ದರೆ ಮುಷ್ಕರ: ಲಾರಿ ಮಾಲೀಕರ ಸಂಘದಿಂದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ

ಪ್ರತಿ ಲೀಟರ್ ಡೀಸೆಲ್ ಬೆಲೆಯನ್ನು ₹ 10 ಕಡಿಮೆ ಮಾಡಬೇಕು. ಇದಕ್ಕೆ ನವೆಂಬರ್ 5ರ ಗಡುವು ನೀಡಲಾಗಿದೆ ಎಂದು ಆಗ್ರಹಿಸಿದರು.

ನ.5ರ ಒಳಗೆ ಡೀಸೆಲ್ ದರ ಕಡಿಮೆ ಮಾಡದಿದ್ದರೆ ಮುಷ್ಕರ: ಲಾರಿ ಮಾಲೀಕರ ಸಂಘದಿಂದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ
ಲಾರಿಗಳು
Edited By:

Updated on: Oct 24, 2021 | 3:00 PM

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಬೇಕು ಎಂಬ ಒತ್ತಾಯ ರಾಜ್ಯದಾದ್ಯಂತ ಕೇಳಿ ಬರುತ್ತಿದೆ. ಈ ಕೂಗನ್ನು ಸರ್ಕಾರಕ್ಕೆ ತಲುಪಿಸುವ ಪ್ರಯತ್ನವನ್ನು ಲಾರಿ ಮಾಲೀಕರ ಸಂಘ ಮಾಡಿದೆ. ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಠಿ ನಡೆಸಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಪ್ರತಿ ಲೀಟರ್ ಡೀಸೆಲ್ ಬೆಲೆಯನ್ನು ₹ 10 ಕಡಿಮೆ ಮಾಡಬೇಕು. ಇದಕ್ಕೆ ನವೆಂಬರ್ 5ರ ಗಡುವು ನೀಡಲಾಗಿದೆ ಎಂದು ಆಗ್ರಹಿಸಿದರು. ಬೆಲೆ ಏರಿಕೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿದ ಅವರು, ಲಾರಿ ಮಾಲೀಕರ ಸಂಕಷ್ಟ ಪರಿಸ್ಥಿತಿಯನ್ನು ತೆರೆದಿಟ್ಟರು.

ಪರ್ಮಿಟ್​ ಅವಧಿಯನ್ನು ಜನವರಿ ಅಂತ್ಯದವರೆಗೂ ವಿಸ್ತರಿಸಬೇಕು. ಲೋಡಿಂಗ್ ಮತ್ತು ಅನ್​ಲೋಡಿಂಗ್​ನಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು. ಲೋಡಿಂಗ್​ ಮತ್ತು ಅನ್​ಲೋಡಿಂಗ್​ ಹಂತದಲ್ಲಿ ಹಲವು ಸಮಸ್ಯೆಗಳಿವೆ. ಆರ್​ಟಿಒ ಹಾಗೂ ಪೊಲೀಸ್ ಕಿರುಕುಳ ತಪ್ಪಿಸಬೇಕು ಎಂದು ಆಗ್ರಹಿಸಿದರು. ಓವರ್​ಲೋಡ್ ತಪ್ಪಿಸಬೇಕು ಎಂದು ಲಾರಿ ಮಾಲೀಕರ ಸಂಘವೂ ಒತ್ತಾಯಿಸುತ್ತಿದೆ. ಆದರೆ ಆರ್​ಟಿಒ ಅಧಿಕಾರಿಗಳು ಲಂಚ ತೆಗೆದುಕೊಂಡು ಓವರ್​ಲೋಡ್ ಲಾರಿಗಳನ್ನು ಬಿಟ್ಟು ಕಳಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ಸರ್ಕಾರ ತಕ್ಷಣ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.

ಅಧಿಕಾರಿಗಳ ಕಿರುಕುಳ ತಪ್ಪಬೇಕು ಎಂದು ಒತ್ತಾಯಿಸಿ ನ.5ರಂದು ರಾಜ್ಯದ ಎಲ್ಲ ಆರ್​ಟಿಒ ಕಚೇರಿ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಬೇಡಿಕೆ ಈಡೇರದಿದ್ದರೆ ನ.15ಕ್ಕೆ ಲಾರಿ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದರು.

ಅ.23ರ ಗಡುವು ಕೊಟ್ಟಿದ್ದ ಸಂಘ
ಪೆಟ್ರೋಲ್ (Petrol), ಡೀಸೆಲ್ (Diesel) ಬೆಲೆ ಏರಿಕೆ ಖಂಡಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದ ಲಾರಿ ಮಾಲೀಕರ ಸಂಘ (Lorry Owners Association) ಕಳೆದ ವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಅಕ್ಟೋಬರ್ 23ರ ಗಡುವು ನೀಡಿತ್ತು. ರಾಜ್ಯ ಸರ್ಕಾರವು ಡೀಸೆಲ್ ಮೇಲೆ ವಿಧಿಸಿರುವ ವ್ಯಾಟ್ ಕಡಿಮೆ ಮಾಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಸರಕು ಸಾಗಣೆ ವಾಹನಗಳ ಓಡಾಟ ನಿಲ್ಲುತ್ತದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡಲು ಸರ್ಕಾರಕ್ಕೆ ಮುಂದಿನ ವಾರದವರೆಗೆ ಲಾರಿ ಮಾಲೀಕರ ಸಂಘ ಡೆಡ್​ಲೈನ್ ಕೊಟ್ಟಿದೆ. ಈಗಾಗಲೇ ಒಂದು ವರ್ಷದಲ್ಲಿ ಬೆಲೆ ₹ 26 ಹೆಚ್ಚಳವಾಗಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಲಾರಿ ಮುಷ್ಕರ ನಡೆಸಲು ಚಿಂತನೆ ನಡೆಸಿದೆ. ಲಾರಿ ಮುಷ್ಕರವಾದರೆ ಜನಜೀವನ ಅಸ್ತವ್ಯಸ್ತವಾಗುತ್ತದೆ. ಅಗತ್ಯ ವಸ್ತುಗಳ ಬೆಲೆ ಈಗಾಗಲೇ ಹೆಚ್ಚಾಗಿದೆ. ಗೂಡ್ಸ್ ಲಾರಿಗಳ ಓಡಾಟ ಸ್ಥಗಿತವಾದರೆ ಎಲ್ಲ ರೀತಿಯ ವಸ್ತುಗಳ ಸರಬರಾಜು ಬಂದ್ ಆಗಲಿದೆ. ಹಾಲು, ಹಣ್ಣು, ತರಕಾರಿ, ಹೂ, ದಿನಸಿ ಪದಾರ್ಥಗಳು ಸೇರಿದಂತೆ ಎಲ್ಲ ಸರಕು ಸಾಗಾಣಿಕೆಗೆ ಸಮಸ್ಯೆಯಾಗುತ್ತದೆ. ಇದರಿಂದಾಗಿ ಮತ್ತಷ್ಟು ಬೆಲೆ ಹೆಚ್ಚಾಗುವ ಸಾಧ್ಯತೆಯೂ ಇದೆ.

ಬೆಲೆ ಇಳಿಕೆ ಬಗ್ಗೆ ಸುಳಿವು ನೀಡಿದ ಸಿಎಂ
ಕಳೆದ ಅಕ್ಟೋಬರ್ 17ರಂದು ಹಾನಗಲ್ ಉಪಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದರು. ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುವ ಸುಳಿವು ನೀಡಿದ್ದಾರೆ. ತೈಲ ಬೆಲೆ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ರಾಜ್ಯದ ಆರ್ಥಿಕತೆ ಸುಧಾರಣೆಯಾದರೆ ಉಪಚುನಾವಣೆ ಬಳಿಕ ಬೆಲೆ ಇಳಿಕೆ ಮಾಡುವ ಬಗ್ಗೆ ಚಿಂತನೆಯಿದೆ ಅಂತ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು ಡಿಸಿಪಿ ಕಾರಿನ ಮೇಲೆ ಮರಳು ಲಾರಿ ಹತ್ತಿಸಲು ಯತ್ನ: ಚಾಲಕನ ಬಂಧನ
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯಾದ್ಯಂತ ಲಾರಿ ಮುಷ್ಕರಕ್ಕೆ ನಿರ್ಧಾರ!

Follow Us